ಕನ್ನಡಪ್ರಭ ವಾರ್ತೆ ಕನಕಪುರ
ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ನಗರ ವ್ಯಾಪ್ತಿಯ ತುಂಗಣಿ ಬಳಿಯಿಂದ ಹೌಸಿಂಗ್ ಬೋರ್ಡ್ವರೆಗೆ ಹಾದು ಹೋಗುವ ಮುಖ್ಯರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಕನಕಪುರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 209 ಹಾದು ಹೋಗುವ ಮುಖ್ಯರಸ್ತೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಯಂತೆ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಗೂಂಡು ಮೂರು ತಿಂಗಳುಗಳೇ ಕಳೆದಿದೆ.
ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಡಾ.ಸಿ.ಎನ್. ಮಂಜುನಾಥ್, ಮಾಜಿ ಸಂಸದ ಡಿ.ಕೆ. ಸುರೇಶ್ ರವರು ಖುದ್ದು ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ಗುತ್ತಿಗೆದಾರರಿಗೆ ಕೆಲವು ಸೂಚನೆಗಳನ್ನು ನೀಡಿದ್ದರೂ ಸಹ ಕಾಮಗಾರಿಯು ಯಥಾಸ್ಥಿತಿಯಲ್ಲಿ ನಡೆಯುತ್ತಿರುವುದು ವಿಷಾದನೀಯವಾಗಿದೆ.ನಗರದ ವ್ಯಾಪ್ತಿಯಲ್ಲಿ ಹಾದು ಹೋಗುವ ಕಾಂಕ್ರೀಟ್ ರಸ್ತೆಯಲ್ಲಿ ಚನ್ನಬಸಪ್ಪ ವೃತ್ತ ಮತ್ತು ಅಡ್ಡ ಅಳ್ಳದ ಎರಡು ರಾಜ ಕಾಲುವೆಯ ಕಿರು ಸೇತುವೆ ಹಾಗೂ ಅಂಬೇಡ್ಕರ್ ನಗರದ ಒಂದು ಭಾಗ ತ್ಯಾಜ್ಯ ಸಂಗ್ರಹಣೆಯ ಚರಂಡಿ ಹೊಂದಿರುವ ಕಿರು ಸೇತುವೆ ಮತ್ತು ಚರಂಡಿಯ ನೀರು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಸಮಸ್ಯೆಯಾಗುವುದನ್ನು ಗಮನದಲ್ಲಿ ಇಟ್ಟುಕೊಳ್ಳದೇ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಅಂಬೇಡ್ಕರ್ ನಗರ ಮತ್ತು ಚನ್ನಬಸಪ್ಪ ವ್ಯತ್ತದ ಬಳಿ ಹೋರಾಟಗಾರರು ಹಾಗೂ ಸಾರ್ವಜನಿಕರು ಪ್ರತಿಭಟನೆ ಮಾಡಿ ಸೇತುವೆ ಹಾಗೂ ಚರಂಡಿಯನ್ನು ದೊಡ್ಡದಾಗಿ ನಿರ್ಮಿಸಿ ನಂತರ ಕಾಂಕ್ರೀಟ್ ರಸ್ತೆ ಕೆಲಸ ಮುಂದುವರಿಸುವಂತೆ ಆಗ್ರಹಿಸಿದರು.
ಅಲ್ಲದೆ ಗುತ್ತಿಗೆದಾರ ಯಾರು, ಯೋಜನೆ ವೆಚ್ಚದ ಬಗ್ಗೆ ಎಲ್ಲಿಂದ ಎಲ್ಲಿಯ ತನಕ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮುಕ್ತಾಯದ ವಿವರಗಳ ಮಾಹಿತಿ ಬಗ್ಗೆ ನಾಮಫಲಕ ಅಳವಡಿಸದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.
ಕೆ ಕೆ ಪಿ ಸುದ್ದಿ 01:ನಗರದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ಕಾಮಗಾರಿ ರಸ್ತೆ ಬಗ್ಗೆ ಸಾರ್ವಜನಿಕರ ಅಸಮಾಧಾನ.