ಬಿಆರ್‌ಟಿಎಸ್‌ನ ಪರಿಸರ ಪೂರಕ ಕೆಲಸಕ್ಕೆ ಜನಮೆಚ್ಚುಗೆ

KannadaprabhaNewsNetwork |  
Published : Jun 05, 2025, 02:05 AM IST
4ಎಚ್‌ಯುಬಿ21ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ನಳ ನಳಿಸುತ್ತಿರುವ ಗಿಡಗಳು. | Kannada Prabha

ಸಾರಾಂಶ

ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಭಾಗಕ್ಕೆ ವಿಶೇಷ ಕೊಡುಗೆ ಎಂದು ಬಿಆರ್‌ಟಿಎಸ್‌ನ ಚಿಗರಿ ಓಟಕ್ಕೆ ಚಾಲನೆ ನೀಡಿದ್ದರು. ಅನೇಕ ಅಡೆತಡೆಗಳ ಮಧ್ಯೆ ಸುದೀರ್ಘ ಅವಧಿ ನಂತರ ಕಾಮಗಾರಿ ಆರಂಭ ಮಾಡಿದ್ದ ವೇ‍ಳೆ ಹುಬ್ಬಳ್ಳಿ ಧಾರವಾಡ ಮಧ್ಯದ ಸುಮಾರು 2500 ಮರಗಳನ್ನು ತೆರವು ಮಾಡಲಾಗಿತ್ತು. ಇದಕ್ಕೆ ಆಗ ಪರಿಸರ ಪ್ರೇಮಿಗಳಿಂದ ತೀವ್ರವಾದ ವಿರೋಧ ಎದುರಾಗಿತ್ತು.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಯೋಜನೆ ಜಾರಿಯಾದ ದಿನದಿಂದ ಒಂದಿಲ್ಲೊಂದು ವಿಘ್ನಗಳನ್ನು ಎದುರಿಸುತ್ತಲೇ ಬಂದರುವ ಬಿಆರ್‌ಟಿಎಸ್ ಇದೀಗ ಮುಚ್ಚುವ ಹಂತ ತಲುಪಿದ್ದರೂ ಪರಿಸರ ಪೂರಕ ಕೆಲಸ ಮಾಡಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಭಾಗಕ್ಕೆ ವಿಶೇಷ ಕೊಡುಗೆ ಎಂದು ಬಿಆರ್‌ಟಿಎಸ್‌ನ ಚಿಗರಿ ಓಟಕ್ಕೆ ಚಾಲನೆ ನೀಡಿದ್ದರು. ಅನೇಕ ಅಡೆತಡೆಗಳ ಮಧ್ಯೆ ಸುದೀರ್ಘ ಅವಧಿ ನಂತರ ಕಾಮಗಾರಿ ಆರಂಭ ಮಾಡಿದ್ದ ವೇ‍ಳೆ ಹುಬ್ಬಳ್ಳಿ ಧಾರವಾಡ ಮಧ್ಯದ ಸುಮಾರು 2500 ಮರಗಳನ್ನು ತೆರವು ಮಾಡಲಾಗಿತ್ತು. ಇದಕ್ಕೆ ಆಗ ಪರಿಸರ ಪ್ರೇಮಿಗಳಿಂದ ತೀವ್ರವಾದ ವಿರೋಧ ಎದುರಾಗಿತ್ತು. ಈ ವೇಳೆ ಬಿಆರ್‌ಟಿಎಸ್‌ ಯೋಜನೆಗೆ ತೆರವು ಮಾಡಿದ ಒಂದು ಮರಕ್ಕೆ ಪ್ರತಿಯಾಗಿ 10 ಮರ ನೆಡುವುದಾಗಿ ವಾಗ್ದಾನ ಮಾಡಿತ್ತು. ಅದರಂತೆ ಹಂತ ಹಂತವಾಗಿ ಅವಳಿ ನಗರದ ವಿವಿಧೆಡೆ ಸುಮಾರು 45,400 ಮರಗಳನ್ನು ನೆಟ್ಟು ಗುರಿಗಿಂತ ಹೆಚ್ಚು ಮರಗಳನ್ನು ನೆಟ್ಟು ಪರಿಸರಕ್ಕೆ ಉತ್ತಮ ಕೊಡುಗೆ ನೀಡಿದೆ.

ಎಲ್ಲೆಲ್ಲಿ?: ಹುಬ್ಬಳ್ಳಿಯ ನವೀನ್‌ ಹೋಟೆಲ್‌ನಿಂದ ಧಾರವಾಡದ ಗಾಂಧಿನಗರದ ವರೆಗಿನ ಕಾರಿಡಾರ್‌ನಲ್ಲಿ ಒಟ್ಟು 25000 ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಕಾರಿಡಾರ್‌ನಲ್ಲಿ ನೆಟ್ಟಿರುವ ಬಹುತೇಕ ಗಿಡಗಳು ಉತ್ತಮವಾಗಿವೆ. ಇವುಗಳಿಗೆ ನಿರಂತರವಾಗಿ ನೀರುಣಿಸುವ ಮತ್ತು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ.

ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಎಸ್‌ಟಿಪಿ ಘಟಕದಲ್ಲಿ ಬಿಆರ್‌ಟಿಎಸ್ ಕಾಮಗಾರಿ ಆರಂಭ‍ದ ವೇಳೆ 2000 ಸಸಿ ನೆಟ್ಟಿದ್ದು ಅಲ್ಲಿಯೂ ಮರಗಳು ಸೊಂಪಾಗಿ ಬೆಳೆದಿವೆ. ಎಸ್‌ಡಿಎಂ ಆಸ್ಪತ್ರೆ ಆವರಣದಲ್ಲೂ ಬಿಆರ್‌ಟಿಎಸ್‌ನಿಂದ ಸಸಿಗಳನ್ನು ನೆಡಲಾಗಿದ್ದು, ಅಲ್ಲೂ ಸಮರ್ಪಕ ನಿರ್ವಹಣೆಯಿರುವುದರಿಂದ ಉತ್ತಮವಾಗಿವೆ.

ನೃಪತುಂಗ ಬೆಟ್ಟ, ನವಲೂರಿನ ಗುಡ್ಡ ಮತ್ತು ಧಾರವಾಡದ ಬೆಟ್ಟಗಳಲ್ಲೂ ಬಿಆರ್‌ಟಿಎಸ್‌ನಿಂದ ಗಿಡಗಳನ್ನು ನೆಡಲಾಗಿದೆ. ಧಾರವಾಡದ ಕೆಲಗೇರಿ ಕೆರೆ ಆವರಣದಲ್ಲಿ ಒಟ್ಟು 1000 ಸಸಿಗಳನ್ನು ನೆಡಲಾಗಿದೆ. ಕೆಲಗೇರಿ ಸರ್ಕಾರಿ ಶಾಲೆಗ‍ಳ ಆವರಣ, ಜೆಎಸ್‌ಎಸ್‌ ಕ್ಯಾಂಪಸ್‌ ಸೇರಿ ವಿವಿಧ ಶಾಲೆ- ಕಾಲೇಜುಗಳಲ್ಲಿ ಬಿಆರ್‌ಟಿಎಸ್‌ನಿಂದ ವಿತರಿಸಿದ ಸಸಿ ನೆಡಲಾಗಿದ್ದು, ಅವುಗಳನ್ನು ಆಯಾ ಶಾಲೆಯ ಆಡಳಿತ ಮಂಡಳಿಯವರು ನಿರ್ವಹಿಸುತ್ತಿದ್ದಾರೆ.

ಬಿಆರ್‌ಟಿಎಸ್ ಯೋಜನೆ ಅನುಷ್ಠಾನದ ವೇಳೆ ಹೇಳಿದ್ದಕ್ಕಿಂತ ಹೆಚ್ಚಿನ ಸಸಿಗಳನ್ನು ನೆಡಲಾಗಿದ್ದು, ಅವುಗಳು ಉತ್ತಮ ಸ್ಥಿತಿಯಲ್ಲಿವೆ. ಸಂಸ್ಥೆ ಪರಿಸರ ಪೂರಕ ಕಾಮಗಾರಿಗಳಿಗೆ ಆದ್ಯತೆ ನೀಡಿದೆ ಎನ್ನುತ್ತಾರೆ ಅಧಿಕಾರಿಗಳು.

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಹಸರೀಕರಣಕ್ಕೆ ಒತ್ತು ನೀಡಿ, ಗಿಡಗಳನ್ನು ಬೆಳೆಸಿರುವುದು ಉತ್ತಮ ಸಂಗತಿ. ಸಂಸ್ಥೆ ಪರಿಸರ ಪೂರಕ ಕೆಲಸ ಮಾಡುತ್ತ ಉತ್ತಮ ಕೊಡುಗೆ ನೀಡಿರುವುದು ಶ್ಲಾಘನೀಯ ಎಂದು ಪ್ರಯಾಣಿಕ ಸಂತೋಷ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾಳುಗಳಿಗೆ ಆತ್ಮಸ್ಥೈರ್ಯ, ತಾಳ್ಮೆ ಅಗತ್ಯ: ಅಕ್ಷಯ ಪಾಟೀಲ
ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ತಲಾದಾಯ ಹೆಚ್ಚಳ