ಪುತ್ತೂರು: ಸುಮಾರು ೫೦ ವರ್ಷಗಳಿಂದ ನಡೆಯುತ್ತಿದ್ದ ರಸ್ತೆ ವಿವಾದವೊಂದನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿ ವಿವಾದ ನಡೆಸುತ್ತಿದ್ದ ಎರಡೂ ಕುಟುಂಬವನ್ನು ಒಂದುಗೂಡಿಸಿದ್ದಕ್ಕಾಗಿ ಆ ಕುಟುಂಬಸ್ಥರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸನ್ಮಾನಿಸಿದರು.ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕಾಯರ್ಮುಗೇರು ಎಂಬಲ್ಲಿ ಕುಟುಂಬ ಸಂಬಧಿಕರಾದ ದೇರಣ್ಣ ಗೌಡ ಮತ್ತು ಲೋಕಯ್ಯ ಗೌಡ ಕುಟುಂಬದ ನಡುವೆ ರಸ್ತೆ ವಿವಾದ ನಡೆಯುತ್ತಿತ್ತು. ಇದನ್ನು ಇತ್ಯರ್ಥಪಡಿಸುವ ಬಗ್ಗೆ ಶಾಸಕರಿಗೆ ದೂರು ನೀಡಲಾಗಿತ್ತು. ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರನ್ನು ತನ್ನ ಕಚೇರಿಗೆ ಕರೆಸಿದ ಶಾಸಕರು ಮಾತುಕತೆ ನಡೆಸಿದ್ದರು. ಮಾತುಕತೆ ನಡೆಸಿದ ಪರಿಣಾಮ ಎರಡೂ ಕುಟುಂಬಸ್ಥರು ರಸ್ತೆ ವಿವಾದವನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಒಪ್ಪಿಕೊಂಡಿದ್ದರು.
ಈ ಸಂದರ್ಭದಲ್ಲಿ ದೇರಣ್ಣ ಗೌಡ, ಲಿಂಗಪ್ಪ ಗೌಡ ಯೋಗಿಶ್ ಗೌಡ, ವಿಶ್ವನಾಥ ಗೌಡ, ಶೇಖರ ಗೌಡ, ಸೀತಾರಾಮ ಗೌಡ, ಬಾಲಕೃಷ್ಣ ಗೌಡ, ಪುನೀತ್ ಗೌಡ, ರೋಹಿತ್ ಗೌಡ, ಗಣೇಶ್ ಗೌಡ, ಶೇಖರ ಗೌಡ, ಸೌಮ್ಯ, ಲೋಕಯ್ಯ ಗೌಡ ಹಾಗೂ ಪಕ್ಷದ ಮುಖಂಡರಾದ ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ ಹರಿಣಾಕ್ಷಿ, ಬೂತ್ ಅಧ್ಯಕ್ಷ ವಸಂತ್, ರಾಘವೇಂದ್ರ ಉಪಸ್ಥಿತರಿದ್ದರು. ಸುಮಾರು ೫೦ ವರ್ಷಗಳಿಂದ ನಮ್ಮೊಳಗಿದ್ದ ದಾರಿ ವಿವಾದವನ್ನು ಶಾಸಕ ಅಶೋಕ್ ರೈ ಅವರು ಮುತುವರ್ಜಿ ವಹಿಸಿ ಇತ್ಯರ್ಥ ಮಾಡಿದ್ದು ಮಾತ್ರವಲ್ಲದೆ ಪರಸ್ಪರ ಮುನಿಸಿಕೊಂಡಿದ್ದ ಎರಡು ಕುಟುಂಬವನ್ನು ಒಂದುಗೂಡಿಸಿದ್ದಾರೆ. ಈ ತನಕ ನಮ್ಮ ದಾರಿ ಸಮಸ್ಯೆಯನ್ನು ಇತ್ಯರ್ಥ ಮಾಡುವಲ್ಲಿ ಯಾರೂ ಸಹಾಯ ಮಾಡಿಲ್ಲ. ಕುಟುಮಬ ಸದಸ್ಯನಂತೆ ಮುಂದೆ ನಿಂತು ನಮ್ಮ ವಿವಾದವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ನಮ್ಮನ್ನು ಒಂದುಗೂಡಿಸಿದ್ದಾರೆ.