ಹಾವೇರಿ: ನಗರದ ಇಜಾರಿ ಲಕಮಾಪುರ ಬಳಿಯ ಪ್ರವೇಶದ್ವಾರದಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುತಿ ನಗರ ದ್ವಾರ ಕಮಾನು ತೆರವುಗೊಳಿಸಲು ಮುಂದಾಗಿರುವ ನಗರಸಭೆ ನಡೆಯನ್ನು ಖಂಡಿಸಿ ಇಜಾರಿಲಕಮಾಪುರದ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಶಂಕರಪ್ಪ ನವಲಿ ಮಾತನಾಡಿ, ಈ ಕಮಾನು ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ಆಸ್ತಿ ಅಥವಾ ಸ್ವಾರ್ಥಕ್ಕಾಗಿ ನಿರ್ಮಿಸುತ್ತಿಲ್ಲ. ಇಜಾರಿ ಲಕಮಾಪುರ ಗ್ರಾಮದ ಜನರೆಲ್ಲರೂ ಒಗ್ಗಟ್ಟಾಗಿ ಗ್ರಾಮದ ಪ್ರವೇಶದ್ವಾರ ನಿರ್ಮಿಸಲು ಮುಂದಾಗಿದ್ದೇವೆ. ಗ್ರಾಮಸ್ಥರ ಭಾವನೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ನಗರಸಭೆ ಪರಿಗಣಿಸಬೇಕು. ಪ್ರಕರಣ ವಿಚಾರಣೆಯಲ್ಲಿರುವಾಗ ನಗರಸಭೆ ಅಧಿಕಾರಿಗಳು ಏಕಾಏಕಿ ತೆರವು ಕಾರ್ಯಕ್ಕೆ ಮುಂದಾಗಿರುವುದನ್ನು ಖಂಡಿಸುತ್ತೇವೆ. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಕಾಮಗಾರಿ ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.
ಗ್ರಾಮಸ್ಥ ನಿಂಗನಗೌಡ ಅಂದಾನಿಗೌಡ್ರ ಮಾತನಾಡಿ, ಕಾನೂನುಬಾಹಿರ ಕಾಮಗಾರಿ ಎಂದು ಆರೋಪಿಸಿರುವುದು ಒಬ್ಬ ವ್ಯಕ್ತಿ ಮಾತ್ರ. ಇಡೀ ಗ್ರಾಮಸ್ಥರು ಕಮಾನು ನಿರ್ಮಾಣದ ಪರವಾಗಿದ್ದಾರೆ. ಕಾನೂನುಬದ್ಧವಾಗಿ ವಿಷಯ ಇತ್ಯರ್ಥವಾಗುವ ವರೆಗೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಸಿದ್ದರಾಮಪ್ಪ ಬಂಡಿವಡ್ಡರ, ಅಜ್ಜಯ್ಯ ಹಿರೇಮಠ, ಚನ್ನಯ್ಯ ಮಠದ, ಫಕ್ಕೀರೇಶ ಮಾಳಗಿ, ನಾಗಪ್ಪ ಬೂದಿಹಾಳ, ರಾಮಣ್ಣ ಬಂಡಿವಡ್ಡರ, ಬಾಲಪ್ಪ ಗುದ್ದಿನಾಳ, ರಾಮಪ್ಪ ಕುಂದೂರ, ಆನಂದ ಬೇಟಿ ಉಪಸ್ಥಿತರಿದ್ದರು.