ಸಿಬಿಐನ ಸ್ವಯಂಪ್ರೇರಿತವಾಗಿ ತನಿಖೆ ಅಧಿಕಾರಕ್ಕೇ ರಾಜ್ಯದ ಕತ್ತರಿ: ಸಿಬಿಐ ಮೇಲೇ ಸಿದ್ದು ‘ದಾಳಿ’!

KannadaprabhaNewsNetwork |  
Published : Sep 27, 2024, 01:16 AM ISTUpdated : Sep 27, 2024, 07:11 AM IST
ಸಿಬಿಐ | Kannada Prabha

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಸಿಬಿಐ ಸ್ವಯಂ ಪ್ರೇರಿತ ತನಿಖೆಗೆ ಕಡಿವಾಣ ಹಾಕಲಾಗಿದೆ. ಈ ಮೂಲಕ ನ್ಯಾಯಾಲಯ ಅಥವಾ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ತನಿಖೆ ನಡೆಸುವಂತಿಲ್ಲ. ಈ ಕ್ರಮವು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆ ಎಂದು ಸರ್ಕಾರ ತಿಳಿಸಿದೆ.

 ಬೆಂಗಳೂರು : ಕರ್ನಾಟಕ ರಾಜ್ಯದ ಅಪರಾಧ ಪ್ರಕರಣಗಳ ತನಿಖೆ‌ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಮುಕ್ತ ಅನುಮತಿ ನೀಡಿದ್ದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದೆಹಲಿ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆ-1946 ಅಡಿ ಸಿಬಿಐಗೆ ನೀಡಿದ್ದ ಮುಕ್ತ ಅನುಮತಿ ಹಿಂಪಡೆಯಲಾಗಿದೆ. ಇದರಿಂದಾಗಿ ಕರ್ನಾಟಕದ ಭೂಭಾಗದ ಒಳಗೆ ನ್ಯಾಯಾಲಯದ ಆದೇಶ ಅಥವಾ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸುವ ಅಧಿಕಾರವನ್ನು ಸಿಬಿಐ ಕಳೆದುಕೊಳ್ಳಲಿದೆ.

ಮುಖ್ಯಮಂತ್ರಿಗಳ ವಿರುದ್ಧದ ಮುಡಾ ಪ್ರಕರಣ ಹಾಗೂ ವಾಲ್ಮೀಕಿ ನಿಗಮದ ಹಗರಣಗಳು ಚರ್ಚೆಯಲ್ಲಿರುವಾಗಲೇ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.

ಸಂಪುಟದ ನಿರ್ಧಾರವನ್ನು ಸಮರ್ಥಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌, ‘ನಾವು ಭಯದಿಂದ ಈ ತೀರ್ಮಾನ ಮಾಡಿಲ್ಲ. ಭಯ ಉತ್ಪಾದಿಸಲು ಯತ್ನಿಸುತ್ತಿರುವವರನ್ನು ನಿಗ್ರಹಿಸಲು ಈ ನಿರ್ಧಾರ ಮಾಡಿದ್ದೇವೆ. ಇದು ಭಯೋತ್ಪಾದನಾ ನಿಗ್ರಹ ನಡೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕೇಂದ್ರದ ಅಂಗಸಂಸ್ಥೆಗಳು ಹಾಗೂ ರಾಜಭವನ ಕೆಲಸ ಮಾಡುತ್ತಿವೆ. ಇದಕ್ಕೆ ಉತ್ತರವಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಸಿಬಿಐ ಪೂರ್ವಾಗ್ರಹ ಪೀಡಿತವಾಗಿದೆ:

ಈ ನಿರ್ಧಾರದ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ, ಕೇಂದ್ರ ಸರ್ಕಾರವು ಸಿಬಿಐಯನ್ನು ಕಾನೂನಾತ್ಮಕವಾಗಿ ಬಳಕೆ ಮಾಡುತ್ತಿಲ್ಲ. ಸಿಬಿಐ ಸಂಪೂರ್ಣ ಪೂರ್ವಾಗ್ರಹಪೀಡಿತವಾಗಿದೆ. ಹೀಗಾಗಿ ಪ್ರತಿ ಪ್ರಕರಣವನ್ನು ಪರಿಶೀಲಿಸಿ, ಅಗತ್ಯವಿದ್ದರೆ ಮಾತ್ರ ಸಿಬಿಐ ತನಿಖೆಗೆ ನೀಡುತ್ತೇವೆ. ಸ್ವಯಂ ಪ್ರೇರಿತವಾಗಿ ತನಿಖೆ ಕೈಗೆತ್ತಿಕೊಳ್ಳುವ ಅನುಮತಿ ಹಿಂಪಡೆದಿದ್ದೇವೆ. ನ್ಯಾಯಾಲಯವೇ ಸಿಬಿಐ ತನಿಖೆಗೆ ನೀಡಿದರೆ ನಮ್ಮ ಈ ನಿರ್ಧಾರ ಅಡ್ಡಿಯಾಗುವುದಿಲ್ಲ ಎಂದು ಎಚ್‌.ಕೆ.ಪಾಟೀಲ್‌ ಸ್ಪಷ್ಟಪಡಿಸಿದರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ರಕ್ಷಣೆಗೆ ಈ ಕ್ರಮವೇ ಎಂಬ ಪ್ರಶ್ನೆಗೆ, ಮುಡಾ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ. ಮುಡಾ ಬಗ್ಗೆ ಲೋಕಾಯುಕ್ತ ತನಿಖೆಗೆ ನ್ಯಾಯಾಲಯವೇ ಅನುಮತಿ ನೀಡಿದೆ. ಆದರೆ ಸಿಬಿಐಗೆ ರಾಜ್ಯ ಸರ್ಕಾರ ನೀಡಿರುವ ಹಲವು ಪ್ರಕರಣಗಳ ಬಗ್ಗೆ ಎಂಟು ತಿಂಗಳಾದರೂ ಸಿಬಿಐ ಚಾರ್ಜ್‌ಶೀಟ್‌ ಕೂಡ ಸಲ್ಲಿಕೆ ಮಾಡಿಲ್ಲ.

ಅದೇ ಸಿಬಿಐ ಪೂರ್ವಾಗ್ರಹ ಪೀಡಿತವಾಗಿ ಒಂದು ಪಕ್ಷದವರನ್ನು ಗುರಿಯಾಗಿಸಿ ಸಿಬಿಐ ಕೆಲಸ ಮಾಡುತ್ತಿದೆ. ಚುನಾವಣೆ ಸಮಯದಲ್ಲೂ ಒಂದೇ ಪಕ್ಷದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಕಳೆದ ಎರಡು ವರ್ಷದಲ್ಲೇ ಇಂತಹ ನೂರಾರು ಉದಾಹರಣೆಗಳಿವೆ. ಹೀಗಾಗಿ ಅನಿವಾರ್ಯವಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ಡಿ.ಕೆ.ರವಿ, ಎಂ.ಕೆ.ಗಣಪತಿ ಪ್ರಕರಣದಲ್ಲಿ ಸಿಬಿಐ ನಿಮ್ಮ ಸರ್ಕಾರದ ಪರವೇ ವರದಿ ನೀಡಿಲ್ಲವೇ ಎಂಬ ಪ್ರಶ್ನೆಗೆ, ಅದು ಬೇರೆ ಪ್ರಶ್ನೆ. ಈಗ ಕಳೆದ ಎರಡು ವರ್ಷದಿಂದ ಸಿಬಿಐ ನಡೆಯನ್ನು ಗಮನಿಸಿ. ತನಿಖಾ ಸಂಸ್ಥೆಗಳನ್ನು ಕೇಂದ್ರ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಿ ಎಂದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ