ನರಗುಂದ: ಶಿಕ್ಷಣ ಕ್ಷೇತ್ರದಲ್ಲಿ ಶಾಲಾ- ಕಾಲೇಜು ಆರಂಭಿಸುವಲ್ಲಿ ದಿನೇ ದಿನೇ ಸ್ಪರ್ಧೆ ಹೆಚ್ಚುತ್ತಿದೆ. ಆದರೆ ನೈತಿಕ ಮೌಲ್ಯಯುಳ್ಳ ಗುಣಾತ್ಮಕ ಶಿಕ್ಷಣ ನೀಡುವುದೇ ಶಿಕ್ಷಣ ಸಂಸ್ಥೆಗಳ ಮುಖ್ಯ ಆದ್ಯತೆಯಾಗಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಇಲ್ಲಿ ಕಲಿತ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಪಾಸಾಗಿರುವುದು ಇಲ್ಲಿನ ಶಿಕ್ಷಕರ ಗುಣಾತ್ಮಕ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ನರಗುಂದದ ಗಣ್ಯರ ಸೇವೆ ಅನನ್ಯವಾಗಿದೆ. ನೂತನ ಕಟ್ಟಡ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಿತಗೊಳ್ಳುತ್ತಿದೆ. ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಶಾಸಕರ ಅನುದಾನದಲ್ಲಿ ₹24 ಲಕ್ಷ ಸಂಸ್ಥೆಗೆ ನೀಡಲಾಗುವುದು ಎಂದರು.
ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ಮಾತನಾಡಿ, ಬಂಡಾಯದ ನೆಲದಲ್ಲಿ ಶೈಕ್ಷಣಿಕ ಕ್ರಾಂತಿ ಹುಟ್ಟು ಹಾಕಿದ ಲಯನ್ಸ್ ಸಂಸ್ಥೆ ಸುತ್ತಲಿನ ತಾಲೂಕಗಳಿಗೆ ವರದಾನವಾಗಿದೆ. ಆಧುನಿಕತೆಗೆ ತಕ್ಕಂತೆ ನಿರ್ಮಾಣ ಗೊಂಡು ಇನ್ನಷ್ಟು ಗುಣಾತ್ಮಕ ಶಿಕ್ಷಣ ನೀಡುವಂತಾಗಲಿ ಎಂದರು.ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಲಯನ್ಸ್ ಶಿಕ್ಷಣ ಸಂಸ್ಥೆ ಹಳೆ ಸಂಸ್ಥೆಯಾಗಿದೆ. ಇದು ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಮೀರಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತದೆ ಎಂದರು.
ವಿರಕ್ತಮಠದ ಶಿವಕುಮಾರ ಶ್ರೀಗಳು, ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಮಂಜುಳಾ ಗುಜಮಾಗಡಿ, ವೈಸ್ ಚೇರ್ಮನ್ ಉಮೇಶಗೌಡ ಪಾಟೀಲ, ಕಾರ್ಯದರ್ಶಿ ಡಾ. ಪ್ರಭು ನಂದಿ, ಜಂಟಿ ನಿರ್ದೇಶಕ ವಿಜಯಕುಮಾರ ಬೇಲೇರಿ, ನಿರ್ದೇಶಕರಾದ ಜಿ.ಬಿ. ಕುಲಕರ್ಣಿ, ಬಿ.ಕೆ. ಗುಜಮಾಗಡಿ, ಸಿ.ಎಸ್. ಸಾಲೂಟಗಿಮಠ, ಎಸ್.ಎಸ್. ಪಾಟೀಲ, ಜಯಪ್ರಕಾಶ ಕಂಠಿ, ತವನಪ್ಪ ರೋಖಡೆ, ರಾಘವೇಂದ್ರ ಆನೇಗುಂದಿ, ಮಾಲತೇಶ ಪಾಟೀಲ, ಮುಖ್ಯ ಶಿಕ್ಷಕರಾದ ಜಿ.ಬಿ. ಹಿರೇಮಠ, ಎಸ್.ಜಿ. ಜಕ್ಕಲಿ ಇದ್ದರು. ಡಾ. ಪ್ರಭು ನಂದಿ ಸ್ವಾಗತಿಸಿದರು. ವಿಜಯಲಕ್ಷ್ಮೀ ನೂರಶೆಟ್ಟರ, ವಿಭಾ ರಾಮದುರ್ಗ ನಿರೂಪಿಸಿದರು. ಡಾ. ಬಸವರಾಜ ಹಲಕುರ್ಕಿ ವಂದಿಸಿದರು.