ವಡ್ಡರ ಜನಾಂಗದವರೇ ಬೇರೆ ಭೋವಿ ಸಮಾಜದವರೇ ಬೇರೆ: ಅಧ್ಯಕ್ಷ ಶಿವರಾವ ಕನ್ನಡಪ್ರಭ ವಾರ್ತೆ ಬೀದರ್
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಸಂವಿಧಾನ ಬದ್ಧವಾಗಿ ಮೂಲ ಭೋವಿಗಳು ಇದ್ದರೂ ವಡ್ಡರ ಸಮುದಾಯದವರು ನಮ್ಮ ಸಮುದಾಯದ ವಿರುದ್ಧವೇ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದೇವೆಂದು ಸ್ಥಳೀಯ ತಹಸೀಲ್ದಾರ ಕಚೇರಿಗೆ ಮತ್ತು ಭೋವಿ ಅಭಿವೃದ್ಧಿ ನಿಗಮಕ್ಕೆ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೂಲ ಭೋವಿ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡದಂತೆ ಅಧಿಕಾರಿಗಳಿಗಳ ಮೇಲೆ ನಿಯಮ ಬಾಹೀರವಾಗಿ ಒತ್ತಡ ಹೇರುತ್ತಿದ್ದಾರೆ. ಇವರ ಪ್ರಭಾವಕ್ಕೊಳಗಾಗಿ ಭೋವಿ ಮತ್ತು ವಡ್ಡರ ಜಾತಿ ಸಂಬಂಧ ಸರ್ಕಾರದ ಹಿಂದಿನ ಎಲ್ಲಾ ಆದೇಶ ಮತ್ತು ಸುತ್ತೋಲೆಗಳನ್ನು ಪರಿಶೀಲಿಸದೆ ಮೂಲ ಭೋವಿಗಳಾದ ನಮ್ಮ ಜಾತಿ ಪ್ರಮಾಣ ಪತ್ರ ನೀಡಲು ತಡೆಯೊಡ್ಡುತ್ತಿದ್ದಾರೆ ಎಂದರು.ಇದರಿಂದ ಭೋವಿ ಜಾತಿಯ ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗೆ ಅವರ ವಿದ್ಯಾಭ್ಯಾಸದಲ್ಲಿ ಹಾಗೂ ಇತರೆ ಕಾರ್ಯಗಳಲ್ಲಿ ಗಂಭೀರ ಅನ್ಯಾಯಾವಾಗುತ್ತಿದೆ. ಸಿದ್ಧರಾಮೇಶ್ವರ ಸ್ವಾಮಿಗಳ ಮನವಿಯಂತೆ ವಡ್ಡರ ಸಮಾಜದ ನಿಗಮವನ್ನು ಹೊಸದಾಗಿ ಮಾಡಲು ಕ್ರಮ ಕೈಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಭೋವಿ ಜಾತಿಯವರು ವಡ್ಡರಲ್ಲ, ಬೆಸ್ತರಲ್ಲ, ಗಂಗಾಮತಸ್ತರಲ್ಲ, ಕೇವಲ ಭೋವಿ ಜಾತಿಯವರು ಎಂದು ವಿವರಿಸಿದರು.
ಈ ವೇಳೆ ಸಂಘದ ರಾಜ್ಯಧ್ಯಕ್ಷ ಲಕ್ಷ್ಮಣ ಭೋವಿ, ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಶಿವರಾಮ ಭೋವಿ, ರಾಜ್ಯ ಕಾರ್ಯದರ್ಶಿ ಸುಭಾಷಚಂದ್ರ, ಗೌರವಾಧ್ಯಕ್ಷ ತುಳಸಿದಾಸ ಭೊಸಲೆ, ಸಂಘದ ಜಿಲ್ಲಾಧ್ಯಕ್ಷ ಶೈಲೇಂದ್ರ, ಉಪಾಧ್ಯಕ್ಷ ಭಗವಾನ, ಗಣೇಶ ಭೋಸ್ಲೆ, ಕಾರ್ಯದರ್ಶಿ ಸಂದೀಪ, ನರೇಂದ್ರ, ಖಜಾಂಚಿ ಸುನೀಲ, ಪ್ರಮುಖರಾದ ಆನಂದ ಕೋಮಟಕರ್, ಉಮೇಶ, ಸುನೀಲ, ಪ್ರವೀಣ ಸೇರಿ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.