ಹಲಗೂರು ಪಿಡಿಒ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆಗ್ರಾಪಂ ಸದಸ್ಯ ಕೆ.ಸುರೇಂದ್ರ ವಿರುದ್ಧ ಪಿಡಿಒ ಸಿ.ರುದ್ರಯ್ಯ ಸುಳ್ಳು ದೂರು
- ಗ್ರಾಪಂ ಸದಸ್ಯ ಕೆ.ಸುರೇಂದ್ರ ವಿರುದ್ಧ ಪಿಡಿಒ ಸಿ.ರುದ್ರಯ್ಯ ಸುಳ್ಳು ದೂರು - ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ತೇಜೋವಧೆ ಮಾಡಲು ಯತ್ನ ಕನ್ನಡಪ್ರಭ ವಾರ್ತೆ ಮಂಡ್ಯ ಹಲಗೂರು ಗ್ರಾಪಂ ಪಿಡಿಒ ಸಿ.ರುದ್ರಯ್ಯನವರ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದಿದ್ದನ್ನು ಸಹಿಸದೆ ಸದಸ್ಯ ಕೆ. ಸುರೇಂದ್ರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿ ಹಲಗೂರು ಪಂಚಾಯ್ತಿ ನಿವಾಸಿಗಳು, ಗ್ರಾಪಂ ಮಾಜಿ ಸದಸ್ಯರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ಧರಣಿ ಕುಳಿತು ಮನವಿ ಸಲ್ಲಿಸಿದರು. ಅಲ್ಲಿಂದ ಮತ್ತೆ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಳಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಅಂತಿಮವಾಗಿ ಜಿಪಂ ಕಚೇರಿ ಎದುರು ಧರಣಿ ನಿರತರಾದರು. ಕೆ.ಸುರೇಂದ್ರ ಅವರು ಮಳವಳ್ಳಿ ತಾಲೂಕಿನ ಗ್ರಾಪಂ ಸದಸ್ಯರಾಗಿ ಸಾರ್ವಜನಿಕರ ಕೆಲಸ ಮಾಡಿಕೊಂಡು ಬಂದಿದ್ದಾರೆ. ಎಚ್.ಬಸಾಪುರ ಗ್ರಾಪಂ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಸುತ್ತಮುತ್ತಲ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲಗೂರು ಗ್ರಾಪಂಗೆ ಪಿಡಿಒ ಸಿ.ರುದ್ರಯ್ಯ ಬಂದ ನಂತರ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ, ಕಂದಾಯ ಇಲಾಖೆಯ ದಾಖಲೆಗಳನ್ನು ತಿದ್ದಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಖಾತೆ ಮಾಡಿರುವ ಕುರಿತಂತೆ ಹಲವಾರು ದೂರುಗಳನ್ನು ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ದಾಖಲೆಗಳ ಸಹಿತ ನೀಡಿದ್ದಾರೆ. ಸಿ.ರುದ್ರಯ್ಯ ವಿರುದ್ಧ ತನಿಖೆಗೆ ಜಂಟಿ ತನಿಖಾ ತಂಡವನ್ನು ರಚನೆ ಮಾಡಿದ್ದು, ತನಿಖಾ ತಂಡ ಸಿ.ರುದ್ರಯ್ಯನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ ಎಂದರು. ಪಿಡಿಒ ವಿರುದ್ಧ ಕೆ.ಸುರೇಂದ್ರ ಅವರು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದಾರೆ. ಅವುಗಳ ತನಿಖೆ ಪ್ರಗತಿಯಲ್ಲಿವೆ. ಈ ಎಲ್ಲ ಪ್ರಕರಣ ಮುಚ್ಚಿಹಾಕುವ ಉದ್ದೇಶದಿಂದ ಹಾಗೂ ತಮ್ಮ ಮೇಲಿನ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಮಾನತುಗೊಳ್ಳುವ ಭಯ ಹಾಗೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆ.ಸುರೇಂದ್ರ ವಿರುದ್ಧ ಹಲಗೂರು ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಭ್ರಷ್ಟಾಚಾರದಲ್ಲಿ ತೊಡಗಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವ ಹಲಗೂರು ಪಿಡಿಒ ಸಿ.ರುದ್ರಯ್ಯ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು. ಕೆ.ಸುರೇಂದ್ರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಆಗ್ರಹಪಡಿಸಿದರು. ಪ್ರತಿಭಟನೆಯಲ್ಲಿ ಕೆ.ಮಧುಗೌಡ, ಎನ್.ಮಂಜುನಾಥ, ಗಂಗಾಧರ, ಕೆಂಪೇಗೌಡ, ಎಚ್.ಆರ್.ಭಗವಾನ್, ಕೆಂಪೇಗೌಡ, ಡಿ.ಪಿ.ಶಿವಕುಮಾರ್, ದಿಲೀಪ್, ಎನ್.ಶಿವನಂಜು, ಎಚ್.ಟಿ.ರಮೇಶ್, ಸಿದ್ದರಾಜು, ವೆಂಕಟೇಗೌಡ, ಶೇಖರ್, ಚಂದ್ರ, ರವಿ, ಎನ್.ಸುಮಂತ್, ಸುರೇಶ್, ಎಚ್.ರಾಜೇಶ್, ಸಂತೋಷ್, ರಾಮಚಂದ್ರೇಗೌಡ, ರಾಜು ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.