ಸರ್ಕಾರಿ ಆಸ್ಪತ್ರೆಯಲ್ಲಿ ರಕ್ಷಾ ಸಮಿತಿ ಸಭೆ
ಅರಕಲಗೂಡು: ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಲು ಹೆಚ್ಚಿನ ಗಮನಹರಿಸುವಂತೆ ಶಾಸಕ ಎ.ಮಂಜು ವೈದ್ಯರಿಗೆ ಸೂಚಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ರಕ್ಷಾ ಸಮಿತಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ತುರ್ತು ಅಗತ್ಯ ಸೇವೆಗಳನ್ನು ಒದಗಿಸಲು ಗಮನ ಹರಿಸಬೇಕು. ನೂರು ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ ಹೆರಿಗೆಗೆ ಬರುವ ಗರ್ಭಿಣಿಯರನ್ನು ಜಿಲ್ಲಾ ಕೇಂದ್ರಕ್ಕೆ ಕಳಿಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. 11 ಮಂದಿ ಸ್ಟಾಪ್ ನರ್ಸ್ ಹಾಗೂ ಲ್ಯಾಬ್ ಟೆಕ್ನೀಶಿಯನ್ ಕೊರತೆ ಇದ್ದು, ಇದು ರಾಜ್ಯದಾದ್ಯಂತ ಇರುವ ಸಮಸ್ಯೆಯಾಗಿದೆ. ಈ ಕುರಿತು ಸದನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.ರಾತ್ರಿ ಪಾಳಿಯ ನೌಕರರು ಮತ್ತು ಆ್ಯಂಬುಲೆನ್ಸ್ ಚಾಲಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲು ಶಾಸಕರ ನಿಧಿಯಿಂದ 5 ಲಕ್ಷ ರು. ಅನುದಾನ ಒದಗಿಸುವುದಾಗಿ ತಿಳಿಸಿದರು. ರೋಗಿಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕಟ್ಟು ನಿಟ್ಟಿನ ಕ್ರಮ ವಹಿಸಬೇಕು ಎಂದರು.
ರಕ್ಷಾ ಸಮಿತಿ ಉಪಾಧ್ಯಕ್ಷ ಎಂ. ರಘು, ಸದಸ್ಯರಾದ ಕೆ. ಗಣೇಶ್, ಜಬೀಉಲ್ಲಾ, ಬಸವಾನಾಯಕ್, ಬಾಣದಹಳ್ಳಿ ಗಣೇಶ್ , ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ ದೀಪಕ್, ವೈದ್ಯರಾದ ಡಾ ಕಿರಣ್, ಡಾ. ರಮೀಜ್, ಡಾ.ಸುನೀಲ್ ಇದ್ದರು.