ಗಜೇಂದ್ರಗಡ: ಕೂಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಸಂತ್ರಸ್ತ ಕುಟುಂಬಗಳಿಗೆ ೨೦ ದಿನದೊಳಗೆ ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಿಸದಿದ್ದರೆ ಮತ್ತೆ ಹೋರಾಟ ಕೈಗೊಳ್ಳುತ್ತೇವೆ ಎಂದು ಕಾರ್ಮಿಕರ ಎಂ.ಎಸ್. ಹಡಪದ ಹೇಳಿದರು.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದಾಗ ಕಾಂಗ್ರೆಸ್ ಮುಖಂಡರು ನಾವು ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆ ಅಂದು ಪ್ರತಿಭಟನೆ ಮೊಟಕುಗೊಳಿಸಿದ್ದೇವು. ಆದರೆ ೬ ತಿಂಗಳು ಕಳೆದರೂ ವಿತರಿಸಿಲ್ಲ. ಶಾಸಕರ ಮನೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾಗ ಪೊಲೀಸ್ರು ಗೇಟ್ನಲ್ಲಿ ತಡೆದಿದ್ದಾರೆ. ಹೀಗಾಗಿ ವಿಮುಖಂಡರೊಬ್ಬರು ನಮಗೆ ಇಷ್ಟು ದಿನದಲ್ಲಿ ಪರಿಹಾರ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡರೆ ಮಾತ್ರ ಹೋರಾಟ ಹಿಂಪಡೆಯುತ್ತೇವೆ ಎಂದು ಪಟ್ಟು ಹಿಡಿದರು.
ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡರು ಶಾಸಕ ಜಿ.ಎಸ್. ಪಾಟೀಲ್ ಅವರನ್ನು ಸಂಪರ್ಕಿಸಿ ಮಾತನಾಡಿದ ಬಳಿಕ ಪ್ರತಿಭಟನಾ ನಿರತರಿಗೆ ೨ ತಿಂಗಳೊಳಗೆ ಪರಿಹಾರ ಕೊಡಿಸುತ್ತೇವೆ ಎಂಬ ಭರವಸೆಯನ್ನು ಪ್ರತಿಭಟನಾಕಾರರು ತೀರಸ್ಕರಿಸಿದ್ದರಿಂದ ೧೫ ದಿನದೊಳಗೆ ಪರಿಹಾರ ಕೊಡಿಸಲು ಶ್ರಮಿಸುತ್ತೇವೆ ಎಂದಾಗ ೨೦ ದಿನದಲ್ಲಿ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ ಮತ್ತೆ ಹೋರಾಟವನ್ನು ಆರಂಭಿಸುತ್ತೇವೆ ಎಂದು ಎಚ್ಚರಿಸಿದರು."ನಮಗೆ ಅಪಘಾತವಾಗಿದ್ದು ಮಂಗಳವಾರ, ಚಿಕಿತ್ಸೆ ನೀಡಿದ್ದು ಗುರುವಾರ. ಕಾಲಿನಲ್ಲಿ ರಾಡ್ ಹಾಕಿದ್ದಾರೆ. ಕುಳಿತರೆ ನಿಲ್ಲಲು, ಆಗಲ್ಲ, ನಿಂತರೆ ಕುಳಿತುಕೊಳ್ಳಲು ಆಗಲ್ಲ. ದುಡಿಯುವ ವರೆಗೆ ಮನೆ ನಡೆಯಲ್ಲ. ಆದರೆ, ನಮ್ಮನ್ನು ನೋಡಿಕೊಳ್ಳಲು ಒಬ್ಬರು ಬೇಕು. ಇಂತಹ ಸಂದರ್ಭದಲ್ಲಿ ದುಡಿದ ಕೂಲಿ ಹಣ ಸಹ ನಮಗೆ ನೀಡಿಲ್ಲ. ಸಾಲ ಮಾಡಿಕೊಂಡು ಕಾಲು ಆಪರೇಶನ್ ಮಾಡಿಸಿಕೊಂಡಿದ್ದೇವೆ. ನಮಗೆ ಸಹಾಯಧನ ನೀಡಿಲ್ಲ ಎಂದರೆ ಹೇಗೆ ಎಂದು ಮಹಿಳೆಯರು ಖಾರವಾಗಿ ಮುಖಂಡರನ್ನು ಪ್ರಶ್ನಿಸಿದರು. ಮಾನವೀಯ ನೆರವು ಎಂದರೆ ಸಂಕಷ್ಟದಲ್ಲಿ ಇರುವ ಜನರ ಕಣ್ಣಿರು ಒರೆಸಲು ನೀಡಬೇಕು ಹೊರತು ಕಣ್ಣೀರು ಹಾಕಿಸಿ ಸಲ್ಲ. ಶೀಘ್ರ ಪರಿಹಾರ ನೀಡಿ ಎಂದು ಪ್ರತಿಭಟನಾಕಾರರು ಕೈ ಮುಗಿದು ಬೇಡಿಕೊಂಡರು.
ಇದಕ್ಕೂ ಮುನ್ನ ಪ್ರತಿಭಟನಾ ಸ್ಥಳದಿಂದ ಪಾದಾಯಾತ್ರೆ ಮೂಲಕ ಶಾಸಕರ ಮನೆಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ತಹಸೀಲ್ದಾರ್ ಗೇಟ್ನಲ್ಲಿ ಪೊಲೀಸರು ತಡೆದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. "