-
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ರಾಮಸ್ವಾಮಿ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.
ಸಿದ್ದರಾಮಯ್ಯ ಅವರ ನಂತರ ಮೈಸೂರಿನಲ್ಲಿ ಡಾ. ಯತೀಂದ್ರ ಅವರೇ ಪ್ರಬಲ ನಾಯಕ. ಅವರನ್ನು ಡಿಸಿಎಂ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಮೈಸೂರಿನ 11 ಕ್ಷೇತ್ರಗಳನ್ನು ಕೂಡ ಗೆಲ್ಲುತ್ತೇವೆ. ಯತೀಂದ್ರ ಕೇವಲ ಕುರುಬ ಸಮಾಜದ ನಾಯಕ ಮಾತ್ರವಲ್ಲ, ಅವರು ಎಲ್ಲಾ ವರ್ಗಗಳ ನಾಯಕ. ಹೀಗಾಗಿ, ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಅವರು ಎಚ್ಚರಿಸಿದರು.ವಿಧಾನಪರಿಷತ್ ಸದಸ್ಯರಾಗಿ ಯತೀಂದ್ರ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯ ಅನುಪಸ್ಥಿತಿಯಲ್ಲಿ ವರುಣ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ಡಿಸಿಎಂ ಮಾಡಿ ಪ್ರಬಲ ಖಾತೆ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೂ ನೆರವಾಗಲಿದೆ. ಹೀಗಾಗಿ, ಅವರನ್ನು ಡಿಸಿಎಂ ಮಾಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.