
ಕ್ರಿಮ್ಸ್ಗೆ ಭೇಟಿ ನೀಡಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷ
ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಪ್ರತಿದಿನದ ಮೆನು ಪ್ರಕಾರ ಗುಣಮಟ್ಟದ ಮತ್ತು ಶುಚಿಯಾದ ಆಹಾರ ವಿತರಿಸುವಂತೆ ಮತ್ತು ಕಳಪೆ ಆಹಾರವನ್ನು ಸರಬರಾಜು ಮಾಡುವ ಗುತ್ತಿಗೆದಾರರನ್ನು ಬದಲಾಯಿಸುವಂತೆ ಕ್ರಿಮ್ಸ್ನ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್.ಕೃಷ್ಣ ಸೂಚನೆ ನೀಡಿದರು.
ಮಂಗಳವಾರ ಕ್ರಿಮ್ಸ್ಗೆ ಭೇಟಿ ನೀಡಿ ರೋಗಿಗಳಿಗೆ ವಿತರಿಸುವ ಆಹಾರದ ಪರಿಶೀಲನೆ ನಡೆಸಿ ಮಾತನಾಡಿದರು.ಕ್ರಿಮ್ಸ್ನ ಆಹಾರ ತಯಾರಿಕಾ ಕೊಠಡಿಗೆ ಭೇಟಿ ನೀಡಿದ ಅವರು, ರೋಗಿಗಳಿಗೆ ಮೆನು ಪ್ರಕಾರ ಇಂದು ಮೊಟ್ಟೆ ವಿತರಿಸಬೇಕಾಗಿದ್ದು, ಮೊಟ್ಟೆ ವಿತರಿಸದ ಕುರಿತು ಗರಂ ಆದ ಅವರು, ಅತ್ಯಂತ ಚಿಕ್ಕ ಕೊಠಡಿಯಲ್ಲಿ ಆಹಾರ ಸಿದ್ಧಪಡಿಸುತ್ತಿದ್ದು, ಈ ಪ್ರದೇಶದಲ್ಲಿ ಸ್ವಚ್ಛತೆಯ ಕೊರತೆಯ ಬಗ್ಗೆಯೂ ಗಮನಿಸಿದ ಅವರು ಆಹಾರ ತಯಾರಿಕಾ ಸ್ಥಳವನ್ನು ಆದಷ್ಟು ಶೀಘ್ರದಲ್ಲಿ ಸ್ಥಳಾಂತರಿಸುವಂತೆ ಮತ್ತು ಆಹಾರ ತಯಾರಿಕಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಒದಗಿಸುವಂತೆ ಸೂಚಿಸಿದರು.
ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಪೌಷ್ಠಿಕ ಪುನಃಶ್ಚೇತನ ಕೇಂದ್ರದಲ್ಲಿ ದಾಖಲಾಗುವ ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರದ ಕುರಿತು ಸೂಕ್ತ ವಿವರಣೆ ಮತ್ತು ಕೇಸ್ ಶೀಟ್ ಸಮರ್ಪಕವಾಗಿ ದಾಖಲಿಸದ ವೈದ್ಯರಿಗೆ ನೋಟಿಸ್ ನೀಡುವಂತೆ ತಿಳಿಸಿದ ಅವರು, ಈ ಕೇಂದ್ರದಲ್ಲಿ ದಾಖಲಾಗುವ ಮಗು ಮತ್ತು ಪೋಷಕರಿಗೆ ಒಟ್ಟು ₹370 ದಿನಗೂಲಿ ನಷ್ಟ ಪರಿಹಾರ ದೊರೆಯಲಿದ್ದು ಮತ್ತು ಈ ಕೇಂದ್ರದಲ್ಲಿ ದೊರೆಯುವ ಇತರೇ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಯೋಜನೆಯ ಪ್ರಯೋಜನ ದೊರಕಿಸಬೇಕು ಎಂದರು.
ನಂತರ ಗಾಂಧಿನಗರದ ಅಂಗನವಾಡಿಗೆ ಭೇಟಿ ನೀಡಿ, ಮಕ್ಕಳಿಗೆ ನೀಡುವ ಆಹಾರದ ಪ್ರಮಾಣ ಮತ್ತು ಗುಣಮಟ್ಟವನ್ನು ಪರಿಶೀಲಿಸಿದ ಅವರು, ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರ ಸರಬರಾಜು ಕುರಿತಂತೆ ಫಲಾನುಭವಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಖಚಿತಪಡಿಸಿಕೊಂಡರು.ಆಯೋಗದ ಸದಸ್ಯ ಮಾರುತಿ ಎಂ. ದೊಡ್ಡಲಿಂಗಣ್ಣನವರ, ಕ್ರಿಮ್ಸ್ನ ಡೀನ್ ಡಾ. ಪೂರ್ಣಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರರಾವ್, ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿರೂಪಾಕ್ಷ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಮೇಶ್, ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಕ್ಕ ಮಾದರ, ಜಿಲ್ಲಾಧಿಕಾರಿ ಕಚೇರಿಯ ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕ ಪ್ರಶಾಂತ್ ಇದ್ದರು.