ಬ್ಯಾಡಗಿ ಶಾಸಕರ ನಿವಾಸದೆದುರು ತಮಟೆ ಬಾರಿಸುವ ಮೂಲಕ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಲಾಯಿತು.
ಬ್ಯಾಡಗಿ: ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಶಾಸಕರ ನಿವಾಸದೆದುರು ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದ ಕಾರ್ನಾಟಕ ರಾಜ್ಯ ದಲಿತ ಪರ ಸಂಘಟನೆಗಳ ಒಕ್ಕೂಟ ಬ್ಯಾಡಗಿ ಘಟಕದ ಸದಸ್ಯರು ಬಳಿಕ ಶಾಸಕ ಬಸವರಾಜ ಶಿವಣ್ಣವನರ ಅವರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಆದಿ ಜಾಂಬವ ಸಮಿತಿ ತಾಲೂಕಾಧ್ಯಕ್ಷ ಸೋಮಣ್ಣ ಮಾಳಗಿ, ಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪು ಪ್ರಕಟಿಸಿ 4 ತಿಂಗಳು ಕಳೆಯುತ್ತ ಬಂದಿದೆ. ಇಷ್ಟಾದರೂ ಒಳ ಮೀಸಲಾತಿ ಜಾರಿ ಮಾಡದೆ ಸರಕಾರ ಕಾಲಹರಣ ಮಾಡುತ್ತಿದ್ದು, ಬೆಳಗಾವಿಯಲ್ಲಿ ನಡೆದಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಚರ್ಚಿಸುವಂತೆ ಆಗ್ರಹಿಸಿದರು.
ನೈತಿಕತೆ ಉಳಿಸಿಕೊಳ್ಳಿ
ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ ಮಾತನಾಡಿ, ಅಂಬೇಡ್ಕರ್ ವಿರುದ್ಧ ಚುನಾವಣೆ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಅವರ ಹೆಸರು ಬಳಕೆ ಮಾಡಲು ನೈತಿಕತೆ ಉಳಿದಿಲ್ಲ. ಅಸೃಶ್ಯರನ್ನು ಕಡೆಗಣಿಸಲು ಸ್ಪರ್ಶ ಜಾತಿಯ ಹಿಂದುಳಿದವರನ್ನು ಸೇರ್ಪಡೆಗೊಳ್ಳಲು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಕಾರಣವಾಗಿದೆ. ಇನ್ನಾದರೂ ಸುಪ್ರೀಂಕೋರ್ಟ್ ನಿರ್ದೇಶನದಂತೆ ಒಳಮೀಸಲಾತಿ ಪ್ರಕಟಿಸುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ಹೆ ಸರನ್ನು ಹೇಳಲು ನೈತಿಕತೆ ಉಳಿಸಿಕೊಳ್ಳುವಂತೆ ಮನವಿ ಮಾಡಿದರು.
ಆಮೆಗತಿ ಕೆಲಸ
ನಾಗರಾಜ ಹಾವನೂರ ಮಾತನಾಡಿ, ಸರ್ಕಾರದ ನಿಧಾನ ಗತಿ ಕೆಲಸ ನೋಡಿದರೇ ದಲಿತ ಸಮುದಾಯಗಳಿಗೆ ಒಳಮೀಸಲಾತಿ ಸಿಗುವ ಲಕ್ಷಣಗಳಿಲ್ಲ ಎಂದು ದೂರಿದರು.
ತಣ್ಣೀರೆರಚಿದ ಕಾಂಗ್ರೆಸ್
ಸುರೇಶ ಅಸಾದಿ ಮಾತನಾಡಿ, ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿಗೊಳಿಸಿದೆ. ನಿಜವಾದ ಅಸೃಷ್ಯರು ಅವರು ಇಂದಿಗೂ ಊರ ಹೊರಗಿದ್ದಾರೆ. ವಿಧಾನಸಭೆ ಚುನಾವಣೆಗೂ ಪ್ರಸ್ತುತ ಕಾಂಗ್ರೆಸ್ ಮುಖಂಡರು ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಅಸೃಷ್ಯರ ವಿಶ್ವಾಸಕ್ಕೆ ಕಾಂಗ್ರೆಸ್ ನಾಯಕರು ತಣ್ಣೀರೆರಚುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಫ್.ಎಚ್. ಗಿಡ್ಡಣ್ಣನವರ, ದುರ್ಗೇಶ ಗೋಣೆಮ್ಮನವರ, ಬಸವರಾಜ ತಡಸದ, ಗುತ್ತೆಮ್ಮ ಮಾಳಗಿ ಸೇರಿದಂತೆ ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.