ಕನ್ನಡಪ್ರಭ ವಾರ್ತೆ ಪುತ್ತೂರು
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೊರಗ ಸಮುದಾಯದ ಮುಖಂಡರು ಸರ್ಕಾರ ಒದಗಿಸಿರುವ ಜಮೀನುಗಳಲ್ಲಿ ಜಾಗದ ಗಡಿಗುರುತು ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು. ಕೊರಗ ಸಮುದಾಯಕ್ಕೆ ಮನೆ ನಿರ್ಮಾಣಕ್ಕೆ ಸರಕಾರ ನೀಡುವ ರೂ. ೩.೫ ಲಕ್ಷ ಅನುದಾನ ಸಾಲುತ್ತಿಲ್ಲ. ಹೀಗಾಗಿ ಗ್ರಾಮ ಪಂಚಾಯತ್ ಅನುದಾನದಿಂದ ಹೆಚ್ಚುವರಿಯಾಗಿ ಹಣ ನೀಡಲು ಕ್ರಮ ಕೈಗೊಳ್ಳುವಂತೆ ಕೊರಗ ಸಮುದಾಯದ ಮುಖಂಡರು ಒತ್ತಾಯಿಸಿದರು.
ಸರ್ಕಾರ ನೀಡುವ ಅನುದಾನದಲ್ಲಿ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದಾಗಿ ಹೆಚ್ಚಿನ ಕೊರಗರ ಮನೆ ನಿರ್ಮಾಣವು ಅಪೂರ್ಣ ಸ್ಥಿತಿಯಲ್ಲಿದೆ. ವಿವಿಧ ಗ್ರಾಮದಲ್ಲಿರುವ ಕೊರಗ ಸಮುದಾಯದ ಪಟ್ಟಿಯನ್ನು ಈಗಾಗಲೇ ಇಲಾಖೆಗೆ ಈಗಾಗಲೇ ಸಲ್ಲಿಸಲಾಗಿದ್ದು, ಇದರಂತೆ ಮನೆ ನಿರ್ಮಾಣದ ಫಲಾನುಭವಿಗಳಿಗೆ ಪಂಚಾಯತ್ನಿಂದ ಹೆಚ್ಚಿನ ಅನುದಾನ ಒದಗಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು. ಕೊರಗ ಅಭಿವೃದ್ಧಿ ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ, ಕೊರಗ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ತನಿಯ ಕೊರಗ ಒಳತ್ತಡ್ಕ, ಮುಖಂಡ ಸುರೇಶ್ ಕೊರಗ ಮತ್ತಿತರರು ಸಲಹೆ ಸೂಚನೆ ನೀಡಿದರು.ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಉಪಸ್ಥಿತರಿದ್ದರು.