ಕನ್ನಡ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಆನಂದ್ ಸಿ. ಕುಂದರ್

KannadaprabhaNewsNetwork | Published : Jun 15, 2024 1:11 AM

ಸಾರಾಂಶ

ಗಿಳಿಯಾರಿನ ಶಾಂಭವಿ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಬುಕ್, ಸಮವಸ್ತ್ರ, ಸ್ಕೂಲ್ ಬ್ಯಾಗ್, ಬೆಲ್ಟ್, ಐಡಿ ಕಾರ್ಡ್ ಹಾಗೂ ಕಲಿಕೋಪಕರಣ ವಿತರಣಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.

ಅವರು ಇಲ್ಲಿನ ಗಿಳಿಯಾರಿನ ಶಾಂಭವಿ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಬುಕ್, ಸಮವಸ್ತ್ರ, ಸ್ಕೂಲ್ ಬ್ಯಾಗ್, ಬೆಲ್ಟ್, ಐಡಿ ಕಾರ್ಡ್ ಹಾಗೂ ಕಲಿಕೋಪಕರಣ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಕನ್ನಡ ಮಾಧ್ಯಮ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಕೊರತೆ ಎದುರಿಸುತ್ತಿದ್ದೇವೆ. ಪೋಷಕರಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹ ಅತಿಯಾಗಿ ಕಾಡುತ್ತಿದೆ. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ಪ್ರತಿಯೊಂದು ಸವಲತ್ತು ಸಿಗುತ್ತಿದ್ದು, ಪೋಷಕರು ಸಂಸ್ಕಾರಭರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆಕೊಟ್ಟರು.

ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಪಿ. ನರಸಿಂಹ ಐತಾಳ್ ಕಲಿಕೋಪಕರಣ ವಿತರಿಸಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳ ಅವನತಿಗೆ ಸರ್ಕಾರದ ನೀತಿಗಳೇ ಕಾರಣವಾಗಿದೆ. ಕನ್ನಡವನ್ನು ಕೊಲೆ ಮಾಡುವ ಸ್ಥಿತಿ ಅವರು ಸೃಷ್ಟಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯವಹಾರಿಕಾ ಕ್ಷೇತ್ರವಾಗಿ ಮಾರ್ಪಾಡುಗೊಂಡಿದೆ. ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿ ಇಲ್ಲದಾಗಿದೆ. ಈ ದಿಸೆಯಲ್ಲಿ ಸರ್ಕಾರದ ಕೆಟ್ಟ ನೀತಿಯನ್ನು ಖಂಡಿಸಿ ಮಕ್ಕಳ ಭವಿಷ್ಯದ ಭದ್ರ ಬುನಾದಿಗೆ ಕನ್ನಡ ಮಾಧ್ಯಮ ಶಿಕ್ಷಣವೇ ಅಂತಿಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಂಭವಿ ಅನ್ನದಾಯಿನಿ ಟ್ರಸ್ಟ್ ಕೋಟ, ಗೀತಾನಂದ ಫೌಂಡೇಶನ್ ಮಣೂರು, ದಿ.ಸಾವಿತ್ರಮ್ಮ ಪರಮೇಶ್ವರ ಮಯ್ಯ ಸ್ಮಾರಕ ದತ್ತಿನಿಧಿ, ಯಜ್ಞನಾರಾಯಣ ಹೇರ್ಳೆ ಸ್ಮಾರಕ ದತ್ತಿನಿಧಿ ಇಂದಿರಾ ಕೃಷ್ಣ ಮಧ್ಯಸ್ಥ, ಗಿಳಿಯಾರು ಪಾರ್ವತಮ್ಮ ವೆಂಕಪ್ಪ ಮಯ್ಯ ಸ್ಮರಣಾರ್ಥ ಪ್ರಕಾಶ್ ಪ್ರಿಂಟರ್ಸ್‌ ಕೋಟ ಇವರು ಕೊಡಮಾಡಿದ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸಂಚಾಲಕ ಸಚಿನ್ ಕಾರಂತ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜಿ.ಸತೀಶ್ ಹೆಗ್ಡೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಜೋಗಿ, ನಿವೃತ್ತ ಶಿಕ್ಷಕ ಎಂ.ಎನ್ ಮಧ್ಯಸ್ಥ, ಶಾಲಾ ಆಡಳಿತ ಮಂಡಳಿಯ ಸದಸ್ಯ ಜಿ.ವಿ ಅಶೋಕ್ ಹೇರ್ಳೆ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ದಿವಾಕರ್ ರಾವ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ವಿನೋದ ವಿ. ನಿರೂಪಿಸಿದರು. ದೈಹಿಕ ಶಿಕ್ಷಕ ರಮೇಶ್ ಕುಮಾರ್ ವಂದಿಸಿದರು.

Share this article