ಜಿಲ್ಲೆಯ ನೂತನ ಕೆಪಿಎಸ್ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ: ಡೀಸಿ ಡಾ.ಎಂ.ಆರ್.ರವಿ ಸೂಚನೆ

KannadaprabhaNewsNetwork |  
Published : Jul 19, 2026, 02:15 AM IST
೧೮ಕೆಎಲ್‌ಆರ್-೮ಕೋಲಾರ ಜಿಲ್ಲಾಡಳತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ಸಿಎಸ್‌ಆರ್ ಕೋಶಗಳ ಭಾಗಿಧಾರರ ಸಭೆಯಲ್ಲಿ  ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಅಪರ ಜಿಲ್ಲಾಧಿಕಾರಿ ಮಂಗಳಾ ಇದ್ದರು. | Kannada Prabha

ಸಾರಾಂಶ

ಕೋಲಾರ ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ, ಈ ಗೌರವಕ್ಕೆ ಧಕ್ಕೆ ಬಾರದ ರೀತಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳಬೇಕು, ಹೊಸದಾಗಿ ಮಾಡಿರುವ ಕೆಪಿಎಸ್ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಶೀಘ್ರ ಮಾಡಬೇಕು, ಇಲ್ಲವಾದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಕೋಲಾರ

ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡುವ ಮೂಲಕ ಅಲ್ಲಿ ಓದುವ ಮಕ್ಕಳಿಗೆ ಎಲ್ಲಾ ಮೂಲ ಸೌಲಭ್ಯಗಳು ಸಿಗುವಂತೆ ಮಾಡಿ, ಮಕ್ಕಳು ಶಾಲೆಯತ್ತ ಬರಲು ಆಕರ್ಷಣೀಯಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ಸಿಎಸ್‌ಆರ್ ಕೋಶಗಳ ಭಾಗಿದಾರರ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೆಪಿಎಸ್ ಶಾಲೆಗಳನ್ನಾಗಿ ಪರಿವರ್ತನೆ ಮಾಡಿರುವ ಶಾಲೆಗಳಿಗೆ ಅಗತ್ಯವಾದ ಸೌಲಭ್ಯಗಳು ಮತ್ತು ನೆರವನ್ನು ಜಿಲ್ಲೆಯಲ್ಲಿನ ವಿವಿಧ ಕಂಪನಿಗಳ ಸಿಎಸ್‌ಆರ್‌ನಿಧಿಯಿಂದ ಪೂರೈಸುವ ಕೆಲಸವಾಗುತ್ತಿದೆ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ, ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮವನ್ನು ಜಾರಿಗೆ ತಂದಿದೆ ಎಂದರು.

ಸಿಎಸ್‌ಆರ್ ನಿಧಿಯ ಬಳಕೆಗೆ ವ್ಯವಸ್ಥಿತ ಚೌಕಟ್ಟು ರೂಪಿಸಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಿಸಿಎಸ್‌ಆರ್ ಕೋಶಗಳನ್ನು ರಚಿಸಲಾಗಿದೆ. ರಾಜ್ಯ ಶಾಲಾ ಶಿಕ್ಷಣ ಸಿಸಿಎಸ್‌ಆರ್ ಕೋಶವನ್ನು ಮುಖ್ಯಮಂತ್ರಿಗಳು ಮುನ್ನಡೆಸಿದರೆ, ಜಿಲ್ಲಾ ಮಟ್ಟದ ಕೋಶಗಳಿಗೆ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ ಎಂದು ತಿಳಿಸಿದರು.

ಸಿಎಸ್‌ಎಸ್‌ಆರ್ ನಿಧಿ ದುರುಪಯೋಗವಾಗುವುದಕ್ಕೆ ಅವಕಾಶ ನೀಡದಿರಿ, ನಿಗಧಿಯಾದ ಮೂಲ ಕಾರ್ಯಕ್ಕೆ ಬಳಕೆಯಾಗಬೇಕು ಎಂದ ಅವರು, ಶಿಕ್ಷಣ ಕ್ಷೇತ್ರ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿ, ಸರ್ಕಾರಿ ಶಾಲೆಗಳಿಗೆ ಬರುವ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ, ಈ ಗೌರವಕ್ಕೆ ಧಕ್ಕೆ ಬಾರದ ರೀತಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳಬೇಕು, ಹೊಸದಾಗಿ ಮಾಡಿರುವ ಕೆಪಿಎಸ್ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಶೀಘ್ರ ಮಾಡಬೇಕು, ಇಲ್ಲವಾದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು.

ನೆರವು ಪಡೆದಿರುವ ಶಾಲೆಗಳ ವಿವರ:

ಈ ಸಭೆಯ ಸಿಎಸ್‌ಎಸ್‌ಆರ್ ನಿಧಿಗೆ ತಾಲೂಕಿನ ರಾಜಕಲ್ಲಹಳ್ಳಿ ಕೆಪಿಎಸ್ ಶಾಲೆಗೆ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ನೆರವು, ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಕೆಪಿಎಸ್ ಶಾಲೆಗೆ ಓಎಸ್‌ಎಸ್‌ಎಎಟಿ ಕಂಪನಿಯಿಂದ ನೆರವು, ಮುಳಬಾಗಿಲು ತಾಲೂಕಿನ ತಾಯಲೂರು ಕೆಪಿಎಸ್ ಶಾಲೆಗೆ ಹೋಂಡಾ ಕಂಪನಿಯಿಂದ ನೆರವು, ಮುಳಬಾಗಿಲು ನಗರ ಕೆಪಿಎಸ್ ಶಾಲೆಗೆ ಟಾಟಾ ಅಡ್ವಾನ್ಸ್ ಕಂಪನಿ ನೆರವು ಒದಗಿಸಲು ಸೂಚಿಸಿ, ಮುಂದಿನ ೫ ವರ್ಷಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ ಮಾತನಾಡಿ, ಇಂದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ ಆತಂಕಕಾರಿಯಾಗಿದೆ, ಇದು ತಪ್ಪಬೇಕು, ಮಕ್ಕಳು ಸರ್ಕಾರಿ ಶಾಲೆಯತ್ತ ಬರುವಂತೆ ಮಾಡುವಲ್ಲಿ ಅಗತ್ಯ ಕ್ರಮ ಕೈಗೊಳ್ಳಿ, ಶಿಕ್ಷಕರಿಗೆ ಮಾರ್ಗದರ್ಶನ ನೀಡಿ, ಸಮುದಾಯದ ನೆರವು ಪಡೆಯಿರಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ವಿವಿಧ ಕಾರ್ಪೋರೇಟ್ ಕಂಪನಿಗಳ ಮತ್ತು ಎನ್‌ಜಿಓಗಳ ಪ್ರತಿನಿಧಿಗಳು ಭಾಗವಹಿಸಿದ್ದು, ತಮ್ಮ ಕಂಪನಿಗಳಿಂದ ನೀಡಬಹುದಾದ ಸೌಲಭ್ಯಗಳ ಕುರಿತು ಸಭೆಯ ಮುಂದೆ ಮಾಹಿತಿ ಮಂಡಿಸಿದರು.

ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಕೆಪಿಎಸ್ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳಾದ ರಾಜೇಶ್ವರಿ, ಸೈಯದ್ ನಹಿದ್ ಫಾತಿಮಾ, ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ,ತಾಂತ್ರಿಕ ಅಧಿಕಾರಿ ಶರಣಪ್ಪ ಜಮಾದಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಂಗಾಡಿ- ಕದಿರೇನಹಳ್ಳಿ ಭೂ ವಿವಾದದಲ್ಲಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಲು ಆಗ್ರಹ
ನೀಟ್‌ನಲ್ಲೂ ಮುಂದುವರಿದ ಎಸ್.ಆರ್.ಎಸ್ ನಾಗಾಲೋಟ