ಪುತ್ತೂರು: ಭಾರತೀಯ ಕೃಷಿ ಸಂಶೋಧನಾ ಪತಿಷತ್ತು ಮತ್ತು ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ(ಡಿಸಿಆರ್) ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಆರ್ಕೆವಿವೈ ರಾಫ್ಟಾರ್ ಪ್ರಾಯೋಕತ್ವದಲ್ಲಿ ಗೇರು ನರ್ಸರಿ ನಿರ್ವಹಣಾ ತಂತ್ರಜ್ಞಾನ ಕುರಿತು ಎರಡು ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ನಡೆಯಿತು. ಗೇರು ಬೆಳೆಯ ವ್ಯಾಪ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಗೇರು ಕಸಿಗಳಿಗೆ ಭಾರಿ ಬೇಡಿಕೆಯಿದೆ. ಆರೋಗ್ಯಕರ ಗೇರು ತೋಟಗಳು ಮತ್ತು ಹೆಚ್ಚಿನ ಉತ್ಪಾದಕತೆ ಖಚಿತಪಡಿಸಿಕೊಳ್ಳಲು ಗುಣಮಟ್ಟದ ಕಸಿ ಅತ್ಯಗತ್ಯ. ಈ ಸಂದರ್ಭ ತರಬೇತುದಾರರಿಗೆ ಸಯಾನ್ ಬ್ಯಾಂಕ್ ಸ್ಥಾಪನೆ, ಕಸಿ ಕಟ್ಟುವಿಕೆ ಮತ್ತು ಗೇರು ಕಸಿ ಗಿಡಗಳ ನಂತರದ ಆರೈಕೆಯ ಅವಧಿಗಳನ್ನು ಒಳಗೊಂಡಂತೆ ನರ್ಸರಿ ನಿರ್ವಹಣೆಯ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.ಸಂಸ್ಥೆಯ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಗೇರು ಕಸಿ ಗಿಡಗಳ ಉತ್ಪಾದನೆ ಖಚಿತ ಪಡಿಸಿಕೊಳ್ಳುವಲ್ಲಿ ನರ್ಸರಿಗಳ ಪಾತ್ರ ಮತ್ತು ಗೇರು ಮತ್ತು ಕೋಕೋ ನಿರ್ದೇಶನಾಲಯದ (ಡಿಸಿಸಿಡಿ) ಮಾನ್ಯತೆಯ ಅಗತ್ಯತೆಯನ್ನು ತಿಳಿಸಿದರು. ಭಾರತ ಅಗ್ರಿ ಡೆವಲಪ್ಮೆಂಟ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ (ವಿಟ್ಲ ಶಾಖೆ) ಪ್ರಸಾದ್ ಶೆಟ್ಟಿ, ತರಬೇತಿ ಕಾರ್ಯಕ್ರಮದ ಸಂಯೋಜಕಿ ಡಾ. ಅಶ್ವತಿ ಚಂದ್ರಕುಮಾರ್, ಸಹ-ಸಂಯೋಜಕಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಭಾಗ್ಯ ಎಚ್.ಪಿ. ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಈರದಾಸಪ್ಪ ಇ. ಇದ್ದರು.ತರಬೇತಿಯ ಮೊದಲ ದಿನ ಡಾ. ಈರದಾಸಪ್ಪ ಮತ್ತು ಡಾ. ಭಾಗ್ಯ ಎಚ್.ಪಿ., ಸಯಾನ್ ಬ್ಯಾಂಕ್ ಮತ್ತು ಗೇರು ನರ್ಸರಿ ಸ್ಥಾಪನೆ ಮತ್ತು ಅದರ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಬಳಿಕ ತರಬೇತುದಾರರಿಗೆ ನರ್ಸರಿಗೆ ಕರೆದೊಯ್ದು ಉತ್ತಮ ಗುಣಮಟ್ಟದ ಕಸಿಕಡ್ಡಿ ಸಂಗ್ರಹಣೆ ತೋರಿಸಲಾಯಿತು. ಬಳಿಕ ಗೇರುವನ್ನು ವಾಣಿಜ್ಯವಾಗಿ ಅಳವಡಿಸಿಕೊಳ್ಳುವ ಮೆದುಕಾಂಡ ಕಸಿ ಕಟ್ಟುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.ಎರಡನೇ ದಿನ ಡಾ. ರಾಜಶೇಖರ ಎಚ್. (ವಿಜ್ಞಾನಿ - ಸಸ್ಯ ರೋಗಶಾಸ್ತ್ರ) ಅವರು ನರ್ಸರಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ನಂತರ ಡಾ. ಟಿ. ಎನ್. ರವಿಪ್ರಸಾದ್ (ಪ್ರಧಾನ ವಿಜ್ಞಾನಿ - ಕೃಷಿ ಕೀಟಶಾಸ್ತ್ರ) ಅವರು ಸಾಮಾನ್ಯ ಕೀಟಗಳು, ಅವುಗಳ ಲಕ್ಷಣಗಳು ಹಾಗೂ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಗೋಡಂಬಿ ನರ್ಸರಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ತರಬೇತುದಾರರಿ ಗೇರು ನರ್ಸರಿಯನ್ನು ಸ್ಥಾಪಿಸುವ ಖರ್ಚು ವೆಚ್ಚದ ಬಗ್ಗೆಯೂ ಮಾಹಿತಿ ನೀಡಲಾಯಿತು.ಕಾರ್ಯಕ್ರಮದ ಅಂತಿಮ ಅಧಿವೇಶನದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳ ಜೊತೆಗೆ ಸಿಕೇಚರ್ ಮತ್ತು ಸಮರುವಿಕೆಯ ಕತ್ತರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು.