ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

KannadaprabhaNewsNetwork | Published : Oct 4, 2024 1:11 AM

ಪ್ರೀತಿ, ವಿಶ್ವಾಸ ಮತ್ತು ಅನ್ಯೋನ್ಯತೆಯಿಂದ ಎಲ್ಲರೂ ಒಗ್ಗಟ್ಟಿನಿಂದ ನಡೆದರೆ ಮಾತ್ರ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿಸಲು ಸಾಧ್ಯ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಕೆ ಸುರೇಶ್ ತಿಳಿಸಿದರು. ಹಳೆಬೀಡಿನಲ್ಲಿ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಡಿಸೆಂಬರ್ ೧, ೨ರಂದು ಪುಷ್ಪಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಜಾತ್ರೆ

ಕನ್ನಡಪ್ರಭ ವಾರ್ತೆ ಹಳೇಬೀಡು

ಪ್ರೀತಿ, ವಿಶ್ವಾಸ ಮತ್ತು ಅನ್ಯೋನ್ಯತೆಯಿಂದ ಎಲ್ಲರೂ ಒಗ್ಗಟ್ಟಿನಿಂದ ನಡೆದರೆ ಮಾತ್ರ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿಸಲು ಸಾಧ್ಯ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಕೆ ಸುರೇಶ್ ತಿಳಿಸಿದರು.

ಇಲ್ಲಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತ, ಮಠ ಮತ್ತು ದೇವಸ್ಥಾನದ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲಾ ಭಕ್ತರು ಪಾಲ್ಗೊಳ್ಳಿ. ಈ ಹಿಂದೆ ನಡೆದುಕೊಂಡು ಬಂದಂತಹ ಸೌಹಾರ್ದಯುತ ಧಾರ್ಮಿಕ ಕಾರ್ಯಗಳು ಮತ್ತೆ ಮರುಕಳಿಸಲಿ, ಕಳೆದ ಹಲವು ವರ್ಷಗಳಲ್ಲಿದ್ದ ಸಂಘರ್ಷದ ವಾತಾವರಣ ತಿಳಿ ಮಾಡಿಕೊಂಡು ಪುಷ್ಪಗಿರಿ ದೇವಸ್ಥಾನದ ಧಾರ್ಮಿಕ ಕಾರ್ಯಗಳಲ್ಲಿ ಮಠದ ಭಕ್ತರು ಹಾಗೂ ಮಠದ ಧಾರ್ಮಿಕ ಕಾರ್ಯಗಳಲ್ಲಿ ಪುಷ್ಪಗಿರಿ ದೇವಸ್ಥಾನದ ಭಕ್ತರು ಪಾಲ್ಗೊಳ್ಳುವ ಮೂಲಕ ಸಾಮರಸ್ಯತೆಯ ಬದುಕು ನಡೆಸಬೇಕು ಎಂದು ಹೇಳಿದರು.

ಈ ಹಿಂದೆ ಕೆಂಡೋತ್ಸವ ಹಾಗೂ ಎಣ್ಣೆ ಸಾಲೆ ಹಾಗೂ ಜಾತ್ರಾ ಮಹೋತ್ಸವದ ಉತ್ಸವಗಳಿಗೆ ಶ್ರೀ ಸೋಮಶೇಖರ ಸ್ವಾಮೀಜಿಯವರಿಂದ ಚಾಲನೆ ನೀಡುವ ಕಾರ್ಯಕ್ರಮಗಳು ನಿಂತು ಹೋಗಿದ್ದು, ಅದನ್ನು ಪುನಃ ಪ್ರಾರಂಭಿಸಿ ಜಾತ್ರಾ ಮಹೋತ್ಸವಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಬೇಲೂರು ತಾಲೂಕು ದಂಡಾಧಿಕಾರಿ ಮಮತಾರವರು ಮಾತನಾಡಿ, ಮುಂಬರುವ ನವೆಂಬರ್ ೧೯ರಂದು ಪುಷ್ಪಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ದಿವ್ಯ ಕೆಂಡೋತ್ಸವ ಜರುಗಲಿದ್ದು, ಡಿಸೆಂಬರ್ ೧ ಮತ್ತು ೨ನೇ ತಾರೀಖಿನ ಪುಷ್ಪಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಜಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಾಚರಣೆಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಾಂಸ್ಕ್ರತಿಕ ಆಚರಣೆಗಳು ನಡೆಯಲಿದ್ದು, ಡಿ.ಜೆ ಹೊರತು ಪಡಿಸಿ ಎಲ್ಲಾ ರೀತಿಯ ಕಲಾತಂಡಗಳೂ ಹಾಗೂ ನೃತ್ಯ ಪ್ರದರ್ಶನಕ್ಕೆ ಅವಕಾಶ ಕಲ್ಪಸಿಕೊಡಲಾಗಿದೆ. ಜಾತ್ರಾ ಮಹೋತ್ಸ ಅದ್ಧೂರಿಯಾಗಿ ನಡೆಯಲು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಸುತ್ತಮುತ್ತಲಿನ ೧೨ ಹಳ್ಳಿ ಮುಖಂಡರಿಗೆ ಹೇಳಿದರು.

ಈ ಸಂದರ್ಭದಲ್ಲಿ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ದ್ವೇಷ, ಅಸೂಹೆ, ಮತ್ಸರಗಳಿಂದ ಎಲ್ಲವನ್ನೂ ಕಳೆದುಕೊಂಡು ನಾವುಗಳು ಸನ್ಯಾಸಿಯಾಗಿದ್ದೇವೆ, ನಮಗೆ ನಿಮ್ಮ ಪ್ರೀತಿ, ವಿಶ್ವಾಸ, ತ್ಯಾಗ, ಕರುಣೆ,ಮಮತೆ, ವಾತ್ಸಲ್ಯ ,ಸ್ನೇಹ, ಗುಣಗಳು ಬೇಕು ಸೌಹಾರ್ದತೆ ಮತ್ತು ಶಾಂತಿಯನ್ನು ಬೆಸೆಯುತ್ತವೆ ಹಿಂದ ಆದ ಘಟನೆಗಳನ್ನು ಮರೆತು ಒಟ್ಟಾಗಿ ಮಠ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಧಾರ್ಮಿಕ ಕಾರ್ಯಗಳನ್ನು ಒಟ್ಟಾಗಿ ಮಾಡಲು ನಾವು ಮನಃಪೂರ್ವಕವಾಗಿ ಆತ್ಮ ಸಾಕ್ಷಿ ಅನುಗುಣವಾಗಿ ಸಿದ್ಧರಾಗಿದ್ದೇವೆ ಹಾಗೂ ಜಾತ್ರೆ ಮಹೋತ್ಸವಕ್ಕೆ ನಮ್ಮ ಮಠದಿಂದ ೫೦ಸಾವಿರ ಹಣವನ್ನು ದಾಸೋಹಕ್ಕೆ ನೀಡುತ್ತವೆ ಎಂದು ತಿಳಿಸಿದರು.ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಸಂಗಮೇಶ್ ಮಾತನಾಡಿ, ಮಠ ಮತ್ತು ದೇವಸ್ಥಾನಗಳ ಹೊಂದಾಣಿಕೆ ಕೊರತೆಯಿಂದಾಗಿ ಮುಜರಾಯಿ ಇಲಾಖೆಯ ಅನುದಾನದ ಕೊರತೆಯಿಂದಾಗಿ ದೇವಸ್ತಾನದ ಅಭಿವೃದ್ಧಿ ಕುಂಠಿತವಾಗಿದ್ದು, ದಯಮಾಡಿ ಮಾನ್ಯ ತಹಸೀಲ್ದಾರರು, ತಮ್ಮ ಮನವಿಯನ್ನು ಪುರಸ್ಕರಿಸಿ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.

ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಸೋಮಸುಂದರ್ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ೨ ದಿನಗಳ ಕಾಲ ಅನ್ನದಾಸೋಹ ನಡೆಯಲಿದ್ದು, ಪಡಿ ಎತ್ತುವ ಕಾರ್ಯವನ್ನು ದೇವಸ್ಥಾನದ ವತಿಯಿಂದ ಮಾಡಲಿದ್ದು, ಅನ್ನದಾಸಹೋಹ ಕೂಡ ದೇವಸ್ಥಾನದ ಭಕ್ತರು ಹಾಗೂ ಮುಖಂಡರ ನೇತೃತ್ವದಲ್ಲಿ ಎರಡು ದಿನಗಳ ಕಾಲದಾಸೋಹ ನಡೆಯಲಿದೆ ಎಂದು ತಿಳಿಸಿದರು. ಗೋ.ಸೋ.ಹಳ್ಳಿ ಗಂಗಾಧರ್‌ ಮಾತನಾಡುತ್ತ ದಾನ ಕೊಡುವ ಭಕ್ತರು ದೇವಾಲಯ ಮತ್ತು ಮಠ ಎಂಬ ಭೇದಭಾವ ಇರುವದಿಲ್ಲ, ದಾನ ಕೊಡದ ಭಕ್ತರು ಇದರ ಚರ್ಚೆ ಮಾಡುತ್ತಾರೆ. ಎರಡೂ ಕೈ ಸೇರಿದರೆ ಚಪ್ಪಳೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾ.ವಿ.ಶೈವ ಸಂಘದ ಅಧ್ಯಕ್ಷ ಅಡಗೂರು ಬಸವರಾಜು, ಶಂಕರಪ್ಪ ಶಶಿಕುಮಾರ್‌, ಗಂಗಣ್ಣ, ಜಗದೀಶ್ ಚಂದ್ರಶೇಖರ್‌, ಅರ್ಚಕರಾದ ಮಂಜಪ್ಪ, ಗಂಗಾಧರ್, ಪ್ರೇಮಕುಮಾರ್, ದಿವಾಕರ್‌, ಸೂರ್ಯನಾರಾಯಣ, ಹತ್ತು ಹಳ್ಳಿಗಳ ಮುಖ್ಯಸ್ಥರು ಹಾಜರಿದ್ದರು.