ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೆಲಸ ಒದಗಿಸಿ: ಕರೀಂ ಅಸದಿ

KannadaprabhaNewsNetwork | Published : Dec 22, 2024 1:35 AM

ಸಾರಾಂಶ

ಮುಂಡಗೋಡ ತಾಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕಾರವಾರ: ಜಿಪಂನಿಂದ 2024-25ನೇ ಸಾಲಿಗೆ ಅನುಮೋದಿಸಲಾದ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಕಾರ್ಯವಾಗಬೇಕು ಎಂದು ಜಿಪಂ ಯೋಜನಾ ನಿರ್ದೇಶಕ (ಡಿಆರ್‌ಡಿಎ) ಕರೀಂ ಅಸದಿ ಹೇಳಿದರು.

ಮುಂಡಗೋಡ ತಾಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನರೇಗಾದಡಿ ನಿಗದಿಪಡಿಸಿದ ಮಾನವ ದಿನಗಳ ಸೃಜನೆಯ ವಾರ್ಷಿಕ ಗುರಿ ಸಾಧನೆಗಾಗಿ ತಾಲೂಕಿನ ಎಲ್ಲ ಗ್ರಾಪಂಗಳು, ಕೃಷಿ, ಅರಣ್ಯ, ತೋಟಗಾರಿಕೆ ಸೇರಿದಂತೆ ಎಲ್ಲ ಅನುಷ್ಠಾನ ಇಲಾಖೆಗಳು ಅಗತ್ಯವಿರುವ ಪೂರ್ವ ಸಿದ್ಧತಾ ಕಾರ್ಯಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ತಾಲೂಕಿನಾದ್ಯಂತ ನರೇಗಾ ಹಾಗೂ ಶಿಕ್ಷಣ ಇಲಾಖೆಯ ಒಗ್ಗೂಡಿಸುವಿಕೆಯಡಿ ಕೈಗೊಳ್ಳುವ ಶಾಲಾ ಅಭಿವೃದ್ಧಿ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ಪ್ರಾರಂಭಿಸಿ ನರೇಗಾ ಅನುದಾನದ ಭಾಗವನ್ನು ಪೂರ್ಣಗೊಳಿಸಬೇಕು. ತಾಲೂಕಿನ ಎಲ್ಲ ಗ್ರಾಪಂಗಳು ಸೇರಿದಂತೆ ವಾರ್ಷಿಕವಾಗಿ ಒಟ್ಟು 2,60,000 ಮಾನವ ದಿನಗಳ ಸೃಜನೆಯ ಗುರಿ ನಿಗದಿಪಡಿಸಿದ್ದು, ಈ ವರೆಗೆ ನಿಗದಿತ ಗುರಿ ಪೈಕಿ 1,90,877 ಮಾನವ ದಿನ ಸೃಜನೆ ಮಾಡಲಾಗಿದೆ. ಇನ್ನೂ 69,123 ದಿನಗಳು ಬಾಕಿಯಿದ್ದು, ಆರ್ಥಿಕ ವರ್ಷ ಮುಕ್ತಾಯಕ್ಕೆ ಉಳಿದಿರುವ ಮುಂದಿನ 3 ತಿಂಗಳಲ್ಲಿ ಬಾಕಿ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ. 100ರಷ್ಟು ಪ್ರಗತಿ ಸಾಧನೆಗೆ ಗ್ರಾಪಂಗಳು, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ನರೇಗಾದಡಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪರಸ್ಪರ ಒಗ್ಗೂಡಿಕೊಂಡು ಶ್ರಮಿಸಬೇಕಿದೆ. ಜತೆಗೆ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆಗಾಗಿ ಆನ್‌ಲೈನ್‌ನ ಪಿಡಿಒ ಲಾಗಿನ್‌ನಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಹಾಗೂ ವೈಯಕ್ತಿಕ ಕಾಮಗಾರಿ ಸೇರ್ಪಡೆ ಮಾಡಿಸಬೇಕು. ಆನ್‌ಲೈನ್‌ನ ಕ್ರಿಯಾ ಯೋಜನೆಯಲ್ಲಿ ಸೇರಿಸಲಾದ ಕಾಮಗಾರಿಗಳ ಫ್ರೀಮೇಜರ್‌ಮೆಂಟ್‌ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ನರೇಗಾ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ, ಪಿಆರ್‌ಇಡಿ ಎಇಇ ಪ್ರದೀಪ ಭಟ್, ಆರ್‌ಡಬ್ಲ್ಯುಎಸ್‌ನ ಎಇಇ ರಾಜೇಶ್ವರಿ ಕದಂ, ತಾಲೂಕು

ಮಟ್ಟದ ವಿವಿದ ಇಲಾಖೆಯ ಅಧಿಕಾರಿಗಳು ಇದ್ದರು.

Share this article