ವ್ಯಸನಗಳನ್ನು ಬಿಡುವುದು ಸಮಾಜಕ್ಕೆ ಆರೋಗ್ಯಕರ ಸಂದೇಶ-ಪಿಎಸ್‌ಐ ವಿಜಯ ಪವಾರ

KannadaprabhaNewsNetwork | Published : Jun 29, 2025 1:33 AM

ವ್ಯಸನಗಳನ್ನು ಬಿಡುವುದು ಹಾಗೂ ವ್ಯಸನಗಳನ್ನು ಮಾಡದಿರುವುದು ಸಮಾಜಕ್ಕೆ ಆರೋಗ್ಯಕರವಾದ ಸಂದೇಶವಾಗಿದೆ ಎಂದು ಪಿಎಸ್‌ಐ ವಿಜಯ ಪವಾರ ಹೇಳಿದರು.

ಗದಗ: ವ್ಯಸನಗಳನ್ನು ಬಿಡುವುದು ಹಾಗೂ ವ್ಯಸನಗಳನ್ನು ಮಾಡದಿರುವುದು ಸಮಾಜಕ್ಕೆ ಆರೋಗ್ಯಕರವಾದ ಸಂದೇಶವಾಗಿದೆ ಎಂದು ಪಿಎಸ್‌ಐ ವಿಜಯ ಪವಾರ ಹೇಳಿದರು.

ನಗರದ ಪರಿವರ್ತನಾ ಸೇವಾ ಸಂಸ್ಥೆಯ ಸಂಸ್ಕಾರ ವ್ಯಸನ ಮುಕ್ತಿ ಕೇಂದ್ರ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಹಾಗೂ ಕಾನೂನುಬಾಹಿರ ಮಾರಾಟ ವಿರೋಧಿ ದಿನಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪರಿವರ್ತನಾ ಸಂಸ್ಥೆಯವರು ಪುನರ್ವಸತಿ ಕೇಂದ್ರದಿಂದ ವ್ಯಸನಿಗಳನ್ನು ಚಿಕಿತ್ಸೆ ಮೂಲಕ ಗುಣಪಡಿಸಿ ನಿಮ್ಮ ಆರೋಗ್ಯಕರವಾದ ವ್ಯಕ್ತಿತ್ವ ನಿರ್ಮಾಣ ಮಾಡುತ್ತಿದ್ದು ಸಮಾಜಮುಖಿ ಕಾರ್ಯವಾಗಿದೆ. ವ್ಯಸನಮುಕ್ತ ಕೇಂದ್ರದಿಂದ ಗುಣಮುಖರಾಗಿ ಹೊರಗೆ ಹೋದ ಮೇಲೆ ಗೌರವಯುತವಾಗಿ ಬಾಳುವಂತಾಗಲಿ ಎಂದರು.ಕೆ.ಎಸ್.ಎಸ್. ಕಾನೂನು ಮಹಾವಿದ್ಯಾಲಯದ ಆಡಳಿತ ಅಧಿಕಾರಿ ನಾಗರಾಜ್ ಕುಲಕರ್ಣಿ ಮಾತನಾಡಿ, ಸಮಾಜದಲ್ಲಿ ಆರೋಗ್ಯಕರ ಆಹಾರ ಸೇವನೆ. ಮನಸ್ಸು, ದೇಹ ಎರಡನ್ನು ಸಮತೋಲನದ ದಿಕ್ಕಿನಲ್ಲಿ ಹೋಗಬೇಕು, ದುಶ್ಚಟಗಳಿಂದ ದೂರವಿದ್ದು, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜದ ಮಾದರಿ ವ್ಯಕ್ತಿಗಳನ್ನು ಅನುಕರಣೆ ಮಾಡಿ ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ನಾವೆಲ್ಲರೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು. ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಾಜಿ ಜಿಲ್ಲಾ ಸದಸ್ಯ ರಮೇಶ್ ಸಜ್ಜಗಾರ ಮಾತನಾಡಿ, ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಅದಕ್ಕಾಗಿ ನಾವೆಲ್ಲರೂ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ದುಶ್ಚಟಗಳಿಂದ ದೂರವಿದ್ದು, ಧ್ಯಾನ, ಯೋಗ ಮುಂತಾದ ಆರೋಗ್ಯಕರವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕುಟುಂಬಕ್ಕೆ ಸಹಕಾರಿಯಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸುವ ವ್ಯಕ್ತಿಗಳಾಗಿ ನಿರ್ಮಾಣವಾಗಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷೆ ಪ್ರತಿಭಾ ತಂಗಡಿ ಮಾತನಾಡಿದರು.ಭಾರತಿ ಕೆಂಚಣ್ಣವರ, ಮಲಗೌಡ ತಂಗಡಿ, ಅಜಿತ, ದೇವಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ವೀರೇಶ್ ನಿರೂಪಿಸಿದರು. ಸುಜಾತಾ ಸ್ವಾಗತಿಸಿದರು.