ವಿದ್ಯಾರ್ಥಿ ಸಾವಿಗೆ ಕಾರಣರಾದವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Mar 22, 2024 1:00 AM

ಸಾರಾಂಶ

ಸವಣೂರು ತಾಲೂಕಿನ ಕುರಬರಮಲ್ಲೂರು ಗ್ರಾಮದ ವಿದ್ಯಾರ್ಥಿ ಪ್ರಶಾಂತ ಕಳಸೂರನ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ಗುರುವಾರ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಕುರಬರಮಲ್ಲೂರು ಗ್ರಾಮದ ವಿದ್ಯಾರ್ಥಿ ಪ್ರಶಾಂತ ಕಳಸೂರನ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ಗುರುವಾರ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು. ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸಬೇಕು, ಆರೋಪಿಗಳನ್ನು ಬಂಧಿಸದೇ ಒತ್ತಡಕ್ಕೆ ಮಣಿದಿರುವ ಶಿಗ್ಗಾಂವಿ ಡಿವೈಎಸ್‌ಪಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿ ಪ್ರಶಾಂತ ಕಳಸೂರನ ಕುಟುಂಕ್ಕೆ ಸೂಕ್ತ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಮನವಿ ಅರ್ಪಿಸಿದರು.

ಈ ವೇಳೆ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿ ವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ಕುರುಬರಮಲ್ಲೂರ ಗ್ರಾಮದ ಪ್ರಶಾಂತ ಕಳಸೂರ ಮತ್ತು ಆತನ ತಂದೆಯನ್ನು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಸಿ.ಎಫ್‌. ಮುದಕಣ್ಣನವರ ಪೊಲೀಸ್ ಇಲಾಖೆಯ ಹೆಸರಿನಲ್ಲಿ ಸುಳ್ಳು ಪೋಕ್ಸೋ ಕೇಸು ದಾಖಲಿಸುವುದಾಗಿ ಹೆದರಿಸಿ ವಿದ್ಯಾರ್ಥಿಗೆ ಮತ್ತು ಆತನ ತಂದೆಗೆ ಬ್ಲಾಕ್‌ಮೇಲ್ ಮಾಡಿ ೩ ಲಕ್ಷ ರುಪಾಯಿ ವಸೂಲಿ ಮಾಡಿ, ನಂತರ ಮತ್ತೆ ೨ ಲಕ್ಷ ರುಪಾಯಿ ಕೊಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ವಿದ್ಯಾರ್ಥಿ ಭಯಗೊಂಡು ಡೆತ್ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದರು.

ಈ ಬಗ್ಗೆ ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಒಂದುವಾರ ಗತಿಸಿದರೂ ಆರೋಪಿಗಳನ್ನು ಬಂಧಿಸಿಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ತಂದರೂ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಪೊಲೀಸ್ ಅಧಿಕಾರಿಯನ್ನು ಒಂದುವಾರದೊಳಗೆ ಅಮಾನತುಗೊಳಿಸಿಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎದು ಎಚ್ಚರಿಕೆ ನೀಡಿದರು.

ಅಶೋಕ ಹರನಗೇರಿ, ನಾಗರಾಜ್ ಬಡಮ್ಮನವರ್, ಶ್ರೀಧರ್ ದೊಡ್ಡಮನಿ, ಶ್ರೀಧರ್ ಆನವಟ್ಟಿ, ಮಾಲತೇಶ್ ಹೊಳೆಮ್ಮನವರ್, ಮಾಲತೇಶ್ ರಿತ್ತಿ, ಮಾಲತೇಶ್ ಬಾಲಣ್ಣನವರ್, ಮಲ್ಲಿಕಾರ್ಜುನ ಬೂದಗಟ್ಟಿ, ಜಗದೀಶ್ ಕೊಂಡೆಮ್ಮನವರ, ಶ್ರೀಕಾಂತ್ ತಳವಾರ, ಹೊನ್ನಪ್ಪ ಗೋಣಮ್ಮನವರ, ಜಗದೀಶ್ ಮನ್ನಂಗಿ, ಎಲ್ಲಪ್ಪ ದೇವಗೇರಿ, ಪ್ರಕಾಶ್ ಕಳಸೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Share this article