ಕನಕಪುರ: ಮೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಸಂಚಾಲಕ ಮುನಿರಾಜು ಮಾತನಾಡಿ, ತಾಲೂಕಿನಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿಮೀರುತ್ತಿದೆ. ಕಳೆದ ರಾತ್ರಿ ನಗರಕ್ಕೆ ಸಮೀಪದ ಶ್ರೀನಿವಾಸನಹಳ್ಳಿಯಲ್ಲಿ ಕಾಡಾನೆಗಳು ದಾಳಿ ಮಾಡಿ ತೆಂಗಿನ ಸಸಿಗಳನ್ನು ಮುರಿದು ನಾಶ ಮಾಡಿದ್ದರೂ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ನೀತಿ ಸಂಹಿತೆ, ಚುನಾವಣೆ ಕೆಲಸ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದು ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ಮಾಡಲು ರೈತರು ಹೆದರುವಂತಾಗಿದೆ. ರೈತರು ಭತ್ತ, ರಾಗಿ ಬೆಳೆಯದಿದ್ದರೆ ಅಧಿಕಾರಿಗಳು ಏನು ತಿನ್ನುತ್ತೀರಿ ಎಂದು ಪ್ರಶ್ನಿಸಿದ ರೈತರು, ಕಾಡಾನೆ ದಾಳಿಗೆ ತಾಲೂಕಿನಲ್ಲಿ ಸರಣಿ ಸಾವುಗಳಾಗುತ್ತಿದೆ. ಮೃತರಿಗೆ ಸ್ವಲ್ಪ ಪರಿಹಾರ ಕೊಟ್ಟು ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಮುಂದೆ ಅವರ ಕುಟುಂಬದ ಗತಿ ಏನು ಎಂದು ಪ್ರಶ್ನಿಸಿದರು.ತಾಲೂಕಿನ ಹೆಚ್ಚು ಭೂ ಭಾಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ರಾಮನಗರ, ಚಾಮರಾಜನಗರ ಮತ್ತು ಬೆಂಗಳೂರು ವ್ಯಾಪ್ತಿಯ ಬನ್ನೇರುಘಟ್ಟ ಅರಣ್ಯ ಸೇರಿದಂತೆ ಮೂರು ಜಿಲ್ಲೆಗೆ ಅರಣ್ಯ ವ್ಯಾಪ್ತಿ ಸೇರಿದ್ದು ಕಾಡಾನೆಗಳ ನಿಯಂತ್ರಣ ನಮ್ಮದಲ್ಲ, ನಮ್ಮದಲ್ಲ ಎಂದು ಒಬ್ಬರ ಮೇಲೆ ಮತ್ತೊಬ್ಬರು ಜವಾಬ್ದಾರಿ ಹಾಕಿ ಕರ್ತವ್ಯ ದಿಂದ ಜಾರಿಕೊಳ್ಳುತ್ತಿದ್ದಾರೆ. ರೈತರು ಬೆಳೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆ ಸದಸ್ಯ ಕೆ.ಆರ್. ಸುರೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರ್, ಹಾರೋಹಳ್ಳಿ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಪಡುವಣಗೆರೆ ಕುಮಾರ್, ಮುಖಂಡ ರಂಗಪ್ಪ, ಪಂಚ ಮುಖಿ, ಕೆಂಪಣ್ಣ, ಶಿವರಾಜು, ಮುನಿಸಿದ್ದೇಗೌಡ, ಉಮೇಶ್,ಪುಟ್ಟಮಾದೇಗೌಡ,ರಾಜು, ಬೈರೇಗೌಡ, ಮರಿಲಿಂಗೇಗೌಡ, ಸುರೇಶ್,ಶಿವಲಿಂಗೇಗೌಡ, ವಿವಿಧ ಸಂಘಟನೆ ಪದಾಧಿಕಾರಿಗಳು. ರೈತರು ಉಪಸ್ಥಿತರಿದ್ದರು.ಕೋಟ್...........
ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಆದಷ್ಟು ಬೇಗ ಸಭೆಯ ದಿನಾಂಕ ನಿಗದಿಪಡಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು.- ಸ್ಮಿತಾರಾಮು, ತಹಸೀಲ್ದಾರ್, ಕನಕಪುರ ಕೆ ಕೆ ಪಿ ಸುದ್ದಿ 3(1):
ಕನಕಪುರ ತಾಲೂಕು ಕಚೇರಿ ಮುಂದೆ ಕಾಡಾನೆ ದಾಳಿಗೆ ನೆಲಕಚ್ಚಿದ ತೆಂಗಿನ ಗಿಡಗಳಿಟ್ಟು ರೈತ ಸಂಘ ಹಾಗೂ ಪ್ರಗತಿ ಪರ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.