ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಾವಳಿಗೆ ಮಹತ್ವ ನೀಡಲಿ: ಶಾಸಕ ಭೀಮಣ್ಣ

KannadaprabhaNewsNetwork | Published : Dec 3, 2024 12:32 AM

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸ್ವಂತ ಜಾಗದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಭೂಮಿಪೂಜೆ ನೆರವೇರಿಸಿದರು.

ಶಿರಸಿ: ತಾಲೂಕಿನ ದೊಡ್ಡಳ್ಳಿ ಸಮೀಪದ ಸರ್ವೆ ನಂ. ೨೧ರ ಜಾಗದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಆರ್‌ಟಿಒ) ಸ್ವಂತ ಜಾಗದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಭೂಮಿಪೂಜೆ ನೆರವೇರಿಸಿದರು.

ನಂತರ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಾರ್ವಜನಿಕರು ಸುರಕ್ಷತೆ ಬಗ್ಗೆ ಆದ್ಯತೆ ನೀಡಬೇಕು. ರಸ್ತೆ ಸುರಕ್ಷತಾ ನಿಯಮಾವಳಿಗೆ ಮಹತ್ವ ನೀಡಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಸಾರಿಗೆ ಇಲಾಖೆಗೆ ದೊರೆತಿರುವ ನಾಲ್ಕು ಎಕರೆ ಜಾಗದಲ್ಲಿ ೨.೧೩ ಎಕರೆ ಜಾಗವನ್ನು ಪಥ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಕಾರು ಮತ್ತು ಬೈಕ್ ಚಾಲನಾ ಪಥ ಮಾತ್ರ ನಿರ್ಮಿಸಲಾಗುತ್ತಿದೆ. ಬೈಕ್‌ಗೆ ಎರಡು ಪಥ ಹಾಗೂ ಕಾರಿಗೆ ಒಂದು ಪಥ ನಿರ್ಮಾಣವಾಗುತ್ತದೆ. ಇನ್ನುಳಿದಂತೆ ಭಾರಿ ವಾಹನಗಳ ಪಥ ನಿರ್ಮಾಣಕ್ಕೆ ಜಾಗ ಬಿಟ್ಟಿಡಲಾಗುತ್ತಿದ್ದು, ಅದಕ್ಕೂ ಹಂತಹಂತವಾಗಿ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.

ಸರ್ಕಾರ ಎಲ್ಲ ಕ್ಷೇತ್ರಕ್ಕೂ ಅನುದಾನ ನೀಡುತ್ತಿದ್ದು, ಪ್ರಾದೇಶಿಕ ಸಾರಿಗೆ ವಲಯ ಭದ್ರಪಡಿಸುತ್ತಿದೆ ಎಂದು ಹೇಳಿದರು.

ಶಿರಸಿ ಆರ್‌ಟಿಒ ಮಲ್ಲಿಕಾರ್ಜುನಪ್ಪ ಕಪ್ಪರದ ಮಾತನಾಡಿ, ಚಾಲನಾ ಪರೀಕ್ಷೆ ಎಲ್ಲವೂ ಗಣೀಕಿಕೃತವಾಗಿರಲಿದೆ. ಸೆನ್ಸಾರ್ ಆಧಾರದಲ್ಲಿ ಪರೀಕ್ಷೆ ನಡೆಯಲಿದೆ. ಸ್ವಯಂಚಾಲಿತ ಚಾಲನಾ ಪಥ ಸುಮಾರು ₹೭.೬೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ದೊಡ್ಡಳ್ಳಿಯ ಬಳಿಯ ೪ ಎಕರೆ ಜಾಗದಲ್ಲಿ ಅರ್ಧದಷ್ಟು ಜಾಗವನ್ನು ಬಳಸಿಕೊಂಡು ಕಾರು ಹಾಗೂ ಬೈಕ್ ಚಾಲನಾ ಪರೀಕ್ಷಾ ಪಥ ಮಾತ್ರ ನಿರ್ಮಿಸಲಾಗುತ್ತದೆ. ಸಾರಿಗೆ ಇಲಾಖೆ ಅನುದಾನ ನೀಡಿದ್ದು, ಕೆಎಸ್‌ಆರ್‌ಟಿಸಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಯ ನಿಗಾ ವಹಿಸಲಿದೆ. ಚಾಲನಾ ಪಥ, ಆಡಳಿತ ಕಚೇರಿ, ಕಂಟ್ರೋಲ್ ರೂಮ್‌, ಶೌಚಾಲಯ ಒಳಗೊಂಡಿರುತ್ತದೆ. ಸಿಮೆಂಟ್ ಕಾಂಕ್ರೀಟ್ ನಲ್ಲಿ ಪಥ ನಿರ್ಮಾಣ ಮಾಡಲಾಗುತ್ತದೆ. ೯ ತಿಂಗಳ ಅವಧಿಯಲ್ಲಿ ಇದು ಮುಗಿಯಬೇಕಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ದೊಡ್ನಳ್ಳಿ ಗ್ರಾಪಂ ಅಧ್ಯಕ್ಷ ತಿರುಮಲೇಶ ಮಡಿವಾಳ, ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಎಸ್.ಎನ್. ಹೆಗಡೆ ದೊಡ್ನಳ್ಳಿ ಮತ್ತಿತರರು ಇದ್ದರು.