ರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ.ಎಸ್. ನಿರ್ಮಾಣಗೊಂಡಿರುವ ನೆತ್ತೆರಕೆರೆ ತುಳು ಚಲನ ಚಿತ್ರವು ಶುಕ್ರವಾರ ಪುತ್ತೂರಿನ ಭಾರತ್ ಮಾಲ್ನಲ್ಲಿ ಬಿಡುಗಡೆಗೊಂಡಿತು.
ಪುತ್ತೂರು: ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ, ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ.ಎಸ್. ನಿರ್ಮಾಣಗೊಂಡಿರುವ ನೆತ್ತೆರಕೆರೆ ತುಳು ಚಲನ ಚಿತ್ರವು ಶುಕ್ರವಾರ ಪುತ್ತೂರಿನ ಭಾರತ್ ಮಾಲ್ನಲ್ಲಿ ಬಿಡುಗಡೆಗೊಂಡಿತು. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ತುಳು ಚಲನ ಚಿತ್ರಗಳನ್ನು ನಿರ್ಮಿಸುವ ಮೂಲಕ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ತುಳು ಚಲನ ಚಿತ್ರಗಳಿಗೆ ಎಲ್ಲರೂ ಸಹಕಾರ, ಪ್ರೋತ್ಸಾಹಗಳನ್ನು ನೀಡಬೇಕು. ಈ ಚಲನ ಚಿತ್ರವನ್ನು ಉಡುಪಿ ಮತ್ತು ದ.ಕ ಜಿಲ್ಲೆಯ ತುಳುವರು ವೀಕ್ಷಣೆ ಮಾಡುವುದರಿಂದ ಸ್ವರಾಜ್ ಶೆಟ್ಟಿ ಹಾಗೂ ಇತರ ಕಲಾವಿದರ ಭವಿಷ್ಯ ಉಜ್ವಲವಾಗಲಿದೆ. ತುಳುವಿನ ಮೇಲಿನ ಗೌರವದಿಂದ ಚಿತ್ರ ವೀಕ್ಷಣೆ ಮಾಡಿ ಇನ್ನಷ್ಟು ಮಂದಿಗೆ ಪ್ರೇರಣೆ ನೀಡಬೇಕು ಎಂದರು.ಅಕ್ಷಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು ಮಾತನಾಡಿ, ತುಳುವಿನಲ್ಲಿ ಹಲವು ಚಿತ್ರಗಳು ಬರುತ್ತಿದೆ. ನಮ್ಮದೇ ಊರಿನ ಕಲಾವಿದರು ಅಭಿನಯಿಸಿರುವ ಚಿತ್ರಗಳು ತುಳು ಚಿತ್ರ ತಂಡದಲ್ಲಿರುವುದು ನಮಗೆ ಹೆಮ್ಮೆ. ಈ ಚಿತ್ರವು ನೂರು ದಿನ ಪ್ರದರ್ಶನ ಕಂಡ ಚಿತ್ರಗಳ ಸಾಲಿಗೆ ಸೇರ್ಪಡೆಗೊಳ್ಳಲಿ ಎಂದು ಹಾರೈಸಿದರು. ಉದ್ಯಮಿ ಸಹಜ್ ರೈ ಬಳೆಜ್ಜ ಮಾತನಾಡಿ ತುಳುವಿನಲ್ಲಿ ಸಾಕಷ್ಟು ಹೊಸ ಹೊಸ ಚಿತ್ರಗಳ ನಿರ್ಮಾಣ ಅಗುತ್ತಿರುವುದು ತುಳು ಭಾಷೆಗೆ ಹೆಮ್ಮೆ ತರುವ ವಿಚಾರವಾಗಿದೆ. ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿದ್ದು ಚಿತ್ರವನ್ನು ಗೆಲ್ಲಿಸುವ ಕೆಲಸವಾಗಬೇಕು ಎಂದರು.ಹಿರಿಯರಾದ ಸಂಪ್ಯ ಉದಯಗಿರಿ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಗೌರವಾಧ್ಯಕ್ಷ ಮಂಜಪ್ಪ ರೈ ಬಾರಿಕೆ, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಮೂಕಾಂಬಿಕ ಕಲ್ಬರಲ್ ಅಕಾಡೆಮಿಯ ನೃತ್ಯಗುರು ದೀಪಕ್ ಕುಮಾರ್, ರಂಗಕರ್ಮಿ ದಯಾನಂದ ರೈ ಬೆಟ್ಟಂಪಾಡಿ ಶುಭಹಾರೈಸಿದರು. ಸ್ಕೂಲ್ ಲೀಡರ್ ಚಲನ ಚಿತ್ರ ನಿರ್ದೇಶಕ ಅಬ್ದುಲ್ ರಝಾಕ್, ಚಿತ್ರದ ನಟಿ ಭವ್ಯ ಪೂಜಾರಿ, ಭಾರತ್ ಸಿನೇಮಾಸ್ನ ವ್ಯವಸ್ಥಾಪಕ ಜಯರಾಮ ವಿಟ್ಲ ಉಪಸ್ಥಿತರಿದ್ದರು.
ಪದ್ಮರಾಜ್ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಲನಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.