ಜಿಎಸ್ಟಿ ಇಳಿಕೆ ಮಾಡಿರುವುದರಿಂದ ತೆರಿಗೆಯ ಹೊರೆ ಕಡಿಮೆಯಾಗಿದೆ. ಜನರಿಗೆ ಹೆಚ್ಚು ಅನುಕೂಲವಾಗಿದ್ದು, ಇಂತಹ ಸುಧಾರಣಾ ಕ್ರಮಗಳು ಪ್ರಸ್ತುತದಲ್ಲಿ ಅಗತ್ಯವಾಗಿದ್ದವು. ಜನಪರವಾದ ಇಂತಹ ನಿರ್ಧಾರಗಳಿಂದ ಎನ್ಡಿಎ ಸರ್ಕಾರದ ಬಗ್ಗೆ ಜನರ ವಿಶ್ವಾಸವೂ ಹೆಚ್ಚಾಗಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರ ದಿನಬಳಕೆ ಪದಾರ್ಥಗಳ ಮೇಲಿನ ಜಿಎಸ್ಟಿ ಇಳಿಸಿರುವ ಹಿನ್ನೆಲೆಯಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಂಡ್ಯದ ಪೇಟೆ ಬೀದಿಯಲ್ಲಿ ವರ್ತಕರು-ವ್ಯಾಪಾರಿಗಳೊಂದಿಗೆ ಸಂಭ್ರಮಾಚರಣೆ ನಡೆಸಿದರು.
ವಿಪಕ್ಷ ನಾಯಕ ಪೇಟೆ ಬೀದಿಯಲ್ಲಿ ಕಾಲ್ನಡಿಗೆ ಮೂಲಕ ಅಂಗಡಿಗಳಿಗೆ ತೆರಳಿ ವರ್ತಕರಿಗೆ ಸಿಹಿ ತಿನ್ನಿಸಿದರು. ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿ, ಜಿಎಸ್ಟಿ ಇಳಿಸಿರುವ ಎನ್ಡಿಎ ಸರ್ಕಾರದ ಕ್ರಮದ ಬಗ್ಗೆ ವ್ಯಾಪಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ತಮ್ಮ ಅಂಗಡಿಗಳಿಗೆ ಭೇಟಿ ನೀಡಿದ ಆರ್.ಅಶೋಕ್ ಅವರನ್ನು ಹಲವು ವ್ಯಾಪಾರಿಗಳು-ವರ್ತಕರು ಅಭಿನಂದಿಸಿದರು.
ಜಿಎಸ್ಟಿ ಇಳಿಕೆ ಮಾಡಿರುವುದರಿಂದ ತೆರಿಗೆಯ ಹೊರೆ ಕಡಿಮೆಯಾಗಿದೆ. ಜನರಿಗೆ ಹೆಚ್ಚು ಅನುಕೂಲವಾಗಿದ್ದು, ಇಂತಹ ಸುಧಾರಣಾ ಕ್ರಮಗಳು ಪ್ರಸ್ತುತದಲ್ಲಿ ಅಗತ್ಯವಾಗಿದ್ದವು. ಜನಪರವಾದ ಇಂತಹ ನಿರ್ಧಾರಗಳಿಂದ ಎನ್ಡಿಎ ಸರ್ಕಾರದ ಬಗ್ಗೆ ಜನರ ವಿಶ್ವಾಸವೂ ಹೆಚ್ಚಾಗಲಿದೆ ಎಂದು ವರ್ತಕರು ತಿಳಿಸಿದರು.
ಸಂಭ್ರಮಾಚರಣೆ ವೇಳೆ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಎಸ್.ಸಚ್ಚಿದಾನಂದ, ಎಸ್.ಪಿ.ಸ್ವಾಮಿ, ವಸಂತಕುಮಾರ್, ಅಶೋಕ್ ಜಯರಾಂ, ಬಸವರಾಜು, ಸಿ.ಟಿ.ಮಂಜುನಾಥ್, ನಾಗಾನಂದ್, ಎಚ್.ಅಶೋಕ್ಕುಮಾರ್ ಇತರರಿದ್ದರು.
ಜಿಎಸ್ಟಿ ರದ್ದು ವಿಮೆ ಪ್ರತಿನಿಧಿಗಳು, ನೌಕರರ ಸಂಭ್ರಮಾಚರಣೆ
ಕನ್ನಡಪ್ರಭ ವಾರ್ತೆ ಮದ್ದೂರು
ಜೀವ ವಿಮೆ ಪಾಲಿಸಿಗಳ ಮೇಲೆ ಜಿಎಸ್ಟಿ ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಿಸಿದ ವಿಮೆ ಪ್ರತಿನಿಧಿಗಳು ಮತ್ತು ನೌಕರರು ಸೋಮವಾರ ಸಂಭ್ರಮಾಚರಣೆ ನಡೆಸಿದರು.
ಪಟ್ಟಣದ ಜೀವ ವಿಮೆ ಶಾಖೆ ಆವರಣದಲ್ಲಿ ಸೇರಿದ ಪ್ರತಿನಿಧಿಗಳಿಗೆ ಶಾಖೆ ಮುಖ್ಯ ಪ್ರಬಂಧಕ ಸಿ.ಎನ್.ರಾಜನ್ ಸಿಹಿ ಹಂಚುವ ಮೂಲಕ ಜಿಎಸ್ಟಿ ರದ್ದು ಮಾಡಿರುವ ಕ್ರಮ ಸ್ವಾಗತಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅಖಿಲ ಭಾರತ ಜೀವ ವಿಮೆ ಪ್ರತಿನಿಧಿಗಳ ಸಂಘಟನೆ ರಾಜ್ಯ ಖಜಾಂಚಿ ಸಿ.ಪ್ರದೀಪ್, ಕಳೆದ 11 ವರ್ಷಗಳಿಂದ ವಿಮಾಪಾಲಿಸಿಗಳ ಮೇಲೆ ಶೇ. 4.5ರಿಂದ 18 ಪರ್ಸೆಂಟ್ ಜಿಎಸ್ಟಿ ಹಾಕಲಾಗುತ್ತಿತ್ತು. ಇದರ ವಿರುದ್ಧ ನಮ್ಮ ಸಂಘಟನೆ ಎಲ್ಐಸಿ ಎಓಐ ಶಾಖೆ ಕಚೇರಿಯಿಂದ ಕೇಂದ್ರ ಕಚೇರಿವರೆಗೆ ಐಆರ್ಡಿಎ ಕಚೇರಿ ಮುಂದೆ, ದೆಹಲಿಯ ಜಂತರ್ ಮಂತರ್ನಲ್ಲಿ ಹಲವು ಹಂತದ ಹೋರಾಟಗಳನ್ನು ನಿರಂತರವಾಗಿ ಸಂಘಟಿಸಿ ಸಂಸತ್ ಸದಸ್ಯರಿಗೆ ಅನೇಕ ಬಾರಿ ಮನವಿ ನೀಡಲಾಗಿತ್ತು ಎಂದರು.
ಇಂದಿನಿಂದ ಎಲ್ಲಾ ವಿಮೆ ಪಾಲಿಸಿಗಳ ಮೇಲೆ ಜಿಎಸ್ಟಿಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಇನ್ನು ಹಲವು ಬೇಡಿಕೆಗಳ ಬಗ್ಗೆ ಸಂಘಟನೆ ಹೋರಾಟ ಮುನ್ನಡೆಸುತ್ತಿದೆ ಎಂದರು.
ಈ ವೇಳೆ ವಿಮೆ ಕಂಪನಿ ಮದ್ದೂರು ಶಾಖೆ ಅಧ್ಯಕ್ಷ ಸಿ.ಎಸ್.ವಾಸು, ಖಜಾಂಚಿ ಎಂ.ಪಿ.ಕೃಷ್ಣೇಗೌಡ, ಪದಾಧಿಕಾರಿಗಳಾದ ಆರ್.ವಿ.ಮುತ್ತುರಾಜ್, ಎಂ.ಎ.ರಾಮಲಿಂಗಯ್ಯ, ಸಿ.ಎನ್, ಧನ್ಪಾಲ್ ಶೆಟ್ಟಿ, ಚಂದ್ರಶೇಖರ್, ನಾಗರಾಜು, ಅಶೋಕ್, ನೇತ್ರಾವತಿ, ಎನ್.ಆರ್. ಪುಷ್ಪಲತಾ ಮುಂತಾದವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.