- ಶ್ರೀ ಉಳವಿ ಚನ್ನಬಸವೇಶ್ವರ ಮಹಾಪುರಾಣ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಮಠ-ಮಂದಿರಗಳು ಮನುಷ್ಯನಿಗೆ ಶಾಂತಿ, ನೆಮ್ಮದಿ ನೀಡುವ ತಾಣಗಳಾಗಿವೆ. ಚನ್ನಗಿರಿ ಪಟ್ಟಣದಲ್ಲಿರುವ ಶ್ರೀ ಹಾಲಸ್ವಾಮಿ ವಿರಕ್ತ ಮಠವು ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರಿರ್ಯಂತ ಪುರಾಣ, ಪ್ರಚನಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಸೇವೆ ಎಂದು ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್ ಹೇಳಿದರು.ಭಾನುವಾರ ಸಂಜೆ ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶ್ರಾವಣ ಮಾಸದ ಒಂದು ತಿಂಗಳ ಪರಿರ್ಯಂತ ಹಮ್ಮಿಕೊಂಡಿರುವ ಅವಿರಳ ಜ್ಞಾನಿ ಶ್ರೀ ಉಳವಿ ಚನ್ನಬಸವೇಶ್ವರ ಮಹಾಪುರಾಣ, ವಚನಾಮೃತ ಬೋಧನೆ ಹಾಗೂ ಬಸವತತ್ವ ಸಮಾವೇಶದಲ್ಲಿ ಹಮ್ಮಿಕೊಂಡಿದ್ದ ಶ್ರೀ ಲಲಿತಾ ಸಹಸ್ರನಾಮಾವಳಿ ಪಠಣೆ, ಕುಂಕುಮಾರ್ಚನೆ, ಸರ್ವ ಸಮಾಜದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಮಾತನಾಡಿ, ಭಾರತ ಅನೇಕ ಸಾಧು ಸಂತರು ನಡೆದಾಡಿದ ಪವಿತ್ರ ಭೂಮಿಯಾಗಿದೆ. ಈ ದೇಶದಲ್ಲಿ ಧರ್ಮ, ಸಂಸ್ಕೃತಿ ಉಳಿದಿರುವುದು ಮಠಗಳಿಂದ. ಶಿಕ್ಷಣ ಕ್ಷೇತ್ರದಲ್ಲಿ ಮಠಗಳ ಕೊಡುಗೆ ಬಗ್ಗೆ ಸಮಗ್ರವಾಗಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಪುರಸಭೆಯ ಸದಸ್ಯ ಶ್ರೀಕಾಂತ್, ಎನ್.ಬಿ.ರೇಣುಕ ಪ್ರಸಾದ್, ಎಸ್.ನಾಗರಾಜು ನಾಡಿಗರ, ಸಾಗರದ ಶಿವಲಿಂಗಪ್ಪ, ಜ್ಯೋತಿ ಕೊಟ್ರೇಶ್ ಕೋರಿ, ಕೆ.ಪಿ.ಎಂ. ಶಿವಲಿಂಗಸ್ವಾಮಿ, ಜವಳಿ ಮಹೇಶ್, ಭಕ್ತರು ಇದ್ದರು.
-18ಕೆಸಿಎನ್ಜಿ1.ಜೆಪಿಜಿ: