ಕಾರವಾರ: ಈ ಹಿಂದೆ ನಗರದಲ್ಲಿ ಉದ್ಯಾನವನಗಳ ನಿರ್ಮಾಣ ಹಾಗೂ ರಸ್ತೆಯಂಚಿನಲ್ಲಿ ಗಿಡಗಳನ್ನು ನೆಡಲಾಗಿತ್ತು. ಆದರೆ ಈಗ ನಿರ್ವಹಣೆ ಇಲ್ಲದೇ ಸೊರಗಿದೆ. ನಿರ್ವಹಣೆಯ ಬಗ್ಗೆ ನಗರಸಭೆಯು ಗಮನ ನೀಡಬೇಕು ಎಂದು ನ್ಯಾಯವಾದಿ ಅನಿರುದ್ಧ ಹಳದಿಪುರಕರ ತಿಳಿಸಿದರು.ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆಸಕ್ತ ಸಾರ್ವಜನಿಕರಿಂದ, ಅಧಿಕಾರಿಗಳಿಂದ, ಸಂಘ ಸಂಸ್ಥೆಗಳಿಂದ ₹೧ ಸಾವಿರ ಹಣ ಪಡೆದು ಅವರ ಹೆಸರಿನಲ್ಲಿ ಗಿಡಗಳನ್ನು ನೆಡಲಾಗಿತ್ತು. ಆದರೆ ಈಗ ನಿರ್ವಹಣೆ ಮಾಡದೇ ಕೆಲವು ಕಡೆ ಗಿಡಗಳು ಸತ್ತಿವೆ. ಉದ್ಯಾನವನದ ಅಂದ ಕಳೆದುಕೊಂಡಿದೆ. ಇವು ನಗರಕ್ಕೆ ಅಂದ ನೀಡುತ್ತಿತ್ತು. ವಾಕಿಂಗ್ ಪಾತ್ ಕೂಡಾ ನಿರ್ವಹಣೆ ಆಗಬೇಕು. ನಗರದಲ್ಲಿನ ಫುಟ್ಪಾತ್ ಮೇಲೆ ನಡೆಯುವ ಸ್ಥಿತಿಯಿಲ್ಲ. ಕೆಲವು ಕಡೆ ಸ್ಲ್ಯಾಬ್ ಒಡೆದು ಹೋಗಿದೆ. ಅತಿಕ್ರಮಣ ಮಾಡಿಕೊಂಡಿದ್ದಾರೆ. ಹೀಗಾಗಿ ರಸ್ತೆ ಮೇಲೆ ತಿರುಗಾಡುವಂತಾಗಿದೆ ಎಂದರು.ರವೀಂದ್ರನಾಥ ಟಾಗೋರ ಹಾಗೂ ಮಹಾತ್ಮ ಗಾಂಧಿ ಅವರು ಕಾರವಾರಕ್ಕೆ ಬಂದಿದ್ದರು. ಆ ಬಗ್ಗೆ ಚಿಕ್ಕದಾಗಿ ಇತಿಹಾಸ ಬರೆದು ಕಡಲ ತೀರ, ಗಾಂಧಿ ಉದ್ಯಾನವನದಲ್ಲಿ ಫಲಕ ಅಳವಡಿಸಿದರೆ ಮುಂದಿನ ಪೀಳಿಗೆಗೆ ಆ ಬಗ್ಗೆ ತಿಳಿಯುತ್ತದೆ ಎಂದರು.ಇದಕ್ಕೆ ಉತ್ತರಿಸಿದ ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಒಟ್ಟು ₹೭.೭೦ ಲಕ್ಷ ವೆಚ್ಚದಲ್ಲಿ ೩೧೦ ಗಿಡ ನೆಡಲಾಗಿದೆ. ಕೆಲವು ಕಡೆ ಮರಳು ಮಿಶ್ರಿತ ಮಣ್ಣು ಜಾಗದಲ್ಲಿ ಗಿಡ ಬೆಳೆಯಲು ತೊಂದರೆಯಾಗಿದೆ. ನೀಡಿದ ದಾನಿಗಳ ಗೌರವಕ್ಕೆ ಧಕ್ಕೆ ಆಗದಂತೆ ನಿರ್ವಹಣೆ ಜವಾಬ್ದಾರಿಯಿದೆ. ಕೆಲವು ಕಡೆ ದಾನಿಗಳ ಹೆಸರು ಅಳಿಸಿಹೋಗಿದೆ. ಸರಿಪಡಿಸುತ್ತೇವೆ ಎಂದ ಅವರು, ಇತಿಹಾಸ ಬರೆದು ಹಾಕುವ ಬಗ್ಗೆ ಆದಷ್ಟು ಶೀಘ್ರದಲ್ಲಿ ಕ್ರಮವಹಿಸಲಾಗುತ್ತದೆ ಎಂದರು.ದಲಿತ ಸಂಘಟನೆಯ ಮುಖಂಡ ದೀಪಕ ಕುಡಾಳಕರ, ಜಿಲ್ಲಾ ಆಸ್ಪತ್ರೆಯಿಂದ ಬಸ್ ನಿಲ್ದಾಣದವರೆಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಈ ರಸ್ತೆಯಲ್ಲಿ ಒಂದು ಶೌಚಾಲಯದ ಅಗತ್ಯವಿದೆ ಎಂದರು.
ಬಾಬು ಶೇಖ್, ಖೈರುನ್ನಿಸ್ಸಾ ಶೇಖ್ ಮುಂತಾದವರು ಅಗತ್ಯ ಸಲಹೆ ನೀಡಿದರು. ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೇಕರ, ಉಪಾಧ್ಯಕ್ಷೆ ಪ್ರೀತಿ ಜೋಶಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ ಹಾಗೂ ಅಧಿಕಾರಿಗಳು ಇದ್ದರು.ಇಂದಿನಿಂದ ದೇವಿ ಪ್ರತಿಷ್ಠಾ ಮಹೋತ್ಸವಯಲ್ಲಾಪುರ: ತಾಲೂಕಿನ ಮಾವಳ್ಳಿಯ ಕನ್ನಡಗಲ್ ಗ್ರಾಮದೇವಿ ದೇವಸ್ಥಾನದಲ್ಲಿ ಭುವನೇಶ್ವರಿ ದೇವಿ ಪ್ರತಿಷ್ಠಾ ಮಹೋತ್ಸವ ಡಿ. ೨೫ರಿಂದ ೨೭ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗುರುಪಾದಯ್ಯ ನಂದೊಳ್ಳಿಮಠ ತಿಳಿಸಿದರು.ಡಿ. ೨೪ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಲ ಹಾಗೂ ಸ್ಥಿರ ದೇವಿಯಾದ ಭುವನೇಶ್ವರಿಯ ಪಂಚಲೋಹದ ಮೂರ್ತಿಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾಪಿಸಲಾಗುತ್ತಿದೆ.ಡಿ. ೨೫ರಂದು ಗಣಪತಿ ಪೂಜೆ, ಮಹಾ ಸಂಕಲ್ಪದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಡಿ. ೨೬ರಂದು ಭುವನೇಶ್ವರಿ ಮೂಲ ಮಂತ್ರ ಹವನ, ಮೂರ್ತಿ ಪ್ರತಿಷ್ಠೆ ನಡೆಯಲಿದೆ. ಡಿ. ೨೭ರಂದು ರುದ್ರಹವನ, ನವಚಂಡಿಕಾ ಹವನ, ಜ್ಯೋತಿಷ ವಿ. ವೆಂಕಟರಮಣ ಭಟ್ಟ ಹಲಸಖಂಡ ಅವರ ಧಾರ್ಮಿಕ ಉಪನ್ಯಾಸವಿದೆ ಎಂದರು.
ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿ ಜಾತ್ರಾ ಮಹೋತ್ಸವ ಫೆ. ೧೯ರಿಂದ ೨೭ರ ವರೆಗೆ ನಡೆಯಲಿದೆ ಎಂದರು.ಸಮಿತಿಯ ಪ್ರಮುಖರಾದ ವಿಘ್ನೇಶ್ವರ ಮರಾಠಿ, ಸಿದ್ದಾರ್ಥ ನಂದೊಳ್ಳಿಮಠ ಇತರರು ಉಪಸ್ಥಿತರಿದ್ದರು.