ಜಿ ಪ್ಲಸ್‌ 2 ವಸತಿ ಬಡಾವಣೆಗೆ ಮೂಲಭೂತ ಸೌಲಭ್ಯ ಒದಗಿಸಿ

KannadaprabhaNewsNetwork |  
Published : Mar 13, 2025, 12:53 AM IST
ಹಳಿಯಾಳ ಪಟ್ಟಣದ ಜಿ ಪ್ಲಸ್ 2 ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ನಿವಾಸಿಗಳ ನಿಯೋಗ ಸೋಮವಾರ ತಾಲೂಕಾಡಳಿತ ಮತ್ತು ಪುರಸಭೆಗೆ ಮನವಿ ಸಲ್ಲಿಸಿತು. | Kannada Prabha

ಸಾರಾಂಶ

ಜಿ ಪ್ಲಸ್ 2 ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು.

ಹಳಿಯಾಳ: ಪಟ್ಟಣದ ಜಿ ಪ್ಲಸ್ 2 ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಬಡಾವಣೆಗೆ ರಸ್ತೆ ನಿರ್ಮಿಸಿ ಕೊಡಬೇಕೆಂದು ಬಡಾವಣೆ ನಿವಾಸಿಗಳ ನಿಯೋಗ ತಾಲೂಕಾಡಳಿತ, ಪುರಸಭೆಗೆ ಮನವಿ ಸಲ್ಲಿಸಿತು.ಜಿ ಪ್ಲಸ್ 2 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ತಾಲೂಕು ಆಡಳಿತ ಸೌಧಕ್ಕೆ ತೆರಳಿದ ಬಡಾವಣೆ ನಿವಾಸಿಗಳು ತಹಸೀಲ್ದಾರ್‌ ಪ್ರವೀಣ ಹುಚ್ಚಣ್ಣನವರ ಅವರಿಗೆ ಮನವಿ ಸಲ್ಲಿಸಿ, ತಮ್ಮ ಅಳಲು ತೋಡಿಕೊಂಡರು.

ವಸತಿ ಬಡಾವಣೆಯಲ್ಲಿ 12 ಮನೆಗಳಿಗೆ ಒಟ್ಟು 4 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಅಳವಡಿಸಲಾಗಿದ್ದು, ಪುರಸಭೆ ಸಮರ್ಪಕವಾಗಿ ನೀರು ಪೂರೈಸದೇ ಇರುವುದರಿಂದ ನೀರು ಟ್ಯಾಂಕ್ ವರೆಗೆ ಏರುವುದೇ ಇಲ್ಲ. ಹೀಗಾಗಿ ಇಡೀ ಬಡಾವಣೆಗೆ ಜೀವಜಲದ ಕೊರತೆ ಎದುರಾಗಿದೆ. ಶೌಚಾಲಯದ ಎಸ್ಟಿಪಿ ಬಾಕ್ಸ್‌ಗಳು ಬಡಾವಣೆಯ ಬಳಿಯೇ ನಿರ್ಮಿಸಿದ್ದರಿಂದ ನಿರ್ವಹಣೆ ಕೊರತೆಯಿಂದಾಗಿ ಅತಿಯಾದ ದುರ್ನಾತ ಬರಲಾರಂಭಿಸಿದೆ. ಬಡಾವಣೆಯಲ್ಲಿ ಕಚ್ಚಾ ರಸ್ತೆ ಇದ್ದು, ರಸ್ತೆ ನಿರ್ಮಾಣ ಮಾಡಬೇಕು ಎಂದು ಪುರಸಭೆಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ತಮ್ಮ ದೂರು-ದುಮ್ಮಾನಗಳನ್ನು ಹೇಳಿದರು. ಅಹವಾಲು ಆಲಿಸಿದ ತಹಸೀಲ್ದಾರರು ಬಡಾವಣೆಯ ಸಮಸ್ಯೆಗಳನ್ನು ಪುರಸಭೆ ಗಮನಕ್ಕೆ ತರುವ ಭರವಸೆ ನೀಡಿದರು.

ಖಾಲಿ ಮನೆಗಳನ್ನು ನೀಡಿ:

ನಂತರ ಬಡಾವಣೆ ನಿವಾಸಿಗಳ ನಿಯೋಗ ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಬಡಾವಣೆಯಲ್ಲಿ ಜೀವಜಲದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ನೀರಿಗೆ ರಭಸ ಇಲ್ಲದೇ ಇರುವುದರಿಂದ ನೀರು ಮೇಲೇರುತ್ತಿಲ್ಲ. ಮನೆ ಮಂಜೂರಾಗಿದ್ದರೂ ಫಲಾನುಭವಿಗಳು ಬಂದು ಉಳಿಯದೇ ಇರುವುದರಿಂದ ಬಡಾವಣೆಯಲ್ಲಿ ಸಾಕಷ್ಟು ಮನೆಗಳು ಖಾಲಿಯಾಗಿವೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಬಡಾವಣೆಯ ಮೇಲ ಅಂತಸ್ತಿನ ನಿವಾಸಿಗಳಿಗೆ ಖಾಲಿಯಿರುವ ನೆಲಅಂತಸ್ತಿನ ಮನೆಗಳನ್ನು ಬದಲಾವಣೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಅಹವಾಲು ಆಲಿಸಿದ ಮುಖ್ಯಾಧಿಕಾರಿ, ಶಾಸಕ ದೇಶಪಾಂಡೆ ವಿಶೇಷ ಪ್ರಯತ್ನಗಳಿಂದ ಜಿ-ಪ್ಲಸ್ 2 ಬಡಾವಣೆಯಲ್ಲಿ ಈ ವರೆಗೂ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಫಲಾನುಭವಿಗಳಿಗೆ ನೀಡಿದ ವಿಶೇಷ ರಿಯಾಯಿತಿ ಸೌಲಭ್ಯಗಳನ್ನು ತಿಳಿಸಿ, ಬಡಾವಣೆಯವರು ಆಪೇಕ್ಷಿತ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.

ನಿಯೋಗದಲ್ಲಿ ಜಿ ಪ್ಲಸ್ 2 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪದ್ಮಾ ಜಕಾತಿ, ಮೆಹಬೂಬ ನದಾಫ, ವಿಲಿಯಂ ಕೆನಡಿ, ಅಲ್ಲಿಸಾಬ ಮುಲ್ಲಾ, ಸಂತೋಷ ಘಾಡಿ, ಜ್ಯೋತಿ ರೊಜಾರಿಯೋ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌