ಕೆ.ಎನ್‌. ರಾಜಣ್ಣ ಅವರನ್ನು ಸಂಪುಟಕ್ಕೆ ಮರುಸೇರ್ಪಡೆಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Aug 19, 2025, 01:00 AM IST
18ಎಚ್ಎಸ್ಎನ್18 :  | Kannada Prabha

ಸಾರಾಂಶ

ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಹಾಗೂ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ತಮಟೆ ಬಾರಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

-ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಹಾಗೂ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹ

ಕನ್ನಡಪ್ರಭ ವಾರ್ತೆ ಹಾಸನ

ಸಚಿವ ಸಂಪುಟದಿಂದ ವಜಾಗೊಂಡ ಮಾಜಿ ಸಚಿವರಾದ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಪುನರ್ ಸೇರ್ಪಡೆ ಮಾಡಿಕೊಳ್ಳುವಂತೆ ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಹಾಗೂ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ತಮಟೆ ಬಾರಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾ ಪಂಚಾಯಿತಿ ಮುಂದೆ ಬಿ.ಎಂ. ರಸ್ತೆಯಲ್ಲಿ ನಿಂತು ರಸ್ತೆ ಮಧ್ಯೆ ಕೆಲ ಸಮಯ ಭಾಷಣ ಮಾಡಿ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಘೋಷಣೆ ಕೂಗಿದರು.

ಇದೇ ವೇಳೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ, ಈ ಘನ ಸರ್ಕಾರದಲ್ಲಿ ದಲಿತ ಹಿಂದುಳಿದ ಶೋಷಿತ ಸಾಮಾನ್ಯ ವರ್ಗದ ಬಡವರ ನಾಯಕರು ಆಗಿರುವ ನಮ್ಮೆಲ್ಲರ ಧ್ವನಿಯಾಗಿರುವ ನಮ್ಮ ನಾಯಕ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣನವರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ನಮ್ಮೆಲ್ಲರಿಗೂ ಬಹಳ ಆಘಾತವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಅವರು ಉಸ್ತುವಾರಿಯಾಗಿ ಬಂದ ನಂತರ ನಾವು ಪಕ್ಷಾತೀತವಾಗಿ ಬೇರೆ ಬೇರೆ ಪಕ್ಷದಲ್ಲಿದ್ದರೂ ಕೂಡ ರಾಜಣ್ಣನವರಿಗೋಸ್ಕರ ಕಾಂಗ್ರೆಸ್ ಪಕ್ಷಕ್ಕೆ ಬಂದು ಸಹಕಾರವನ್ನು ನೀಡಿ ಸಂಸದ ಶ್ರೇಯಸ್ ಪಟೇಲ ಅವರನ್ನು ಗೆಲ್ಲಿಸಿರುವುದೇ ಒಂದು ಉದಾಹರಣೆಯೆಂದು ತಾವು ಭಾವಿಸತಕ್ಕದ್ದು ಎಂದರು.27 ವರ್ಷಗಳ ನಂತರ ಹಾಸನದಲ್ಲಿ ಸಂಸದರನ್ನು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ಪಕ್ಷಾತೀತವಾಗಿ ನಾವೆಲ್ಲರೂ ಮಾಡಿದ್ದೇವೆ. ನೇರ ಮತ್ತು ದಿಟ್ಟ ನಡೆಯ ರಾಜಣ್ಣನವರ ಮಾತಿನಲ್ಲಿ ಒಂದಷ್ಟು ಗೊಂದಲಗಳಾಗಿರುವುದಕ್ಕೆ ನಾವು ಕೂಡ ವಿಷಾದಿಸುತ್ತೇವೆ. ರಾಜಣ್ಣರವರಂತಹ ಅಜಾತಶತ್ರು ನೇರ ನುಡಿಯ ನಾಯಕ ಬಾಯಿ ತಪ್ಪಿನಿಂದ ಮಾತನಾಡಿರುವುದು ನಮಗೂ ಕೂಡ ನೋವಾಗಿರುತ್ತದೆ.

ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ತೆಗೆದುಕೊಂಡಿರುವುದಕ್ಕೆ ದೊಡ್ಡ ಮಟ್ಟದ ಆಕ್ಷೇಪವನ್ನು ನಾವು ವ್ಯಕ್ತಪಡಿಸುವುದಿಲ್ಲ. ಬಾಯಿ ತಪ್ಪಿನಿಂದ ಆಗಿರುವ ಪ್ರಮಾದವನ್ನು ಪುನರ್ ಪರಿಶೀಲಿಸಿ ತಿಳಿವಳಿಕೆ ನೋಟಿಸ್ ನೀಡಿ ಎಚ್ಚರಿಕೆಯ ನೋಟಿಸ್ ಅನ್ನು ಕೂಡ ನೀಡಿ ಕ್ಷಮಾಪಣೆಯನ್ನು ನೀಡಿ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ರವರು ಮತ್ತು ಕರ್ನಾಟಕ ಉಸ್ತುವಾರಿಗಳಾದ ಮಾನ್ಯ ಸುರ್ಜೆವಾಲರವರು ಮತ್ತು ಕಾಂಗ್ರೆಸ್‌ನ ಎಲ್ಲಾ ಸಚಿವರು ಸಂಪುಟದ ಸಹೋದ್ಯೋಗಿಗಳು ಹೈಕಮಾಂಡ್‌ಗೆ ಮನವರಿಕೆಯನ್ನು ಮಾಡಿಕೊಡಿ.

ದಲಿತರ ಶೋಷಿತರ ನೋಂದವರ ಸಮಾಜದ ಬಡವರ ಪರವಾಗಿರುವ ಅವರನ್ನು ಸಂಪುಟಕ್ಕೆ ತೆಗೆದುಕೊಂಡು ಅವರ ಧ್ವನಿಯಾಗಿರುವ 80 ಕ್ಷೇತ್ರಗಳಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ವಾಲ್ಮೀಕಿ ಸಮಾಜದ ನಿರ್ಣಾಯಕ ಮತಗಳನ್ನು ಹೊಂದಿರುವ ನಮ್ಮೆಲ್ಲರ ಬಯಕೆಯನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರನ್ನು ಎಲ್ಲ ಶೋಷಿತ ವರ್ಗಗಳ ವರವಾಗಿ ಆಗ್ರಹಿಸುತ್ತೇವೆ ಮತ್ತು ಮನವಿ ಮಾಡುತ್ತೇವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಹಾಗೂ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟ್ಟದ ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಹನುಮಪ್ಪ ಗೊಲ್ಲರಹಳ್ಳಿ, ಮಧುನಾಯಕ್, ಬಿ.ಜಿ. ರಂಗನಾಯಕ, ವಿನಯ್ ದೀಪು, ದೇವರಾಜು, ಗಣೇಶ್ ನಾಯಕ್, ಚಂದ್ರಶೇಖರ್, ನಾಗರಾಜ್ ಹೆತ್ತೂರ್, ಬಸವನಾಯಕ್, ಶಿವಪ್ಪ ನಾಯಕ್, ಬಿ.ಕೆ. ಶಿವಮೂರ್ತಿ, ರಾಜನಾಯಕ್, ಹೆಚ್.ಕೆ. ಸಂದೇಶ್, ಟಿ.ಆರ್. ವಿಜಯಕುಮಾರ್, ಕೃಷ್ಣಕುಮಾರ್ ಇತರರು ಉಪಸ್ಥಿತರಿದ್ದರು.

PREV

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ