ಪುತ್ತೂರು: ಜಲಾನಯನ ಅಭಿವೃದ್ಧಿ ಕುರಿತು ಮಾಹಿತಿ, ಜಾಗೃತಿ ಸಿದ್ಧತೆ

KannadaprabhaNewsNetwork |  
Published : May 07, 2025, 12:53 AM IST
ಫೋಟೊ: ೫ಪಿಟಿಆರ್-ಪ್ರೆಸ್ಸುದ್ಧಿಗೋಷ್ಠಿಯಲ್ಲಿ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಡಾ| ರಾಜೇಶ್ ಬೆಜ್ಜಂಗಳ  ಮಾತನಾಡಿದರು. | Kannada Prabha

ಸಾರಾಂಶ

ಜಲಾನಯನ ಅಭಿವೃದ್ಧಿಯ ಕುರಿತು ಮಾಹಿತಿ, ಜಾಗೃತಿ ಅನುಷ್ಠಾನದ ಯೋಜನೆಗೆ ಪುತ್ತೂರಿನ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯ ನೇತೃತ್ವದಲ್ಲಿ ಸಿದ್ದತೆ ನಡೆಸಲಾಗುತ್ತಿದೆ

‘ನಮ್ಮ ನೀರ ಸೆಲೆ ರಕ್ಷಿಸೋಣ’, ‘ಮಣ್ಣು ನಮ್ಮ ಆತ್ಮ’ ಪರಿಕಲ್ಪನೆ । ಗ್ರೀನ್ ಇಂಪಾಕ್ಟ್ ಫೌಂಡೇಶನ್ ನೇತೃತ್ವ

ಕನ್ನಡಪ್ರಭ ವಾರ್ತೆ ಪುತ್ತೂರು

ನಮ್ಮ ನೀರ ಸೆಲೆ ರಕ್ಷಿಸೋಣ ಮತ್ತು ಮಣ್ಣು ನಮ್ಮ ಆತ್ಮ ಎಂಬ ಪರಿಕಲ್ಪನೆಯಲ್ಲಿ ಪರಿಸರ ಪ್ರೇಮಿಗಳಿಂದ ಜಲಾನಯನ ಅಭಿವೃದ್ಧಿಯ ಕುರಿತು ಮಾಹಿತಿ, ಜಾಗೃತಿ ಅನುಷ್ಠಾನದ ಯೋಜನೆಗೆ ಪುತ್ತೂರಿನ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯ ನೇತೃತ್ವದಲ್ಲಿ ಸಿದ್ದತೆ ನಡೆಸಲಾಗುತ್ತಿದೆ ಎಂದು ಯೋಜನೆಯ ರೂವಾರಿ ಮತ್ತು ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಮತ್ತು ಯೋಜನೆಯ ಸಲಹೆಗಾರ ನಿವೃತ್ತ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ನೀರ ಸೆಲೆಗಳ ಅಧ್ಯಯನ, ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ, ಮಣ್ಣಿನ ವೈಜ್ಞಾನಿಕ ಅಧ್ಯಯನ, ಮಣ್ಣಿನ ಕುರಿತಾದ ಜಾಗೃತಿ, ಜಲಾನಯನ ವೈವಿಧ್ಯತೆಯ ಕುರಿತು ಅಧ್ಯಯನದ ಕುರಿತು ವಿವಿಧ ಚಟುವಟಿಕೆ ನಡೆಸಲಾಗುವುದು ಎಂದು ವಿವರಿಸಿದರು.ಇದು ಒಂದೆರಡು ವರ್ಷದ ಪ್ರಾಜೆಕ್ಟ್ ಅಲ್ಲ. ನಿರಂತರ ನಡೆಯುತ್ತದೆ. ಇವತ್ತು ನದಿಗಳ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಜೀವ ವೈವಿಧ್ಯಗಳಿವೆ. ಆ ಪ್ರದೇಶದಲ್ಲಿ ಯಾವ ಯಾವ ಬೆಳೆ ಬೆಳೆಯಬಹುದು ಎಂದು ಪ್ರಕೃತಿ ಮೊದಲೇ ನಿರ್ಧರಿಸಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಬೆಳೆಯದಾಗ ಅಲ್ಲಿ ಪರಿಸರದ ಕೊಂಡಿಯೂ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಜಲಾನಯನ ಪ್ರದೇಶ ಮುಂದಿಟ್ಟುಕೊಂಡು ಅಲ್ಲಿಯ ಪ್ರದೇಶಕ್ಕೆ ಅನುಗುಣವಾದ ಮಾಹಿತಿ, ಜಾಗೃತಿ ಮತ್ತು ಅನುಷ್ಠಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ನಮ್ಮೊಂದಿಗೆ ಸಾಕಷ್ಟು ಅನುಭವಿ ತಜ್ಞರು ಇದ್ದಾರೆ. ಅವರ ಸಲಹೆ ಪಡೆದುಕೊಂಡು ವಿವಿಧ ಚಟುವಟಿಕೆ ಆರಂಭಿಸುತ್ತೇವೆ. ಯಾರದಾರೂ ಈ ಕುರಿತು ಪ್ರೋತ್ಸಾಹ ನೀಡಿದರೆ ಅವರನ್ನು ಜೊತೆಯಲ್ಲಿ ಸೇರಿಸಿಕೊಳ್ಳಲಾಗುವುದು. ತ್ಯಾಜ್ಯ ವಿಲೇವಾರಿ, ನೀರು ಮತ್ತು ಮಣ್ಣು ಸಂರಕ್ಷಣೆಗೆ ಕೂಡಾ ಒಂದಷ್ಟು ಚಟುವಟಿಕೆ ಮಾಡುವ ಯೋಚನೆಯಿಂದ ಹಲವು ಯೋಜನೆ ಹಾಕೊಂಡಿದ್ದೇವೆ. ಕರಾವಳಿ ಉಭಯ ಜಿಲ್ಲೆಯಲ್ಲಿ ಸುಮಾರು ೨೨ ನದಿಗಳು ಹರಿಯುತ್ತಿದೆ. ಇದರೊಂದಿಗೆ ಕೆರೆ, ಕೊಳ, ತೋಡುಗಳಿವೆ. ನೀರ ಸೆಲೆಗಳ ಅಧ್ಯಯನ, ಮಣ್ಣಿನ ಮೇಲೆ ಪ್ರಕೃತಿಗಳ ಅಧ್ಯಯನ, ಸಂಘ ಸಂಸ್ಥೆಗಳ ಜೊತೆ ಗೂಡಿ ಆಯ ಪ್ರದೇಶದಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆ ಕುರಿತು ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು. ಸಂಸ್ಥೆಯ ಕಾನೂನು ಸಲಹೆಗಾರ ಕೃಷ್ಣಪ್ರಸಾದ್ ನಡ್ಸಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ