ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿ: ಡಾ. ಸಿದ್ದಪ್ಪ ಹೊಟ್ಟಿ

KannadaprabhaNewsNetwork | Published : Jun 29, 2024 12:34 AM

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದಲ್ಲೂ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಅವರನ್ನು ಗುರುತಿಸಿ, ಸೂಕ್ತ ವೇದಿಕೆ ಕಲ್ಪಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನೀನಾಸಂ ಕಲಾವಿದ ಶ್ರೀನಿವಾಸ್ ಕಲಾ ಸಂಘ ಕಟ್ಟಿಕೊಂಡು ಪ್ರತಿಭಾವಂತರಿಗೆ ಸದವಕಾಶ ಕಲ್ಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮತ್ತು ಎನ್‌ಎಎಫ್‌ಇಡಿ ರಾಷ್ಟ್ರೀಯ ಉಪಾಧ್ಯಕ್ಷರೂ ಆದ ಡಾ. ಸಿದ್ದಪ್ಪ ಹೊಟ್ಟಿ ಹೇಳಿದರು.

- ದೋರನಹಳ್ಳದಲ್ಲಿ ಸಂಗೀತ ಮತ್ತು ನಾಟಕೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಹಾಪುರ

ಕಲ್ಯಾಣ ಕರ್ನಾಟಕ ಭಾಗದಲ್ಲೂ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಅವರನ್ನು ಗುರುತಿಸಿ, ಸೂಕ್ತ ವೇದಿಕೆ ಕಲ್ಪಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನೀನಾಸಂ ಕಲಾವಿದ ಶ್ರೀನಿವಾಸ್ ಕಲಾ ಸಂಘ ಕಟ್ಟಿಕೊಂಡು ಪ್ರತಿಭಾವಂತರಿಗೆ ಸದವಕಾಶ ಕಲ್ಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮತ್ತು ಎನ್‌ಎಎಫ್‌ಇಡಿ ರಾಷ್ಟ್ರೀಯ ಉಪಾಧ್ಯಕ್ಷರೂ ಆದ ಡಾ. ಸಿದ್ದಪ್ಪ ಹೊಟ್ಟಿ ಹೇಳಿದರು.

ತಾಲೂಕಿನ ದೋರನಹಳ್ಳಿ ಗ್ರಾಮದ ಚಿಕ್ಕಮಠದಲ್ಲಿ ಸೃಜನಶೀಲ ಸಾಂಸ್ಕೃತಿಕ ಕಲಾ ಸಂಘದಿಂದ ನಡೆದ ಸಂಗೀತ ಮತ್ತು ನಾಟಕೋತ್ಸವ ಕಾರ್ಯಕ್ರಮ ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಲಾವಿದರಿಗೆ ಪ್ರೇಕ್ಷಕರ ಪ್ರೋತ್ಸಾಹದ ಜತೆಗೆ ಸರ್ಕಾರದ ಸೂಕ್ತ ಸೌಲಭ್ಯವೂ ಅಗತ್ಯವಿದೆ. ಯಾದಗಿರಿ ಜಿಲ್ಲೆಯಲ್ಲಿಯೇ ಸಾಕಷ್ಟು ಸಂಗೀತಗಾರರು, ಕಲಾವಿದರು, ಬಾಲ ಪ್ರತಿಭೆಗಳಿದ್ದು, ಅವರನ್ನು ಪ್ರೋತ್ಸಾಹಿಸಬೇಕಿದೆ. ಆಗ ಈ ಭಾಗದ ಪ್ರತಿಭೆ ಬೆಂಗಳೂರಿನ ಕಲಾರಂಗ ಆಳುವುದರಲ್ಲಿ ಎರಡು ಮಾತಿಲ್ಲ ಎಂದರು.

ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿ, ನೀನಾಸಂ ರಂಗ ಕೇಂದ್ರದಲ್ಲಿ ನಟನೆ ಕುರಿತು ಅಭ್ಯಾಸ ಮಾಡಿದ ಸ್ಥಳೀಯ ಕಲಾವಿದ ಶ್ರೀನಿವಾಸ ಅಪ್ರತಿಮ ಕಲಾವಿರಾಗಿದ್ದು, ಅವರು ರಚಿಸಿದ ಕಿರು ನಾಟಕ ಟ್ಯಾಬ್ಲೆಟ್ ಅದ್ಭುತ ಸಂದೇಶ ನೀಡುವ ನಾಟಕವಾಗಿದೆ. ಕಲಾವಿದರೂ ಸಹ ಅಮೋಘ ಪ್ರದರ್ಶನ ನೀಡುವ ಮೂಲಕ ಜನಮನ ಸೂರೆಗೊಂಡರು ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಂದ್ರಾವತಿ ದೊರೆ ಅಧ್ಯಕ್ಷತೆ ವಹಿಸಿದ್ದರು. ನೀನಾಸಂ ಶ್ರೀನಿವಾಸ್ ಉಪಸ್ಥಿತರಿದ್ದರು. ಸಂಗೀತಗಾರ ಬೂದಯ್ಯ ಹಿರೇಮಠ ಪ್ರಾರ್ಥಿಸಿದರು. ಪತ್ರಕರ್ತ ಮಹೇಶ ಪತ್ತಾರ ನಿರೂಪಿಸಿ, ವಂದಿಸಿದರು. ಪತ್ರಕರ್ತ, ನಟ ವಿಶಾಲ್ ಶಿಂಧೆ, ಮಲ್ಲಣ್ಣ ಪೂಜಾರಿ, ನಾಗರಾಜ ಅಣಬಿ ಇತರರಿದ್ದರು.

----

ಕೋಟ್ -1: ಸಗರನಾಡಿನ ಕೇಂದ್ರ ಸ್ಥಾನವಾದ ಶಹಾಪುರವನ್ನು ಸಾಂಸ್ಕೃತಿಕ ಜಿಲ್ಲೆಯನ್ನಾಗಿ ಜಿಲ್ಲಾಡಳಿತ ಘೋಷಿಸಬೇಕು. ಯಾದಗಿರಿ ಜಿಲ್ಲೆಯಲ್ಲಿಯೇ ಶಹಾಪುರ ತಾಲೂಕು, ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಸಾಹಿತ್ಯಕವಾಗಿ ಹೆಸರುವಾಸಿಯಾಗಿದೆ. ನೂರಾರು ಕಲಾವಿದರು, ಬಾಲ ಪ್ರತಿಭೆಗಳೂ ಇಲ್ಲಿದ್ದಾರೆ. ಅವರಿಗೆಲ್ಲ ಸೂಕ್ತ ವೇದಿಕೆ ಕಲ್ಪಿಸುವ ಕೆಲಸವಾಗಬೇಕಿದೆ.

ಮಲ್ಲಿಕಾರ್ಜುನ ಮುದ್ನೂರ. ಅಧ್ಯಕ್ಷರು, ಕಾರ್ಯ ನಿರತ ಪತ್ರಕರ್ತರ ಸಂಘ, ಶಹಾಪುರ.

--------

27ವೈಡಿಆರ್1

ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಚಿಕ್ಕಮಠದಲ್ಲಿ ನಡೆದ ಸಂಗೀತ ಮತ್ತು ನಾಟಕೋತ್ಸವ ಕಾರ್ಯಕ್ರಮವನ್ನು ವಾದ್ಯ ನುಡಿಸುವ ಮೂಲಕ ಉದ್ಘಾಟಿಸಲಾಯಿತು.

----

27ವೈಡಿಆರ್2

ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ಸಂಗೀತ ಮತ್ತು ನಾಟಕೋತ್ಸವ ಕಾರ್ಯಕ್ರಮದಲ್ಲಿ ಟ್ಯಾಬ್ಲೆಟ್ ಕಿರು ನಾಟಕ ಅದ್ಭುತ ಪ್ರದರ್ಶನ ನೀಡಿದ ನೀನಾಸಂ ಶ್ರೀನಿವಾಸ ಕಲಾ ತಂಡದ ದೃಶ್ಯ.

----

Share this article