ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Feb 16, 2024 1:52 AM

ಸಾರಾಂಶ

ರಾಜ್ಯ ಹೆದ್ದಾರಿ-136 ಅಗಲೀಕರಣ ಕಾಮಗಾರಿ ವಿಳಂಬ ನೀತಿ ಖಂಡಿಸಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಮುಖ್ಯರಸ್ತೆ ಅಗಲೀಕರಣ ಸಮಿತಿ ಸದಸ್ಯರಿಂದ ತಹಸೀಲ್ದಾರಗೆ ಮನವಿ

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136 (ಮುಖ್ಯರಸ್ತೆ) ಅಗಲೀಕರಣ ಕಾಮಗಾರಿ ವಿಳಂಬ ನೀತಿ ಖಂಡಿಸಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶೀಘ್ರದಲ್ಲಿಯೇ ಅಗಲೀಕರಣ ಮಾಡುವಂತೆ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಮುಖ್ಯರಸ್ತೆ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನಿತ್ಯವೂ ಲಕ್ಷಾಂತರ ಚೀಲಗಳು ದೂರದ ಊರುಗಳಿಂದ ವಾಹನಗಳಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿವೆ. ಆದರೆ ಮಾರುಕಟ್ಟೆಗೆ ಬಂದಂತಹ ರೈತರ ಗೋಳಂತೂ ಕೇಳುವವರಿಲ್ಲ. ವಾಹನ ದಟ್ಟಣೆಯಿಂದ ನಿಗದಿತ ಸಮಯಕ್ಕೆ ಚೀಲಗಳು ಮಾರುಕಟ್ಟೆ ತಲುಪಲು ಸಾಧ್ಯವಾಗುತ್ತಿಲ್ಲ, ರೈತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣದಲ್ಲಿನ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಬ್ಯಾಡಗಿ ಬಂದ್ ಸೇರಿದಂತೆ ಕತ್ತೆ ಮೆರವಣಿಗೆ, ಆಮರಣಾಂತ ಉಪವಾಸ ಸತ್ಯಾಗ್ರಹ ಹೀಗೆ ಕಳೆದ 14 ವರ್ಷದಿಂದ ಹೋರಾಟ ನಡೆಯುತ್ತಿವೆ, ಆದರೂ ಸಹ ಅಗಲೀಕರಣಕ್ಕೆ ಸರ್ಕಾರ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯರಸ್ತೆ ಅಗಲೀಕರಣಕ್ಕಾಗಿ ಫೆ.27 ರಿಂದ ಅನಿರ್ದಿಷ್ಟಾವಧಿವರೆಗೆ ಆಮರಣಾಂತ ಉಪವಾಸ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇದಕ್ಕೆ ಪಟ್ಟಣದ ಎಲ್ಲ ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ನ್ಯಾಯವಾದಿ ಎನ್.ಎಸ್. ಬಟ್ಟಲಕಟ್ಟಿ ಮಾತನಾಡಿ, ನನೆಗುದಿಗೆ ಬಿದ್ದಿರುವ ರಸ್ತೆ ಅಗಲೀರಣದಿಂದ ಪಟ್ಟಣ ಕುಗ್ರಾಮಕ್ಕಿಂತ ಕಡೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಖ್ಯಾತಿಗೆ ತಕ್ಕಂತೆ ಯಾವುದೇ ಮೂಲಸೌಕರ್ಯಗಳಿಲ್ಲ. ಮುಖ್ಯ ರಸ್ತೆ ಪರಿಸ್ಥಿತಿ ಕೇಳುವವರಿಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪಾಂಡುರಂಗ ಸುತಾರ, ಎಂ.ಜೆ. ಪಾಟೀಲ, ಎನ್.ಜಿ. ಮೋಟೆಬೆನ್ನೂರ, ಗುತ್ತೆಮ್ಮ ಮಾಳಗಿ, ಶಿವಕುಮಾರ ಸರವಂದ, ವಿನಯ ರಾವಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article