ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಥಮ ಚಿಕಿತ್ಸಕರ ಪ್ರತಿಭಟನೆ

KannadaprabhaNewsNetwork | Published : Jan 26, 2024 1:48 AM

ಮಹಾಲಿಂಗಪುರ: ಇಲ್ಲಿನ ಜಿ.ಎಲ್.ಬಿಸಿ ಅತಿಥಿ ಗೃಹದಲ್ಲಿ ನಡೆದ ಪ್ರಥಮ ಚಿಕಿತ್ಸಕರ ಸಂಘದ ಸಭೆಯಲ್ಲಿ ಪ್ರಥಮ ಚಿಕಿತ್ಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಮಹಾದೇವ ಕದ್ದಿಮನಿ ಮಾತನಾಡಿ, ಮಾರು ವರ್ಷಗಳಿಂದ ಸರ್ಕಾರದ ಯಾವುದೇ ವೈದ್ಯಕೀಯ ಸೇವೆಗಳಿಲ್ಲದ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಕರು ಗ್ರಾಮೀಣ ಭಾಗದ ಜನರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಸರ್ಕಾರ ನಮ್ಮ ಸೇವೆಯನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮಾರು ವರ್ಷಗಳಿಂದ ಸರ್ಕಾರದ ಯಾವುದೇ ವೈದ್ಯಕೀಯ ಸೇವೆಗಳಿಲ್ಲದ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಕರು ಗ್ರಾಮೀಣ ಭಾಗದ ಜನರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಸರ್ಕಾರ ನಮ್ಮ ಸೇವೆಯನ್ನು ಕಡೆಗಣಿಸುತ್ತಿದೆ ಎಂದು ಪ್ರಥಮ ಚಿಕಿತ್ಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಮಹಾದೇವ ಕದ್ದಿಮನಿ ಆರೋಪಿಸಿದರು.

ಸ್ಥಳೀಯ ಜಿ.ಎಲ್.ಬಿಸಿ ಅತಿಥಿ ಗೃಹದಲ್ಲಿ ನಡೆದ ಪ್ರಥಮ ಚಿಕಿತ್ಸಕರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಪ್ರಥಮ ಚಿಕಿತ್ಸಕರು ನುರಿತ ವೈದ್ಯರ ಕೈ ಕೆಳಗೆ ಸುಮಾರು 5-15 ವರ್ಷಗಳ ಕಾಲ ಪ್ರಥಮ ಚಿಕಿತ್ಸೆ ಅನುಭವ ಪಡೆದು ಗ್ರಾಮೀಣ ಪ್ರದೇಶದಲ್ಲಿನ ಜನರ ಮತ್ತು ನುರಿತ ವೈದ್ಯರ ನಡುವೆ ಸೇತುಬಂಧುವಾಗಿ ಪ್ರಥಮ ಚಿಕಿತ್ಸಾ ಸೇವೆ ಸಲ್ಲಿಸುತ್ತ ಬಂದಿದ್ದು, ಆದರೆ 2007ರ ಕೆ.ಪಿ.ಎಂ.ಇ. ಕಾಯ್ದೆಯ ಪ್ರಕಾರ ಯಾವುದೇ ವೈದ್ಯಕೀಯ ಪದವಿ ಪ್ರಮಾಣ ಪತ್ರ ಇಲ್ಲದ ಕಾರಣ ನಮ್ಮನ್ನು ನಕಲಿಗಳೆಂದು ಅಧಿಕಾರಿಗಳು ತಡೆ ಒಡ್ಡುತ್ತಿದ್ದಾರೆ. ಆದ್ದರಿಂದ ನಮ್ಮ ಬದುಕು ದುಸ್ತರವಾಗಿದೆ ಎಂದ ಅಳಲು ತೋಡಿಕೊಂಡರು.

ರಾಜ್ಯದಲ್ಲಿ ಸುಮಾರು 20-30 ಸಾವಿರ ಪ್ರಥಮ ಚಿಕಿತ್ಸಕರು, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಈಗ ಸರ್ಕಾರ ಏಕಾಏಕಿಯಾಗಿ ನಮ್ಮ ವೈದ್ಯಕೀಯ ಸೇವೆಗೆ ತಡೆಯೊಡ್ಡುತ್ತಿದೆ. ಈ ರೀತಿ ನಮಗೆ ನೀಡಿದರೆ ತೊಂದರೆಯಾಗುತ್ತಿದೆ. ಈ ವೃತ್ತಿಯನ್ನೇ ನಂಬಿರುವ 20 ರಿಂದ 30 ಸಾವಿರ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದರು.

ಕಾರ್ಯಕಾರಿಣಿ ಅಧ್ಯಕ್ಷ ಜೆ. ಸಿದ್ದಾರೆಡ್ಡಿ, 13 ವರ್ಷಗಳಿಂದ ಆಯಾ ಸರ್ಕಾರಕ್ಕೆ ಸಂಘದ ಹೋರಾಟದ ಮೂಲಕ ನಮ್ಮ ಬೇಡಿಕೆ ಸಲ್ಲಿಸುತ್ತ ಬಂದರೂ ಯಾವುದೇ ಪ್ರಯೋಜನ ಆಗಿಲ್ಲ. ಕೂಡಲೇ ಪ್ರಥಮ ಚಿಕಿತ್ಸಕರನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಧಾನಕಾರ್ಯದರ್ಶಿ ಆರ್‌. ಆರ್ ಪಾಟೀಲ ಮಾತನಾಡಿ, ಹಿಂದಿನ ಆರೋಗ್ಯ ಸಚಿವ ಕೆ. ಆರ್. ರಮೇಶಕುಮಾರ್‌ ಅಧ್ಯಕ್ಷತೆಯಲ್ಲಿ 2017ರ ಮಾರ್ಚ್ 17ರಂದು ನಡೆದ ಸಭೆಯಲ್ಲಿ ತರಬೇತಿ ಹಾಗೂ ಸಂಘಕ್ಕೆ ಮಾನ್ಯತೆ ನೀಡಲು ಚರ್ಚಿಸಲಾಯಿತು. ಜಿಲ್ಲಾವಾರು ಪ್ರಥಮ ಚಿಕಿತ್ಸಕರ ಮಾಹಿತಿ ಪಡೆಯಲು ಆದೇಶ ಆಡಲಾಯಿತು. ಆದರೆ, ಕಾರಣಾಂತರಗಳಿಂದ ಆದೇಶ ವಾಪಸ್‌ ಪಡೆಯಲಾಯಿತು. ಮತ್ತೆ ಸುತ್ತೋಲೆ ಹೊರಡಿಸಿ ಪ್ರಥಮ ಚಿಕಿತ್ಸಕರಿಗೆ ಸರ್ಕಾರದಿಂದ ತರಬೇತಿ ಹಾಗೂ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.