ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಪಿ.ಎಸ್.ನಾಯ್ಕೋಡಿ

KannadaprabhaNewsNetwork | Published : Dec 30, 2023 1:30 AM

ಸಾರಾಂಶ

ಗಣಿತ ಕಲಿಕಾ ಆಂದೋಲನದಲ್ಲಿ ಪಿಡಿಒ ಪಿ.ಎಸ್.ನಾಯ್ಕೋಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಇಲ್ಲಿ ಓದಿದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಇಲ್ಲಿ ಓದಿದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದಾರೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು ಎಂದು ರಕ್ಕಸಗಿ ಗ್ರಾ.ಪಂ ಪಿಡಿಒ ಪಿ.ಎಸ್.ನಾಯ್ಕೋಡಿ ಹೇಳಿದರು.

ರಕ್ಕಸಗಿ ನಾಲತವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಕಸಗಿ ಗ್ರಾ.ಪಂ, ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗಣಿತ ಕಬ್ಬಿಣದ ಕಡಲೆ ಎನ್ನುವ ಅಭಿಪ್ರಾಯ ಸಾಮಾನ್ಯ. ತರಗತಿಗಳಲ್ಲಿ ಗಣಿತ ವಿಷಯ ಪರಿಣಾಮಕಾರಿ ಮತ್ತು ಸರಳವಾಗಿ ಬೋಧಿಸುವ ಕುರಿತು ಶಿಕ್ಷಕರಿಂದ ನಿರಂತರ ಪ್ರಯತ್ನಗಳು ನಡೆಯಬೇಕು. ಇಂತಹ ಕಲಿಕಾ ಆಂದೋಲನಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಯೋಜನವಾಗಲಿದೆ ಎಂದರು.

ಸಿಆರ್‌ಪಿ ಮಹಾಂತೇಶ ನೂಲಿನವರ ಮಾತನಾಡಿ, ಮಕ್ಕಳಲ್ಲಿ ಗಣಿತದ ವಿಷಯದ ಬಗ್ಗೆ ಇರುವ ಭಯ ಹೋಗಲಾಡಿಸಲು ಸರ್ಕಾರ, ಸ್ಥಳೀಯ ಆಡಳಿತ, ಸರ್ಕಾರೇತರ ಸಂಘ ಸಂಸ್ಥೆಗಳು ಜಂಟಿಯಾಗಿ ಗಣಿತ ಕಲಿಕಾ ಆಂದೋಲನ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ. ಆ ಮೂಲಕ ವಿದ್ಯಾರ್ಥಿಗಳು ಗಣಿತ ವಿಷಯ ಪರಿಣಾಮಕಾರಿಯಾಗಿ ಕಲಿಯಲು ಪ್ರೇರೇಪಿಸಲಾಗುತ್ತಿದೆ ಎಂದರು.

4,5,6 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಗ್ರಾ.ಪಂ ಉಪಾಧ್ಯಕ್ಷೆ ತಂಗಮ್ಮ ಗುರಿಕಾರ, ಸದಸ್ಯ ಸಾಗರ ಮುದೂರ, ಶಂಕ್ರಣ್ಣ ನಾಡಗೌಡ್ರ, ಪದ್ಮಾವತಿ ಬಂಡಿವಡ್ಡರ, ಸರಿತಾ ಶ.ರಕ್ಕಸಗಿ ದೇಣಿಗೆ ಕೊಟ್ಟರು. ಭಾಗವಹಿಸಿದ 120 ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ ವಿತರಿಸಲಾಯಿತು. ಆರ್‌.ಎಸ್.ಹಿರೇಮಠ ಸ್ವಾಗತಿಸಿದರು, ಗೀತಾಂಜಲಿ ದೇಶಮುಖ ಹಾಗೂ ವಿ.ಎಸ್.ಮಳಗಿ ನಿರೂಪಿಸಿದರು, ಎನ್.ಎಸ್ ಅಥಣಿ ವಂದಿಸಿದರು. ಮುಖ್ಯಗುರು ಎ.ಎಸ್.ಸಿರಗುಂಪಿ, ಸಂಗಣ್ಣ ಸಜ್ಜನ, ಸಂಗಣ್ಣ ಟಕ್ಕಳಕಿ, ಅಶೋಕ ಇದ್ದರು.

Share this article