ಹಾವೇರಿ ಮಾರುಕಟ್ಟೆಯಲ್ಲಿನ ಮಂಡಕ್ಕಿ ಭಟ್ಟಿ, ಕಾರ ಕುಟ್ಟುವ ಯಂತ್ರ ಸ್ಥಳಾಂತರ ಮಾಡಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Apr 4, 2025 12:50 AM

ಕಾರ ಕುಟ್ಟುವ ವೇಳೆ ಘಾಟು ಹೆಚ್ಚಾಗಿ ಉಸಿರಾಡಲು ತೊಂದರೆಯಾಗುತ್ತಿದೆ. ಅಲ್ಲದೇ ಕಾರ ಕುಟ್ಟುವ ಯಂತ್ರಗಳಿಂದ ಉಂಟಾಗುತ್ತಿರುವ ಶಬ್ದದಿಂದ ಅಕ್ಕಪಕ್ಕದ ಅಂಗಡಿಗಳ ಹಾಗೂ ಮನೆಗಳ ನಿವಾಸಿಗಳು ಕಿರಿಕರಿ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದರು.

ಹಾವೇರಿ: ಇಲ್ಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ತರಕಾರಿ ಮಾರುಕಟ್ಟೆ ಬಳಿ ಇರುವ ಮಂಡಕ್ಕಿ ಭಟ್ಟಿಗಳು ಹಾಗೂ ಕಾರ ಕುಟ್ಟುವ ಯಂತ್ರಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ವ್ಯಾಪಾರಸ್ಥರು ಹಾಗೂ ನಿವಾಸಿಗಳು ಗುರುವಾರ ಮಾರುಕಟ್ಟೆಯಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ನಗರದ ಲಾಲ್ ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿರುವ ಕಾರ ಕುಟ್ಟುವ ಯಂತ್ರಗಳಿರುವ ಅಂಗಡಿಯಿಂದ ನಿತ್ಯ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಕಾರ ಕುಟ್ಟುವ ವೇಳೆ ಘಾಟು ಹೆಚ್ಚಾಗಿ ಉಸಿರಾಡಲು ತೊಂದರೆಯಾಗುತ್ತಿದೆ. ಅಲ್ಲದೇ ಕಾರ ಕುಟ್ಟುವ ಯಂತ್ರಗಳಿಂದ ಉಂಟಾಗುತ್ತಿರುವ ಶಬ್ದದಿಂದ ಅಕ್ಕಪಕ್ಕದ ಅಂಗಡಿಗಳ ಹಾಗೂ ಮನೆಗಳ ನಿವಾಸಿಗಳು ಕಿರಿಕರಿ ಅನುಭವಿಸುವಂತಾಗಿದೆ ಎಂದು ದೂರಿದರು. ಕಾರ ಕುಟ್ಟುವ ಯಂತ್ರಗಳಿಂದ ಉಂಟಾಗುತ್ತಿರುವ ಘಾಟಿನಿಂಧ ಇಲ್ಲಿನ ನಿವಾಸಿಗಳ ನೆಮ್ಮದಿ ಹಾಳಾಗಿದ್ದು, ಮನೆಗಳಲ್ಲಿ ವಾಸಿಸುವುದೇ ಕಷ್ಟವಾಗುತ್ತಿದೆ. ಅಲ್ಲದೇ ಕಾರ ಕುಟ್ಟುವ ಯಂತ್ರಗಳಿಂದಾಗಿ ಅಕ್ಕಪಕ್ಕದ ಅಂಗಡಿಗಳ ಹಾಗೂ ಮನೆಗಳು ಗೋಡೆಗಳು ಬಿರುಕು ಬಿಡುತ್ತಿವೆ. ಅಲ್ಲದೇ ಧೂಳು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಂಚರಿಸಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಪೌರಾಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೂಡಲೇ ಮಾರುಕಟ್ಟೆಯಲ್ಲಿರುವ ಕಾರ ಕುಟ್ಟುವ ಯಂತ್ರಗಳನ್ನು ಹಾಗೂ ಮಂಡಕ್ಕಿ ಭಟ್ಟಿಗಳನ್ನು ಬೇರಡೆ ಸ್ಥಳಾಂತರಿಸಿ ಇಲ್ಲಿನ ವ್ಯಾಪಾರಸ್ಥರು ಹಾಗೂ ನಿವಾಸಿಗಳು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ಮುಸ್ತಾಕ್ ಯಡ್ರಾಮಿ, ಗಣೇಶ ಹುಲಸಂಗಿ, ಆಯಾಜಾನ್ ಪಠಾಣ, ರಾಜು ಹುಲಸಂಗಿ, ಮಕ್ಬುಲ್ ಯಡ್ರಾಮಿ, ಮಾಬೂಲಿ ಮುಲ್ಲಾ, ಗೌಸ್ ಮುಲ್ಲಾ, ಸುಲೇಲಾನ್ ಹತ್ತಿಕಾಳ, ಮುಸ್ತಾಕ್ ಸಂದಿಮನಿ, ಇಮಾಮ್‌ಸಾಬ್ ಉಕ್ಕುಂದ, ಧರ್ಮರಾಜ ಕೀರ್ತೆಪ್ಪನವರ ಸೇರಿದಂತೆ ಇತರರು ಇದ್ದರು.ಕೃಷಿ ಹೊಂಡದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಿ

ರಾಣಿಬೆನ್ನೂರು: ಕೃಷಿ ಹೊಂಡದಲ್ಲಿ ಮಕ್ಕಳು ಈಜಲು ಮತ್ತು ಜಾನುವಾರುಗಳು ನೀರು ಕುಡಿಯಲು ತೆರಳಿದ ಸಂದರ್ಭದಲ್ಲಿ ಅದರಲ್ಲಿ ಬೀಳುವ ಸಂಭವವಿರುತ್ತದೆ. ಅದಕ್ಕಾಗಿ ರೈತರು ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ನೆರಳು ಪರದೆಯನ್ನು ಅಳವಡಿಸುವುದು ಕಡ್ಡಾಯವಾಗಿದೆ. ತಾಲೂಕಿನ ಕೃಷಿ ಹೊಂಡ ಫಲಾನುಭವಿಗಳು ತಮ್ಮ ತಮ್ಮ ಕೃಷಿ ಹೊಂಡಗಳ ಎದುರಿಗೆ ಕಡ್ಡಾಯವಾಗಿ ಅಪಾಯ ಮತ್ತು ಈಜಬಾರದು ಎಂಬ ನಾಮಫಲಕವನ್ನು ಅಳವಡಿಸಬೇಕು. ಇದಲ್ಲದೆ ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮವಾಗಿ ಹಗ್ಗದೊಂದಿಗೆ ಟ್ಯೂಬ್‌ಗಳನ್ನು ನಾಲ್ಕು ಮೂಲೆಗಳಲ್ಲಿ ಇಳಿ ಬಿಡಬೇಕು ಎಂದು ತಿಳಿಸಿದ್ದಾರೆ.