ಕನ್ನಡಪ್ರಭ ವಾರ್ತೆ, ತುಮಕೂರು
ಕೆಸರುಮಡು ಗ್ರಾ.ಪಂ. ಮಾಜಿ ಅಧ್ಯಕ್ಷ, ಮಾರೇಗೌಡ ಮಾತನಾಡಿ, ಮಾಚನಹಳ್ಳಿಯಲ್ಲಿ ಜನವಸತಿ ಸಮೀಪ ಕ್ರಷರ್ ನಡೆಸಲು ಅನುಮತಿ ನೀಡಿರುವುದು ಸರಿಯಲ್ಲ, ಕೂಡಲೇ ಕ್ರಷರ್ ಅನುಮತಿ ರದ್ದುಪಡಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆಪಾದಿಸಿದರು.
ಕ್ರಷರ್ ನಡೆಸುತ್ತಿರುವ ಸ್ಥಳ ಜನವಸತಿ ಪ್ರದೇಶದಿಂದ ಕೇವಲ ೧೫೦ ಅಡಿ ಹತ್ತಿರದಲ್ಲಿದೆ. ಕ್ರಷರ್ ಶುರುವಾದರೆ ಅದರ ಧೂಳು, ಶಬ್ಧ, ಮತ್ತಿತರ ಸಮಸ್ಯೆಗಳಿಂದ ಗ್ರಾಮದ ನಿವಾಸಿಗಳು ಭಯ, ಆತಂಕದಲ್ಲಿ ಬಾಳುವಂತಾಗುತ್ತದೆ. ಜೊತೆಗೆ ವಿವಿಧ ಮಾರಕ ಕಾಯಿಲೆಗಳಿಗೆ ಬಲಿಯಾಗಬೇಕಾಗುತ್ತದೆ. ಇಂತಹ ಅಪಾಯಗಳ ನಡುವೆ ಕ್ರಷರ್ ನಡೆಸಲು ಅನುಮತಿ ಕೊಟ್ಟಿರುವುದು ಜನವಿರೋಧಿ ಕ್ರಮವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕ್ರಷರ್ ಆರಂಭಿಸಲು ನೀಡಿರುವ ಅನುಮತಿಯನ್ನು ಕೂಡಲೇ ರದ್ದುಪಡಿಸುವಂತೆ ಒತ್ತಾಯಿಸಿದರು.ಕ್ರಷರ್ ನಡೆಸಲು ಅನುಮತಿ ಪಡೆದು ಈಗಾಗಲೇ ಕೆಲಸ ಶುರು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ಕ್ರಷರ್ ಆರಂಭ ಮಾಡಕೂಡದು. ಈಗ ನೀಡಿರುವ ಅನುಮತಿ ರದ್ದು ಮಾಡದಿದ್ದರೆ ಮಾಚನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರೆಲ್ಲಾ ಸೇರಿ ಉಗ್ರ ಹೋರಾಟ ಮಾಡುವುದಾಗಿ ಮಾರೇಗೌಡ ಎಚ್ಚರಿಕೆ ನೀಡಿದರು.
ಕೆಸರುಮಡು ಗ್ರಾ.ಪಂ. ಸದಸ್ಯ ಸಂಪತ್ ಕುಮಾರ್, ಹಿರೇಹಳ್ಳಿ ಗ್ರಾ.ಪಂ. ಸದಸ್ಯರಾದ ಗೋಪಾಲಕೃಷ್ಣ, ಹನುಮಂತರಾಜು, ಮುಖಂಡರಾದ ದೇವರಾಜು, ಮುಜಾಯಿದ್ ಪಾಷಾ, ಪದ್ಮನಾಭ ಪ್ರತಿಭಟನೆಯ ನೇತೃತ್ವವಹಿಸಿದ್ದರು.