ಪುತ್ತೂರು: ಬಾಲವನ ಪ್ರಶಸ್ತಿಯ ಆಯ್ಕೆ ಸಮಿತಿ ರಚನೆ

KannadaprabhaNewsNetwork |  
Published : Sep 24, 2025, 01:02 AM IST
ಫೋಟೋ:23ಪಿಟಿಆರ್‌-ಬಾಲವನಡಾ. ಶಿವರಾಮ ಕಾರಂತ ಜನ್ಮದಿನಾಚರಣೆ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.  | Kannada Prabha

ಸಾರಾಂಶ

ಡಾ. ಶಿವರಾಮ ಕಾರಂತ ಅವರ ೧೨೪ನೇ ಜನ್ಮದಿನಾಚರಣೆ ಅ. ೧೦ರಂದು ಪುತ್ತೂರಿನ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿಶ್‌ ಬಾಲವನ ಪ್ರಶಸ್ತಿ ಪ್ರದಾನಿಸಲು ಸಾಧಕರ ಆಯ್ಕೆಗಾಗಿ ಸಮಿತಿ ರಚಿಸಲಾಯಿತು.

ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಪೂರ್ವಭಾವಿ ಸಭೆ

ಪುತ್ತೂರು: ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತ ಅವರ ೧೨೪ನೇ ಜನ್ಮದಿನಾಚರಣೆ ಅ. ೧೦ರಂದು ಪುತ್ತೂರಿನ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ನ್ಯಾಯಾಲಯ ಕಛೇರಿ ಸಭಾಂಗಣದಲ್ಲಿ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಬಾಲವನ ಪ್ರಶಸ್ತಿ ಪ್ರದಾನಿಸಲು ಸಾಧಕರ ಆಯ್ಕೆಗಾಗಿ ಸಮಿತಿ ರಚಿಸಲಾಯಿತು.

ಸಮಿತಿ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಕಾರ್ಯದರ್ಶಿಯಾಗಿ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಸಮಿತಿ ಸದಸ್ಯರಾಗಿ ಸಾಹಿತಿ ಝೇವಿಯರ್ ಡಿಸೋಜ, ತಾಳ್ತಜೆ ವಸಂತಕುಮಾರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಅವರನ್ನು ನೇಮಕ ಮಾಡಲಾಯಿತು. ೨೦೨೪ರ ಸಾಲಿನಲ್ಲಿ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಇದ್ದ ಕಾರಣ ಡಾ. ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯ ನಡೆದಿರಲಿಲ್ಲ. ಆದ್ದರಿಂದ ಈ ಬಾರಿ ೨೦೨೪ ಮತ್ತು ೨೦೨೫ನೇ ಸಾಲಿಗೆ ಪ್ರಶಸ್ತಿಗೆ ಎರಡು ಪ್ರತ್ಯೇಕ ಕ್ಷೇತ್ರಗಳ ಇಬ್ಬರು ಸಾಧಕರನ್ನು ಮುಂದಿನ ಒಂದು ವಾರದ ಒಳಗಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.

ಬಾಲವನ ಅಭಿವೃದ್ಧಿ ಹಿನ್ನಲೆಯಲ್ಲಿ ಸ್ಥಳೀಯ ಮಟ್ಟದ ಸಮಿತಿ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ೧೧ ಮಂದಿ ಸಮಿತಿ ನೇಮಕ ಮಾಡುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ. ಶಾಸಕರ ಅಧ್ಯಕ್ಷತೆ ಹಾಗೂ ಉಪವಿಭಾಗಾಧಿಕಾರಿ ಪದನಿಮಿತ್ತ ಕಾರ್ಯದರ್ಶಿಯಾಗಿರುವ ಈ ಸಮಿತಿಗೆ ಬೇಕಾದ ೮ ಮಂದಿಯ ಹೆಸರನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಡಾ.ಕಾರಂತ ಬಾಲವನದ ಮೂಲ ವ್ಯವಸ್ಥೆಗೆ ಧಕ್ಕೆಯಾಗದಂತೆ ಇಲ್ಲಿ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ. ಪ್ರಕೃತಿ ದತ್ತವಾಗಿರುವ ಬಾಲವನದಲ್ಲಿ ದೇಶದ ಸಾಹಿತಿಗಳು, ಕಾದಂಬರಿಕಾರರು ಹಾಗೂ ಕಥೆಗಾರರು ಇಲ್ಲಿ ಬಂದು ತಮ್ಮ ಕೃತಿಗಳನ್ನು ರಚಿಸುವ ಹಾಗೇ ಬರಹಗಾರರ ತಾಣವನ್ನಾಗಿ ರೂಪಿಸಲು ಚಿಂತನೆ ಮಾಡಲಾಗಿದೆ. ಇದು ದೇಶದ ಸಾಹಿತ್ಯ ಮನಸ್ಸುಗಳಿಗೆ ಪ್ರೇರಣೆ ನೀಡುವ ಪೂರಕ ವಾತಾವರಣದ ಸ್ಥಳವಾಗುವಂತೆ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

ಉಪವಿಭಾಗಾಧಿಕಾರಿ ಸ್ಟೆಲ್ಲಾ ವಗೀಸ್ ಮಾತನಾಡಿ, ಬಾಲವನದಲ್ಲಿ ಹಲವು ಸಮಸ್ಯೆಗಳಿವೆ. ಸ್ವಚ್ಛತಾ ವಿಚಾರವಾಗಿಯೂ ದೂರುಗಳು ಬರುತ್ತಿವೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪ್ರತೀ ವರ್ಷ ರು.೮ ಲಕ್ಷ ಬಿಡುಗಡೆಯಾಗುತ್ತಿದೆ. ಬಾಲವನ ಪ್ರವೇಶ ಶುಲ್ಕವಾಗಿ ರು.೫೦ ಸಾವಿರದಷ್ಟು ಸಂಗ್ರಹವಾಗುತ್ತಿದೆ. ಇಲ್ಲಿನ ಸಿಬ್ಬಂದಿಗೆ ಪ್ರವೇಶ ಶುಲ್ಕದಿಂದಲೇ ವೇತನ ನೀಡಬೇಕಾಗಿದೆ. ಖರ್ಚುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಗ್ರಹ ಹೆಚ್ಚು ಮಾಡುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.

ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಡಿವೈಎಸ್ಪಿ ಅರುಣ್ ನಾಗೇಗೌಡ, ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ವಿವಿಧ ಕ್ಷೇತ್ರದ ಪ್ರಮುಖರಾದ ಬಿ.ಪುರಂದರ ಭಟ್, ಐ.ಕೆ. ಬೊಳುವಾರು, ಡಾ. ಶ್ರೀಧರ್ ಎಚ್. ಜಿ., ರಾಘವೇಂದ್ರ ಹಾಲ್ಕೆರೆ, ನಯನ ರೈ, ಭಾಸ್ಕರ ಬಾರ್ಯ, ಡಾ. ಎಚ್. ಮಾಧವ ಭಟ್, ಚಂದ್ರಶೇಖರ ಆಳ್ವ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಲೋಕೋಪಯೋಗಿ ಇಲಾಖಾಧಿಕಾರಿ ರಾಜೇಶ್ ರೈ, ಇಂಜಿನಿಯರ್ ಪ್ರಮೋದ್‌ಕುಮಾರ್, ಮೆಸ್ಕಾಂ ಇಲಾಖೆಯ ರಾಮಚಂದ್ರ, ಕನ್ನಡ ಮತ್ತು ಸಂಸ್ತಿಕೃ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ನಗರಸಭಾ ಸದಸ್ಯೆ ವಿದ್ಯಾ ಗೌರಿ, ತಾಪಂ ಮೆನೇಜರ್ ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ಜಗನ್ನಾಥ ರೈ ಸ್ವಾಗತಿಸಿದರು. ರಮೇಶ್ ಉಳಯ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

.ರಾಜ್ಯದ ಕಾಂಗ್ರೆಸ್‌ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿ
ಪೂರ್ಣಾವಧಿ ಸಿಎಂ ಆಗುವ ವಿಶ್ವಾಸ ಇದೆ : ಸಿಎಂ ಸಿದ್ದರಾಮಯ್ಯ