ವಸತಿ ನಿಲಯದ ಮಕ್ಕಳಿಗೆ ಸೌಲಭ್ಯ ಒದಗಿಸಿ: ನ್ಯಾಯಾಧೀಶ ಮಹಾಂತೇಶ ದರಗದ

KannadaprabhaNewsNetwork |  
Published : Dec 06, 2024, 08:56 AM IST
ಪೋಟೊ5ಕೆಎಸಟಿ3: ಕುಷ್ಟಗಿ ತಾಲೂಕಿನ ಹೂಲಗೇರಾ ವಸತಿ ನಿಲಯಕ್ಕೆ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಅವರು ನಿಲಯಪಾಲಕರೊಂದಿಗೆ ಚರ್ಚಿಸುತ್ತಿರುವದು.5ಕೆಎಸಟಿ3ಎ: ಕುಷ್ಟಗಿ ತಾಲೂಕಿನ ಹೂಲಗೇರಾ ವಸತಿ ನಿಲಯಕ್ಕೆ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಮಕ್ಕಳೊಂದಿಗೆ ಚರ್ಚಿಸುತ್ತಿರುವದು.5ಕೆಎಸಟಿ3ಬಿ: ಕುಷ್ಟಗಿ ತಾಲೂಕಿನ ಹೂಲಗೇರಾ ವಸತಿ ನಿಲಯಕ್ಕೆ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಹಾಗೂ ಕುಷ್ಟಗಿಯ ನ್ಯಾಯಾಧೀಶರು ಅಡುಗೆ ರುಚಿಯನ್ನು ನೋಡುತ್ತಿರುವದು. | Kannada Prabha

ಸಾರಾಂಶ

ತಾಲೂಕಿನ ಹೂಲಗೇರಾ ಗ್ರಾಮದ ಡಿ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಕೆಂಡಾ ಮಂಡಲರಾದರು.

ಹೂಲಗೇರಾ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ನ್ಯಾಯಾಧೀಶರ ಭೇಟಿ । ಅವ್ಯವಸ್ಥೆ ಕಂಡು ಕೆಂಡಾಮಂಡಲ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ಹೂಲಗೇರಾ ಗ್ರಾಮದ ಡಿ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಕೆಂಡಾ ಮಂಡಲರಾದರು.

ವಸತಿ ನಿಲಯಕ್ಕೆ ಬುಧವಾರ ರಾತ್ರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ, ಕುಷ್ಟಗಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಚೌಳಗಿ ಭೇಟಿ ನೀಡಿ ವಸತಿ ನಿಲಯದಲ್ಲಿರುವ ಮಕ್ಕಳಿಂದ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ಪಡೆದರು.

ವಸತಿ ನಿಲಯದ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹಂಚಿಕೊಂಡು, ನಮಗೆ ಹೊಟ್ಟೆಯ ತುಂಬಾ ಊಟ ಕೊಡಲ್ಲ, ಮಲಗಿಕೊಳ್ಳಲು ಬೆಡ್ ಇಲ್ಲ, ಒಂದೇ ಜಮಖಾನ ಕೊಡುತ್ತಾರೆ. ಸ್ನಾನ ಮಾಡಲು ಬಿಸಿನೀರು ಕೊಡುತ್ತಿಲ್ಲ. ಬಟ್ಟೆಯನ್ನು ಹೊರಗಡೆ ತೊಳೆಯುವಂತಹ ಸ್ಥಿತಿ ಇದೆ. ಓದಲು ಗ್ರಂಥಾಲಯವೂ ಇಲ್ಲ, ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಇಲ್ಲ. ಕಂಪ್ಯೂಟರ್‌ ಸೇರಿದಂತೆ ಅನೇಕ ಸೌಲಭ್ಯಗಳನ್ನು ನಮಗೆ ನೀಡುತ್ತಿಲ್ಲ ಎಂದರು.

ಅಡುಗೆ ಸಿಬ್ಬಂದಿಗಳಾದ ಬಸವರಾಜ ಮತ್ತು ಸಂಗಪ್ಪ ಹಾಗೂ ಬಸಮ್ಮ ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಿದ್ದು, ವಸತಿ ನಿಲಯ ಮೇಲ್ವಿಚಾರಕ ಗುರುನಾಥ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ವಸತಿ ನಿಲಯ ಪರಿಶೀಲನೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಅಡುಗೆಯ ರುಚಿ ನೋಡಿದರು. ನಂತರ ಮಾತನಾಡಿ, ಈ ವಸತಿ ನಿಲಯವೂ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಮಾಹಿತಿ ಇದ್ದು, ಇನ್ನೂ ಮುಂದೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಬೇಕು ಇಲ್ಲವಾದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಒದಗಿಸಿಕೊಡಬೇಕು. ಎಲ್ಲಾ ಮಕ್ಕಳಿಗೆ ಶುಚಿ ಮತ್ತು ರುಚಿಯಾದ ಊಟ ಕೊಡಬೇಕು. ವಸತಿ ನಿಲಯದಲ್ಲಿ ಅನ್ಯರನ್ನು ಸೇರಿಸಿಕೊಳ್ಳಬೇಡಿ, ವಿದ್ಯಾರ್ಥಿಗಳ ಓದಿಗಾಗಿ ಸರಿಯಾದ ರೀತಿಯಲ್ಲಿ ಗಾಳಿ-ಬೆಳಕು, ಮ್ಯಾಟ್ ಅಥವಾ ಜಮಖಾನ ಒದಗಿಸಬೇಕು. ವಾರ್ಡನ್‌ ಸಿಬ್ಬಂದಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಸರಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಸನಾತನ ಸಂಸ್ಕೃತಿ ಬೆಳೆಸಿ
ಗ್ರಾಪಂಗಳ ಶಕ್ತಿ ಕುಗ್ಗಿಸುತ್ತಿರುವ ಕೇಂದ್ರದ ವಿರುದ್ಧ ಹೋರಾಡುವ ಸ್ಥಿತಿ