ಹರಪನಹಳ್ಳಿ: ಜನಸಂಖ್ಯೆ ಹೆಚ್ಚಾದಂತೆ ಭೂಮಿ ವಿಸ್ತರಣೆಯಾಗುವುದಿಲ್ಲ. ಆದರೆ ನಾವು ಜನಸಂಖ್ಯೆ ನಿಯಂತ್ರಣ ಮಾಡುವುದು ಒಂದು ಭಾಗ, ಜನಸಂಖ್ಯೆಗನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಕೊಡಿಸಬೇಕಾಗುತ್ತದೆ ಎಂದು ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ತಿಳಿಸಿದ್ದಾರೆ.
ಪ್ರಕೃತಿಯಿಂದ ಸಿಗುವ ಗಾಳಿ, ನೀರು ಬಿಟ್ಟರೆ ನಾವು ಕೃತಕವಾಗಿ ಆಹಾರ ಪದಾರ್ಥಗಳ ತಯಾರು ಮಾಡಬೇಕು,ಅವುಗಳನ್ನು ಆಧುನಿಕ ವ್ಯವಸಾಯ ಪದ್ಧತಿಯಿಂದ ಅಳವಡಿಸಿಕೊಂಡು ಅದಕ್ಕೆ ಬೇಕಾಗಿರುವ ಆಹಾರ ಸೌಲಭ್ಯ ಕೊಡಬೇಕಾಗುತ್ತದೆ ಎಂದರು.
ಯಂತ್ರೋಪಕರಣಗಳು, ರಸಗೊಬ್ಬರ, ಕೃಷಿ ಪದ್ಧತಿಯಲ್ಲಿ ಆಧುನಿಕತೆ ಬಳಸಿಕೊಳ್ಳುವುದು, ಕ್ರಿಮಿನಾಶಕ ಸಿಂಪರಣೆ ಮಾಡುವುದು ಇವೆಲ್ಲಾವನ್ನು ಮಾಡಿದರೂ ಸಹ ಇವತ್ತು ನಮ್ಮ ಕಣ್ಣ ಮುಂದೆ ದೊಡ್ಡ ಸವಾಲುಗಳಿವೆ. ಇಂದು ಹಸಿರು ಕ್ರಾಂತಿ ಮಾಡಬೇಕಾಗಿದೆ, ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ ಹೆಚ್ಚಿನ ಪ್ರಾದ್ಯಾನತೆ ಕೊಡಲಾಗಿತ್ತು, ನಮ್ಮ ಮುಂದೆ ಹತ್ತಾರು ಸವಾಲುಗಳಿವೆ ಅವುಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದರು. ಈ ಬಾರಿ ಯೂರಿಯಾ ರಸಗೊಬ್ಬರದ ಕೊರತೆಯಿತ್ತು, ಮುಂದಿನ ಬಾರಿ ಕೊರತೆ ಬಾರದಂತೆ ಮುಂಜಾಗೃತ ಕ್ರಮ ಕೊಳ್ಳಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.ತಾಲ್ಲೂಕು ಸಹಾಯಕ ಕೃಷಿ ನಿರ್ದೆಶಕ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಪದ್ಧತಿಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಸಾಯನಿಕ ಕೃಷಿ ಪದ್ಧತಿಯನ್ನು ಬಿಡಬೇಕು, ರಾಸಾಯನಿಕ ಗೊಬ್ಬರದಿಂದ ಬೆಳೆದಂತಹ ಬೆಳೆಯಿಂದಾಗಿ ನಾವು ತಿನ್ನುವಂತಹ ಆಹಾರ, ಸೇವಿಸುವ ಗಾಳಿ, ಕುಡಿಯುವ ನೀರು ಸಹ ವಿಷಪೂರಿತವಾಗಿದೆ. ಈ ವಿಷಪೂರಿತ ಆಹಾರವನ್ನು ನಾವು ತಿಂದು ನಮ್ಮ ಅರೋಗ್ಯವನ್ನು ಹದಗೆಡೆಸಿಕೊಂಡಿದ್ದೇವೆ ಎಂದರು.