ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ರವೀಂದ್ರ ಜೈನ್‌ ದೇಶದ ಅತ್ಯುತ್ತಮ ಸಂಗೀತ ಕಲಾವಿದ: ಡಾ. ಚಾಂದಿನಿ

KannadaprabhaNewsNetwork | Published : Feb 4, 2024 1:31 AM

ಹುಟ್ಟು ಅಂಧ ಕಲಾವಿದರಾಗಿದ್ದರೂ ರವೀಂದ್ರ ಜೈನ್‌ ದೇಶಕಂಡ ಅತ್ಯುತ್ತಮ ಸಂಗೀತ ಸಂಯೋಜಕ, ಗೀತ ರಚನೆಕಾರ ಹಾಗೂ ಹಿನ್ನೆಲೆ ಗಾಯಕ ಎಂದು ನಗರದ ಐಡಿಎಸ್‌ಜಿ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಪಿ.ಚಾಂದಿನಿ ಹೇಳಿದರು.

- ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಪೂರ್ವಿ ಗಾನಯಾನ-97

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹುಟ್ಟು ಅಂಧ ಕಲಾವಿದರಾಗಿದ್ದರೂ ರವೀಂದ್ರ ಜೈನ್‌ ದೇಶಕಂಡ ಅತ್ಯುತ್ತಮ ಸಂಗೀತ ಸಂಯೋಜಕ, ಗೀತ ರಚನೆಕಾರ ಹಾಗೂ ಹಿನ್ನೆಲೆ ಗಾಯಕ ಎಂದು ನಗರದ ಐಡಿಎಸ್‌ಜಿ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಪಿ.ಚಾಂದಿನಿ ಹೇಳಿದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ಖ್ಯಾತ ಸಂಗೀತ ನಿರ್ದೇಶಕ ಪದ್ಮಶ್ರೀ ರವೀಂದ್ರಜೈನ್ ನೆನಪು ಕಾರ್ಯಕ್ರಮದಲ್ಲಿ ಪೂರ್ವಿ ಗಾನಯಾನ-97 ಉದ್ಘಾಟಿಸಿ ಮಾತನಾಡಿದರು. ರವೀಂದ್ರ ಜೈನ್‌ ಅವರು 1970 ರ ದಶಕದಲ್ಲಿ ಸಂಗೀತ ಸಂಯೋಜಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅನಂತರದಲ್ಲಿ ಅವರ ಉತ್ತುಂಗದ ಸಾಧನೆ ಹೇಗಿತ್ತೆಂದರೆ 2015 ರವರೆಗೂ ಅವರು ಹಿಂದೆ ತಿರುಗಿ ನೋಡಲೇ ಇಲ್ಲ. ಅವರು ಹಲವಾರು ಹಿಂದಿ ಚಲನ ಚಿತ್ರಗಳಿಗೆ ಗಮನಾರ್ಹವಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ರಮಾನಂದ ಸಾಗರ್‌ ಅವರ ರಾಮಾಯಣ ಧಾರಾವಾಹಿಗೂ ಸಂಗೀತ ನೀಡಿದ ಹೆಗ್ಗಳಿಕೆ ಇವರದು.

ಬಂಗಾಳಿ, ಮಲಯಾಳಂ ಮತ್ತಿತರ ಭಾಷೆಗಳಲ್ಲಿ ಧಾರ್ಮಿಕ ಆಲ್ಬಂಗಳನ್ನು ಕೂಡ ರಚಿಸಿದ್ದಾರೆ. ರಾಮ್‌ತೇರಿ ಗಂಗಾ ಮೈಲಿ ಚಿತ್ರಕ್ಕೆನೀಡಿದ ಕೊಡುಗೆಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಗಳಿಸಿದ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರದ್ಮಶ್ರೀಗೂ ಭಾಜನರಾಗಿದ್ದರು ಎಂದರು.

ಲಯನ್ಸ್ ಸಂಸ್ಥೆ ಹಿರಿಯ ಸ್ಥಾಪಕ, ಉದ್ಯಮಿ ಮುನೀರ್‌ ಅಹಮದ್ ಮಾತನಾಡಿ, ತಾವೂ ಕೂಡ ಸಂಗೀತ ಪ್ರಿಯರೆ. ತಮ್ಮತಂದೆ ಮೈಸೂರು ಮಹಾರಾಜರ ದರ್ಬಾರಿನಲ್ಲಿ ಸಂಗೀತ ಕಲಾವಿದರಾಗಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದೀಪಕ್‌ ದೊಡ್ಡಯ್ಯ ಮಾತನಾಡಿ, ಕಲಿಯುವ ಮನಸ್ಸಿಗೆ ಅಸಾಧ್ಯವೆನ್ನುವುದು ಯಾವುದೂ ಇಲ್ಲ ಎನ್ನುವುದು ಹುಟ್ಟು ಅಂಧರಾಗಿದ್ದ ರವೀಂದ್ರ ಜೈನ್‌ ಅವರ ಸಾಧನೆಯಿಂದ ರುಜುವಾತಾಗಿದೆ ಎಂದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತಿಸಿ, ಗಾಯಕ ರಾಯನಾಯಕ್ ವಂದಿಸಿದರು. ರೂಪಾ ನಾಯ್ಕ್‌ ಕಾರ್ಯಕ್ರಮ ನಿರೂಪಿಸಿದರು.

ಅನಂತರ ಎಂ.ಎಸ್.ಸುಧೀರ್, ರಾಯನಾಯಕ್, ದರ್ಶನ್, ಚೇತನ್‌ರಾಮ್, ಶ್ರೀಕಾಂತ್, ಕವಿತಾ ನಿಯತ್, ರೂಪಾ ಅಶ್ವಿನ್, ಅನುಷ, ಎಂ.ಪೂಜ್ಯ, ರುಕ್ಸಾನಕಾಚೂರ್, ಪ್ರಣಮ್ಯ, ಲಾಲಿತ್ಯ ಅಣ್ವೇಕರ್, ಪೃಥ್ವಿಶ್ರೀ ಅವರು ರವೀಂದ್ರ ಜೈನ್‌ ಅವರ ಅಪೂರ್ವ ಗೀತೆಗಳಿಗೆ ಧ್ವನಿಯಾಗಿ ರಂಜಿಸಿದರು.

2 ಕೆಸಿಕೆಎಂ 1

ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಿ ಗಾನಯಾನ-97 ಕಾರ್ಯಕ್ರಮವನ್ನು ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಪ್ರಾಚಾರ್ಯೆ ಡಾ.ಕೆ.ಪಿ. ಚಾಂದಿನಿ ಉದ್ಘಾಟಿಸಿದರು. ಸೈಯ್ಯದ್ ಮುನೀರ್‌ ಅಹಮ್ಮದ್, ದೀಪಕ್‌ ದೊಡ್ಡಯ್ಯ, ಎಂ.ಎಸ್.ಸುಧೀರ್, ರೂಪಾ ನಾಯ್ಕ್‌ಇದ್ದರು.