ಕನ್ನಡಪ್ರಭವಾರ್ತೆ ಪುತ್ತೂರು
ವಿವೇಕಾನಂದ ಕಾಲೇಜ್ನಲ್ಲಿ ಸುದೀರ್ಘ ಅವಧಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಹೊಂದಿರುವ ಕಾಲೇಜ್ನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್(ಪ್ರೊ.ವಿಜಿ ಭಟ್) ಅವರಿಗೆ ಇಲ್ಲಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಅಧ್ಯಾಪಕರ ಸಂಘ ಹಾಗೂ ಅಧ್ಯಾಪಕೇತರ ಸಂಘದ ವತಿಯಿಂದ ಭಾನುವಾರ ಕಾಲೇಜ್ನಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ.ಕೃಷ್ಣ ಭಟ್ ಅವರು ವಿದ್ಯಾಸಂಸ್ಥೆಯನ್ನು ಶೈಕ್ಷಣಿಕವಾಗಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರೊ.ವಿಷ್ಣು ಗಣಪತಿ ಭಟ್ ಅವರ ಕಾರ್ಯ ಪ್ರಶಂಸನೀಯವಾದುದು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ದಾನ ಮಾಡಿ ಇದೀಗ ನಿವೃತ್ತಿ ಯ ಹಾದಿಯಲ್ಲಿರುವ ಇವರು ಸಾಗಿ ಬಂದ ರೀತಿ ಸ್ಮರಣೀಯ. ನಿವೃತ್ತಿ ಯ ನಂತರವೂ ಇವರ ಮಾರ್ಗದರ್ಶನ ಎಲ್ಲರಿಗೂ ಲಭಿಸುವಂತಾಗಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಪ್ರೊ.ವಿಜಿ ಭಟ್ ಅವರ ಕಾರ್ಯತತ್ಪರತೆ ಹಾಗೂ ಬದ್ಧತೆ ನಮಗೆಲ್ಲ ಮಾದರಿ. ಕಾಲೇಜು ಸ್ವಾಯತ್ತ ಸ್ಥಾನಮಾನವನ್ನು ಪಡೆದುಕೊಳ್ಳುವ ಸಮಯ ಅತ್ಯಂತ ಸವಾಲಾಗಿದ್ದರೂ ಕೂಡಾ ಇವರು ಬಹಳ ಸುಲಲಿತವಾಗಿ ನಿರ್ವಹಿಸಿದ್ದಾರೆ ಎಂದರು.ಪ್ರಾಂಶುಪಾಲ ಪ್ರೊ.ವಿಜಿ ಭಟ್ ಮಾತನಾಡಿ, ದೂರದ ಹೊನ್ನಾವರದಿಂದ ಬಂದ ನನಗೆ ಪುತ್ತೂರು ಸಾಂಸ್ಕ್ರತಿಕವಾದ ಬದುಕನ್ನು ಕೊಟ್ಟಿದೆ. ಇಲ್ಲಿಯ ಮಣ್ಣಿನ ಗುಣ ಅತ್ಯಂತ ಶ್ರೇಷ್ಠವಾದುದು. ಹಾಗಾಗಿ ಇಲ್ಲಿ ಕೈಗೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತದೆ ಎಂದು ತಮ್ಮ ಮೂವತ್ತೈದು ವರ್ಷದ ಸೇವೆಯನ್ನು ಸ್ಮರಿಸಿಕೊಂಡರು.ಈ ಸಂದರ್ಭದಲ್ಲಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಐಕ್ಯೂಎಸಿ ಸಂಯೋಜಕಿ ಡಾ.ರವಿಕಲಾ, ಎಂಕಾಂ ವಿಭಾಗದ ಮುಖ್ಯಸ್ಥೆ, ಡೀನ್ ಡಾ.ವಿಜಯ ಸರಸ್ವತಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ್ ಶಾಸ್ತ್ರಿ, ಕಲಾ ವಿಭಾಗದ ಡೀನ್ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ದುರ್ಗಾ ರತ್ನ, ಉಪ್ಪಿನಂಗಡಿಯ ಇಂದ್ರಪ್ರಸ್ಥ ಕಾಲೇಜಿನ ಪ್ರಾಂಶುಪಾಲ ಎಚ್.ಕೆ.ಪ್ರಕಾಶ್, ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ನಿವೃತ್ತ ಪ್ರಾಂಶುಪಾಲ ಪ್ರೊ.ವೇದವ್ಯಾಸ, ಅಧ್ಯಾಪಕೇತರ ನೌಕರ ಸಂಘದ ಅಧ್ಯಕ್ಷ ಮೋಹನ್ ಮುಂತಾದವರು ಶುಭಹಾರೈಸಿದರು.ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಸೌಮಿತ್ರ ಸ್ವಾಗತಿಸಿದರು. ಲ್ಯಾಬ್ ಸಹಾಯಕ ಶಿವರಾಮ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂ ನಿರೂಪಿಸಿದರು.