ಕನ್ನಡಪ್ರಭ ವಾರ್ತೆ ಹುಮನಾಬಾದ್
ಪಟ್ಟಣದ ತಾಪಂ ಸಭಾಂಗಣದಲ್ಲಿ ಬೀದರ್ ಲೋಕಾಯುಕ್ತ ಕಚೇರಿಯಿಂದ ಕರೆದ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಪ್ರಯುಕ್ತ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಲೋಕಾಯುಕ್ತ ಕಲಬುರಗಿ ಎಸ್ಪಿ ಆ್ಯಂಟನಿ ಜಾನ್ ಬೀದರ್ ಜಿಲ್ಲಾ ತಂಡದೊಂದಿಗೆ ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತ ಧಿಡೀರನೆ ಭೇಟಿ ನೀಡಿ, ಆಸ್ಪತ್ರೆ ಪ್ರತಿ ವಿಭಾಗಕ್ಕೂ ತೆರಳಿ ಅಲ್ಲಿನ ಮೂಲ ಸೌಕರ್ಯಗಳ ಕೊರತೆ, ನಿರ್ವಹಣೆಯಲ್ಲಿನ ಲೋಪ, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಔಷಧಗಳ ವಿತರಣೆ ಮತ್ತು ಇತರ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದ ಸಂಧರ್ಭದಲ್ಲಿ ಆಸ್ಪತ್ರೆ ಮಹಿಳಾ ವಾರ್ಡಿಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯರೊಂದಿಗೆ ಸಮಾಲೋಚನೆ ನಡೆಸಿದರು.
ಬಳಿಕ ಔಷಧಿ ಕೊರತೆಯಾಗದಂತೆ ಮತ್ತು ಯಾವುದೇ ದೂರಿಗೆ ಅವಕಾಶ ನೀಡಬಾರದು. ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ನಾಗನಾಥ ಹುಲಸೂರೆಯವರಿಗೆ ತಿಳಿಸಿದರು.ಬಳಿಕ ತಾಪಂ ಸಭಾಂಗಣದಲ್ಲಿ ಕರೆದ ತಾಲೂಕುಮಟ್ಟದ ಅಧಿಕಾರಿ, ಪಿಡಿಒ ಹಾಗೂ ಸಾರ್ವಜನಿಕ ಕುಂದುಕೊರತೆ ಅಹವಾಲ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ಸರ್ಕಾರಿ ನೌಕರರು ಸಾರ್ವಜನಿಕರು ನೀಡಿದ ತೆರಿಗೆ ಹಣದ ವೇತನ ಪಡೆಯುತ್ತಿದ್ದೇವೆ. ಅದಕ್ಕೆ ಸಾರ್ವಜನಿಕರು ಕಚೇರಿಗೆ ಬಂದಾಗ ಸೌಮ್ಯವಾಗಿ ಅವರ ಸಮಸ್ಯೆ ಬಗೆಹರಿಸಬೇಕು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ಗಳಲ್ಲಿ ಎಫ್ಡಿ ಇಡಲಾದ ಲಕ್ಷಾಂತರ ಹಣ ಇದೀಗ ನಮಗೆ ಸಿಗುತ್ತಿಲ್ಲ. ಈ ಕುರಿತು ದೂರು ನೀಡಿದರು ಯಾರು ಸ್ಪಂದಿಸುತ್ತಿಲ್ಲ ಎಂದು ಹತ್ತಾರು ಜನರು ತಮ್ಮ ದೂರು ನೀಡಿದ ಬಳಿಕ ತಕ್ಷಣ ಸಿಪಿಐ ಅವರಿಗೆ ಚಿಟಿಂಗ್ ಕೇಸ್ ದಾಖಲಿಸಿ ತಪಿತಸ್ಥರನ್ನು ಬಂಧಿಸುವಂತೆ ಮಾರ್ಗದರ್ಶನ ನೀಡಿದರು.
ಲೋಕಾಯುಕ್ತ ಸಬ್ ಇನ್ಸಪೆಕ್ಟರ್ ಪ್ರದೀಪ ಕೊಳ್ಳಾ, ತಹಸೀಲ್ದಾರ್ ಅಂಜುಮ್ ತಬಸುಮ್, ಗ್ರೇಡ-2 ತಹಸೀಲ್ದಾರ್ ಮಂಜುನಾಥ ಪಂಚಾಳ, ಕಂದಾಯ ನೀರಿಕ್ಷಕ ರಾಹುಲ್ ಪ್ರಸಾದ, ಮುಖ್ಯ ವೈದ್ಯಾಧಿಕಾರಿ ನಾಗನಾಥ ಹುಲಸೂರೆ, ಡಿವೈಎಸ್ಪಿ ಜೆ.ಎಸ್ ನ್ಯಾಮೇಗೌಡರ್, ಸಿಪಿಐ ಗುರುಲಿಂಗಪ್ಪಾಗೌಡ ಪಾಟೀಲ್, ಡಿವಾಯ್ಎಸ್ಪಿ ಎನ್.ಎಂ ಒಲೆಕರ್, ಸಬ್ಇನ್ಸಪೆಕ್ಟರ್ ಸಂತೋಷ ರಾಠೋಡ, ವಾಹಿದ್ ಕೋತವಾಲ್, ತಾಲೂಕು ವೈದ್ಯಾಧಿಕಾರಿ ಶಿವಕುಮಾರ ಸಿದ್ದೇಶ್ವರ, ಡಾ. ವಿಶ್ವಾ ಸೈನಿರ, ಡಾ. ಗುಮ್ಮೆದ್, ತಾ.ಪಂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಶಿವಲೀಲಾ, ಪುರಸಭೆ ಮುಖ್ಯಾಧಿಕಾರಿ ಮೀನಾಕುಮಾರಿ ಬೊರಾಳೆ ಸೇರಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ಅಹವಾಲು ನೀಡಲು ಬಂದ ಸಾರ್ವಜನಿಕರು ಇದ್ದರು.