ಪುತ್ತೂರು: ಕೇವಲ ಅಂಕಗಳು ಮಾತ್ರ ಉದ್ಯೋಗ ಪಡೆಯಲು ಮಾನದಂಡವಲ್ಲ, ಅದರೊಂದಿಗೆ ಉತ್ತಮ ಜ್ಞಾವನ್ನು ಹೊಂದಿರುವುದು ಅವಶ್ಯಕ. ನಿಮಗೆ ಸಿಕ್ಕಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ನಿಮ್ಮನ್ನು ನೀವು ಶಿಕ್ಷಣವಂತರನ್ನಾಗಿಸಿಕೊಳ್ಳಿ. ವಿದ್ಯಾರ್ಥಿಗಳು ದೊಡ್ಡ ಗುರಿಯನ್ನಿಟ್ಟುಕೊಂಡಷ್ಟು ಎತ್ತರದ ಸ್ಥಾನವನ್ನು ತಲುಪಲು ಸಾಧ್ಯ ಎಂದು ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸ್ ಪುತ್ತೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕ ಪ್ರಮೋದ್ ಭಾಸ್ಕರ್ ಕುಮಾರ್ ತಿಳಿಸಿದರು.ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ರಸಾಯನಶಾಸ್ತ್ರ ಸಂಶೋಧನಾ ವಿಭಾಗ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಭಾರತೀಯ ರಸಾಯನಶಾಸ್ತ್ರದ ಪಿತಾಮಹ ಆಚಾರ್ಯ ಪ್ರಪುಲ್ಲ ಚಂದ್ರ ರಾಯ್ ಇವರ ಕುರಿತು ವಿಚಾರ ಮಂಡಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ, ವಿದ್ಯಾರ್ಥಿಗಳು ರಸಾಯನಶಾಸ್ತ್ರದ ಪಿತಾಮಹ ಆಚಾರ್ಯ ಪ್ರಪುಲ್ಲಚಂದ್ರ ರಾಯ್ ಇವರನ್ನು ಆದರ್ಶ ವ್ಯಕ್ತಿಯನ್ನಾಗಿ ಪರಿಗಣಿಸಬೇಕು ಎಂದರು.ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಹೆಚ್ ಜಿ ಶ್ರೀಧರ್, ಸ್ನಾತಕೋತ್ತರ ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ಸಂಯೋಜಕಿ ಡಾ. ಹರ್ಷಿತಾ ಕೆ. ಆರ್., ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಇದ್ದರು.ವಿದ್ಯಾರ್ಥಿನಿಯರಾದ ಅನುಶ್ರೀ ಸ್ವಾಗತಿಸಿ, ವಂದಿಸಿದರು. ಗಗನ ಕಾರ್ಯಕ್ರಮ ನಿರ್ವಹಿಸಿದರು.