ಸತ್ಯ, ಧರ್ಮದ ಹಾದಿಯಲ್ಲಿ ನಡೆದಾಗ ಮನ ಶುದ್ಧಿ ಸಾಧ್ಯ

KannadaprabhaNewsNetwork | Published : Mar 1, 2025 1:05 AM

ಹೊಸದುರ್ಗದ ಕುಂಚಿಟಿಗ ಮಠದಲ್ಲಿ ಆಯೋಜಿಸಲಾಗಿದ್ದ ಸಂಗಮೇಶ್ವರ ಜಯಂತಿ ಕಾರ್ಯಕ್ರಮವನ್ನು ಸ್ವಾಮೀಜಿಗಳು ಉದ್ಘಾಟಿಸಿದರು.

ಸಂಗಮೇಶ್ವರ ಜಯಂತಿಯಲ್ಲಿ ಶಾಂತವೀರ ಸ್ವಾಮೀಜಿ ಹೇಳಿಕೆಕನ್ನಡಪ್ರಭ ವಾರ್ತೆ ಹೊಸದುರ್ಗ

ಗಂಗಾ ನದಿಯಲ್ಲಿ ಮುಳುಗುವುದರಿಂದ ಕುಂಭಮೇಳದಲ್ಲಿ ಭಾಗವಹಿಸುವುದರಿಂದ ಮನಸ್ಸು ಶುದ್ಧಿಯಾಗಲು ಸಾಧ್ಯವಿಲ್ಲ ಸತ್ಯ ಹಾಗೂ ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ಮನಸ್ಸು ಶುದ್ಧಿಯಾಗಲು ಸಾಧ್ಯ ಎಂದು ಹೊಸದುರ್ಗ ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಗಿರಿಯ ಕುಂಚಿಟಿಗ ಮಠದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಂಗಮೇಶ್ವರ ಜಯಂತಿ, ಶ್ರೀಗಳ 45ನೇ ವರ್ಷದ ಹುಟ್ಟುಹಬ್ಬದ ಆಚರಣೆ, 28ನೇ ವರ್ಷದ ಶ್ರೀಗಳ ದೀಕ್ಷಾ ಮಹೋತ್ಸವ ಹಾಗೂ 24ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತಮ್ಮ ಮನೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ ಬೇರೋಬ್ಬರನ್ನು ಟೀಕಿಸುವ, ಹೀಯಾಳಿಸುವ, ಬೇರೆಯವರ ತಪ್ಪುಗಳನ್ನು ಹುಡುಕುವ ಮನೋ ಪ್ರವೃತ್ತಿ ಇಂದಿನ ಜನರ ಫ್ಯಾಷನ್‌ ಆಗಿದೆ. ಯಾರೂ ಜಾತಿಗೆ ಅರ್ಜಿ ಹಾಕಿ ಹುಟ್ಟುವುದಿಲ್ಲ ಹಿಂದುಳಿದ ನಾವೇಲ್ಲಾ ಸ್ವಾಮಿಗಳು ಒಂದೇ ಎನ್ನುವ ಮನೋಭಾವನೆಯಲ್ಲಿದ್ದೇವೆ. ಅದೇ ರೀತಿ ಎಲ್ಲಾರೂ ನಮ್ಮಂತೆ ಇದ್ದರೆ ಈ ಭೂಮಿಯ ಮೇಲೆ ಯಾವುದೇ ಜಾತಿ ಸಂಘರ್ಷ ಆಗಲು ಸಾಧ್ಯವಿಲ್ಲ ಎಂದು ನುಡಿದರು.

ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಈ ನಾಡಿನಲ್ಲಿ ಸಾಕಷ್ಟು ಪೀಠಗಳು, ಜಗದ್ಗುರುಗಳು, ಸ್ವಾಮಿಗಳಿದ್ದಾರೆ. ಹಾಗೆಯೇ ಇತಿಹಾಸವಿರುವ ಮಠಗಳು, ಇತಿಹಾಸ ಸೃಷ್ಠಿ ಮಾಡಿರುವ ಮಠಗಳು, ಇತಿಹಾಸವಿರುವ ಮಠಗಳನ್ನು ಹಾಳು ಮಾಡಿದ ಸ್ವಾಮಿಗಳನ್ನು ನಾವು ಕಾಣುತ್ತೇವೆ. ಅನೇಕ ಮಠಗಳಲ್ಲಿ ಸ್ವಾಮಿಗಳು ಮಠದಿಂದ ಘಟವನ್ನು ಬೆಳೆಸಿಕೊಂಡರೆ ಶಾಂತವೀರ ಸ್ವಾಮೀಜಿ ಘಟದಿಂದ ಮಠವನ್ನು ಕಟ್ಟುತ್ತಿದ್ದಾರೆ ಎಂದರು.

ಬಿಜೆಪಿ ಮುಖಂಡ ಎಸ್‌.ಲಿಂಗಮೂರ್ತಿ, ಮರುಳೀಧರ ಹಾಲಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಾದಾರ ಚನ್ನಯ್ಯ ಶರಣರು, ಬೋವಿ ಗುರು ಪೀಠದ ಶ್ರೀಗಳು, ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಶ್ರೀ, ಯಾದವ ಗುರು ಪೀಠದ ಶ್ರೀ, ಮುಖಂಡರಾದ ಲಗ್ಗರೆ ನಾರಾಯಣಸ್ವಾಮಿ, ಮಾಜಿ ಶಾಸಕ ಟಿ.ಎಚ್‌.ಬಸವರಾಜಪ್ಪ ಸೇರಿ ಸಮಾಜದ ಗಣ್ಯರು ಭಕ್ತರು ಭಾಗವಹಿಸಿದ್ದರು.