ಕನ್ನಡಪ್ರಭ ವಾರ್ತೆ ಕೊಲ್ಹಾರ
ವಿಜಯಪುರ-ಬಾಗಲಕೋಟ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳಗಡೆಯಾಗುವ ಸುಮಾರು 1.30 ಲಕ್ಷ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ ಬೆಲೆ ನಿಗದಿ ಮಾಡಿ ಪರಿಹಾರ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದ ಮುಖಂಡರು ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಈ ವೇಕೆ ಮಾತನಾಡಿದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ವಿಜಯಪುರ-ಬಾಗಲಕೋಟ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳಗಡೆಯಾಗುವ ಸುಮಾರು 1.30 ಲಕ್ಷ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ ಪ್ರತಿ ಎಕರೆಗೆ ನೀರಾವರಿ ಭೂಮಿಗೆ ₹ 55 ಲಕ್ಷ, ಒಣ ಬೇಸಾಯದ ಭೂಮಿ ಎಕರೆಗೆ ₹ 45 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಸೆಪ್ಟೆಂಬರ್ 16 ರಂದು ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳಗಡೆಯ ಕುರಿತು ವಿಶೇಷ ಸಂಪುಟ ಸಭೆ ಕರೆದಿದ್ದು, ಆ ಸಭೆಯಲ್ಲಿ ಜಲಾಶಯಗಳಲ್ಲಿ ಮುಳಗಡೆಯಾಗಿರುವ ಮತ್ತು ಕಾಲುವೆಗಳಿಗಾಗಿ ಭೂ-ಸ್ವಾದೀನ ಮಾಡಿಕೊಂಡಿರುವ ಜಮಿನಗಳಿಗೆ ರೈತರ ಬೇಡಿಕೆಯೆಂತೆ ಬೆಲೆ ನಿಗಧಿಮಾಡಬೇಕು. ಆಲಮಟ್ಟಿ ಜಲಾಶಯದಲ್ಲಿ ಮುಳಗಡೆಯಾದ ಕೊಲ್ಹಾರ ಗ್ರಾಮದ 1498 ಮನೆಗಳಿಗೆ ಮತ್ತು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಟಕ್ಕಳಕಿ ಗ್ರಾಮದ ಮನೆಗಳಿಗೆ ಮಾತ್ರ 3 ಷರತ್ತುಗಳ ಮೂಲಕ ಪರಿಹಾರ ನೀಡಲಾಗಿತ್ತು. ಟಕ್ಕಳಕಿ ಗ್ರಾಮಕ್ಕೆ ಹಾಕಿದ್ದ 3 ಷರತ್ತುಗಳನ್ನು ಸಡಿಲಗೊಳಿಸಿ ಸಂತ್ರಸ್ತರಂತೆ ಪರಿಹಾರ ನೀಡಲಾಗಿದೆ. ಆದರೆ, ಕೊಲ್ಹಾರ ಗ್ರಾಮದ 1498 ಮನೆಗಳಿಗೆ ಹಾಕಿದ 3 ಷರತ್ತುಗಳ ಪೈಕಿ 2 ಷರತ್ತುಗಳನ್ನು ತಗೆದು ಹಾಕಲಾಗಿದೆ. 3ನೇ ಷರತ್ತು ಹೆಚ್ಚುವರಿ ಪರಿಹಾರಕೆ ನ್ಯಾಯಾಲಯಕ್ಕೆ ಹೋಗಬಾರದು ಎನ್ನುವ ಕರಾರು ಮಾತ್ರ ಬಾಕಿ ಇದೆ. ಕಾರಣ 1498 ಮನೆ ಮಾಲಿಕರಿಗೆ ಆಲಮಟ್ಟಿ ಯೋಜನೆಯಡಿಯಲ್ಲಿ ಕೊಲ್ಹಾರ ಗ್ರಾಮಕ್ಕೆ ಮಾತ್ರ ಅನ್ಯಾಯವಾಗಿದೆ. ಹೆಚ್ಚುವರಿ ಪರಿಹಾರ ನೀಡಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಚಿವ ಸಂಪುಟ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೆ.21 ರಿಂದ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಚಿವ ಶಿವಾನಂದ ಪಾಟೀಲ ಪ್ರತಿ ಎಕರೆ ಭೂಮಿಗೆ ₹ 35 ಲಕ್ಷ ಪರಿಹಾರ ನೀಡಿದರೆ ಸಾಕು ಎನ್ನುವ ಉದ್ಧಟತನದ ಮಾತುಗಳನ್ನು ಆಡಿದ್ದಾರೆ. ರೈತರಿಗೆ, ರೈತರ ಭೂಮಿಗೆ ಬೆಲೆ ಇಲ್ಲವೇ ಎಂದು ಶಿವಾನಂದ ಪಾಟೀಲ ವಿರುದ್ಧ ಹರಿಹಾಯ್ದರು. ಬೇಕಿದ್ದರೆ ಶಿವಾನಂದ ಪಾಟೀಲ ತಮ್ಮ ಭೂಮಿಯನ್ನು ಬಿಟ್ಟು ಕೊಡಲಿ. ತಮ್ಮದೇ ಸರ್ಕಾರವಿರುವುದರಿಂದ ಎಕರೆ ನೀರಾವರಿ ಭೂಮಿಗೆ ₹ 60 ಲಕ್ಷ ಹಾಗೂ ನೀರಾವರಿ ಅಲ್ಲದ ಭೂಮಿಗೆ ₹ 50 ಲಕ್ಷ ಒದಗಿಸಿಕೊಡಲಿ ಎಂದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರೈತರ, ಸಂತ್ರಸ್ತರ ಬೇಡಿಕೆಯಂತೆ ಭೂಮಿಗೆ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ರೈತರ ಬಗ್ಗೆ ಸ್ವಲ್ಪವೂ ಗಮನ ಕೊಡುತ್ತಿಲ್ಲ. ಈ ಸರ್ಕಾರದ ನೀರಾವರಿ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಳುಗಡೆ ಸಂತ್ರಸ್ತರ ಬಗ್ಗೆ ಮಾತನಾಡುವುದು ನೋಡಿದರೆ ಅವಮಾನ ಎನಿಸುತ್ತದೆ. ಆಲಮಟ್ಟಿಗೆ ಭೇಟಿ ನೀಡಿದಾಗ ವಕೀಲರು ರೈತರ ಹಾದಿಯನ್ನು ತಪ್ಪಿಸುತ್ತಾರೆ ಎಂದು ಹೇಳಿದ್ದಾರೆ. ಮುಳುಗಡೆ ಭೂಮಿ ಹಾಗೂ ಸಂತ್ರಸ್ತರ ಬಗ್ಗೆ ಬಹಳ ಹಗುರವಾಗಿ ಮಾತನಾಡುವುದು ಈ ಸರ್ಕಾರದ ಮಂತ್ರಿಗಳದ್ದಾಗಿದೆ ಎಂದು ಕಿಡಿ ಕಾರಿದರು.ಸಾಂಕೇತಿಕವಾಗಿ ಸುಮಾರು ಅರ್ಧ ಗಂಟೆ ರಾಷ್ಟ್ರೀಯ ಹೆದ್ದಾರಿ-218 ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಶೀಲವಂತ ಮಠದ ಕೈಲಾಸನಾಥ ಶ್ರೀಗಳು, ಮಂಡಲ ಅಧ್ಯಕ್ಷ ಸಿದ್ಧರಾಮ ಕಾಖಂಡಕಿ, ಆವಣ್ಣ ಗಾತಗಿ, ಇಸ್ಮಾಯಿಲಸಾಬ ತಹಸಿಲ್ದಾರ್, ನಂದಬಸಪ್ಫ ಚೌಧರಿ, ಬಾಬು ಭಜಂತ್ರಿ, ಬಸವರಾಜ ಅಂಬಲಜರಿ, ಜಗದೀಶ್ ಸುನಗದ, ಅಖಿಲಗೌಡ ಪಾಟೀಲ, ಸಂಗಪ್ಪ ಬಾಟಿ, ವಿಜಯ ಪೂಜಾರಿ, ಸಂಗಪ್ಪ ಚಿತ್ತಾಪುರ ಸೇರಿದಂತೆ ಇನ್ನಿತರರು ಇದ್ದರು.