ಕುಮಟಾ: ಹವ್ಯಕ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಸಮಾಜಮುಖಿ ಚಿಂತನೆಯ, ಕ್ರಿಯಾಶೀಲ ವ್ಯಕ್ತಿತ್ವದ ದಿ. ಆರ್.ಎನ್. ಹೆಗಡೆ ಕೊಂತಲಮನೆಯವರ ಸಾರ್ಥಕ ಸೇವೆಗೆ ಅಭಿಮಾನದ ನುಡಿನಮನ ಸಲ್ಲಿಸುವ ಕಾರ್ಯಕ್ರಮ ತಾಲೂಕಿನ ಗೋಗ್ರೀನ್ ಸಭಾಭವನದಲ್ಲಿ ನಡೆಯಿತು.
ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ. ಭಟ್ಟ ಮಾತನಾಡಿ, ಆರ್.ಎನ್. ಹೆಗಡೆ ನಮ್ಮ ಜತೆಗೆ ಇಲ್ಲ ಎಂಬುದು, ನನಗೆ ಬೆನ್ನು ಮೂಳೆಯೇ ಮುರಿದ ಅನುಭವವಾಗಿದೆ. ನನ್ನ ಪ್ರತಿಯೊಂದೂ ಕಾರ್ಯದಲ್ಲಿ ಅವರು ಜತೆಗೆ ಇರುತ್ತಿದ್ದರು. ಹವ್ಯಕ ಸೇವಾ ಪ್ರತಿಷ್ಠಾನದ ಬಗ್ಗೆ ತುಡಿತವಿದ್ದ ಅವರು, ಹವ್ಯಕರಿಗಾಗಿ ನಾವು ಸೇವೆ ಮಾಡಬೇಕು ಎಂದು ಸದಾ ಕಾಲ ಚಿಂತನೆ ಮಾಡುತ್ತಿದ್ದರು ಎಂದರು.ಹವ್ಯಕ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ, ಕೊನೆಯ ಕ್ಷಣದವರೆಗೂ ಕ್ರಿಯಾಶೀಲವಾಗಿ ನಮ್ಮೊಂದಿಗೆ ಇದ್ದ ದಿ. ಆರ್.ಎನ್. ಹೆಗಡೆ ಈ ಹೊತ್ತು ನಮ್ಮೊಂದಿಗಿಲ್ಲ. ಹವ್ಯಕ ಸಂಘಟನೆಗಾಗಿ ಏನಾದರೂ ಮಾಡಬೇಕು ಎಂಬ ಅವರ ತುಡಿತ ಅನನ್ಯ ಎಂದರು.ಆರ್.ಎನ್. ಹೆಗಡೆ ಅವರ ಸ್ನೇಹ ವಲಯದಲ್ಲಿ ಗುರುತಿಸಿಕೊಂಡ ವಿ.ಡಿ. ಹೆಗಡೆ, ಗೋವಿಂದ ಭಟ್ಟ, ತಿಗಣೇಶ ಮಾಗೋಡ, ಕೃಷ್ಣಾನಂದ ಭಟ್ಟ, ಎಲ್.ಎ. ಭಟ್ಟ, ರಾಮ ಹೆಗಡೆ, ಗಿರೀಶ ಹೆಗಡೆ, ಗಣೇಶ ಜೋಶಿ ಸಂಕೊಳ್ಳಿ ಇತರರು ನುಡಿನಮನ ಸಲ್ಲಿಸುತ್ತಾ, ದಿ. ಆರ್.ಎನ್. ಹೆಗಡೆಯವರು ಹವ್ಯಕ ಸೇವಾ ಪ್ರತಿಷ್ಠಾನಕ್ಕೆ ಬಂದಾಗಿನಿಂದ ಸಂಘಟನೆ ವೇಗ ಪಡೆದುಕೊಂಡಿತು ಎಂದರು.
ದಿ. ಆರ್.ಎನ್. ಹೆಗಡೆಯವರ ಹೆಸರನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ವಾರ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುವ ಬಗ್ಗೆ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು. ಗೋವಿಂದ ಹೆಗಡೆ, ದಿನೇಶ ಹೆಗಡೆ, ಕೃಷ್ಣ ಹೆಗಡೆ, ಸುಬ್ರಾಯ ಶಾಸ್ತ್ರಿ, ಸದಾನಂದ ಭಟ್ಟ, ಈಶ್ವರ ಭಟ್ಟ, ಎಸ್.ಎ ಭಟ್ಟ, ಸತೀಶ ಭಟ್ಟ, ದಿನೇಶ ಹೆಗಡೆ ಇತರರು ಇದ್ದರು.