ಹಳಿಯಾಳ: ಅರಣ್ಯ ಸಂಪತ್ತು, ವನ್ಯಜೀವಿಗಳು ಮತ್ತು ಜೀವವೈವಿಧ್ಯ ಸಂರಕ್ಷಣೆಯ ಪವಿತ್ರ ಕಾರ್ಯವು ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿದೆ ಎಂದು ಹಳಿಯಾಳ ವಿಭಾಗದ ಉಪ- ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ. ಹೇಳಿದರು.
ಇತ್ತೀಚೆಗೆ ಬಹುದೊಡ್ಡ ಪ್ರಮಾಣದಲ್ಲಿ ವನ್ಯಜೀವಿಗಳ ಚರ್ಮ, ಉಗುರು ಹಾಗೂ ಬೆಲೆಬಾಳುವ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟ ತಂಡವನ್ನು ಬೆಂಗಳೂರಿನ ತಂಡವು ಬಂದು ಜಪ್ತಿ ಮಾಡಿ ಬಂಧಿಸಿರುವ ಘಟನೆ ನಮ್ಮ ಕೆನರಾ ವೃತ್ತದಲ್ಲಿ ನಡೆದಿದೆ. ಹೀಗಿರುವಾಗ ಕೆನರಾ ವೃತದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿರುವ ಸಾವಿರಾರು ಸಿಬ್ಬಂದಿ ನಾವೇ ಪ್ರಶ್ನಿಸಬೇಕಾಗಿದೆ ಎಂದರು.
ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ಮಾತನಾಡಿ, ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆ ಮತ್ತು ಅರಣ್ಯ ಮತ್ತು ವನ್ಯಜೀವಿಗಳ ನಡುವಿನ ನೈಸರ್ಗಿಕ ಕೊಂಡಿಯನ್ನು ಕಾಪಾಡಿಕೊಳ್ಳುವುದು ಕೇವಲ ಪ್ರಾಣಿ- ಪಕ್ಷಿಗಳ ಉಳಿವಿಕೆಗೆ ಮಾತ್ರವಲ್ಲ, ಮಾನವಕುಲದ ಭವಿಷ್ಯಕ್ಕೂ ಅತಗತ್ಯವಾಗಿದೆ. ಅದಕ್ಕಾಗಿ ಈ ಸಂಬಂಧಗಳ ಕೊಂಡಿಯನ್ನು ಮುರಿಯಲು ಯಾರೂ ಪ್ರಯತ್ನಿಸಬಾರದು ಎಂದರು.ಹಳಿಯಾಳ ಎಸಿಎಫ್ ವರದ ರಂಗನಾಥ್ ಜಿ.ಎಚ್. ಮಾತನಾಡಿದರು. ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ಸಂಗಮೇಶ್ ಪಾಟೀಲ ಅವರು ಅರಣ್ಯ ಸಂರಕ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ವಿವರಗಳನ್ನು ತಿಳಿಸಿದರು.
ಹಳಿಯಾಳ ವಲಯ ಅರಣ್ಯಾಧಿಕಾರಿ ಎನ್.ಎಲ್. ನದಾಫ, ತಿನೈಘಾಟ ವಲಯ ಅರಣ್ಯಾಧಿಕಾರಿ ಅಶೋಕ ಸಾಳೆಣ್ಣನವರ, ವಿರ್ನೋಲಿ ವಲಯ ಅರಣ್ಯಾಧಿಕಾರಿ ಮಾಹಿಮ ಜನ್ನು, ಜೋಯಿಡಾ ವಲಯ ಅರಣ್ಯಾಧಿಕಾರಿ ರವಿಕಿರಣ, ಭಾಗವತಿ ವಲಯ ಅರಣ್ಯಾಧಿಕಾರಿ ಶಶಿಧರಗೌಡಾ ಪಾಟೀಲ, ದಾಂಡೇಲಿ ವಲಯ ಅರಣ್ಯಾಧಿಕಾರಿ ಗುರುಪ್ರಸಾದ ಕೆ., ಸರ್ವೆ ವಿಭಾಗದ ವಲಯ ಅರಣ್ಯಾಧಿಕಾರಿ ಜೈವಂತ ಕಾಂಬ್ರೇಕರ ಇದ್ದರು.