ಹೊಸಪೇಟೆ: ಉತ್ತರಾಖಂಡದ ಹಲ್ದಾವಾನಿಯಾ ರಾಮಲೀಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅಲ್ಲಿಯ ಜನರನ್ನುದ್ದೇಶಿಸಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಅಲ್ಲಿನ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ಹೋಮ-ಹವನ ಮಾಡಿರುವ ಕ್ರಮವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಇದು ಕೇವಲ ಖರ್ಗೆಯವರಿಗೆ ಆದ ಅವಮಾನವಲ್ಲ, ಶೋಷಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಈ ರೀತಿಯ ದೇಶ ಹಾಗೂ ಸಂವಿಧಾನ ವಿರೋಧಿ ಆಚರಣೆಗಳನ್ನು ಯಾವುದೇ ಕಾರಣಕ್ಕೆ ಸಹಸಿಕೊಳ್ಳಲು ಸಾಧ್ಯವಿಲ್ಲ. ಇಂತ ಅನಿಷ್ಠ ಆಚರಣೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಅವರ ವಿರುದ್ಧ ದೇಶದ್ರೋಹಿ ಮತ್ತು ಅಟ್ರಾಸಿಟಿ, ಅಸ್ಪೃಶ್ಯತೆ ಆಚರಣೆ ವಿರೋಧಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ದೇಶ ಮತ್ತು ರಾಜ್ಯಾದ್ಯಾಂತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಕಮಲಾಪುರ ಸೋಮಶೇಖರ, ಜಗನ್ನಾಥ, ಎಚ್. ನಾಗಪ್ಪ ಗೋಪಾಲ, ತಾಲೂಕು ಸಂಚಾಲಕ ಕಮಲಾಪುರ ವೀರೇಶ, ಜಿಲ್ಲಾ ಸಮಿತಿ ಸದಸ್ಯ ಮರಿದಾಸ, ತಾಲೂಕು ಸಂಘಟನ ಸಂಚಾಲಕರಾದ ಎಚ್. ಲಕ್ಷ್ಮಣ, ಹಲಗಿ ನಾಗರಾಜ, ಹುಲುಗಪ್ಪ, ಉದಯಕುಮಾರ, ಸೂರ್ಯಪ್ರಕಾಶ್, ಗಾಳೆಪ್ಪ, ಜಿಲ್ಲಾ ಮುಖಂಡರಾದ ಸಂತೋಷ, ಚಿಲಕನಹಟ್ಟಿ ಸೋಮಣ್ಣ, ಜಯರಾಮ್ ಕೊಟ್ಟೂರು, ದುರುಗೇಶ, ಕಡ್ಡಿ, ಲಕ್ಷ್ಮಣ, ದುರುಗಪ್ಪ.ಎಂ, ಚಾರಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.