ರವೀಂದ್ರನಾಥ್‌ ಕ್ಷಮೆ ಕೇಳಲು ಸಿದ್ದೇಶ್ವರಗೆ ಒತ್ತಾಯ

KannadaprabhaNewsNetwork | Published : Oct 16, 2024 12:49 AM

ಸಾರಾಂಶ

ದಾವಣಗೆರೆಯಲ್ಲಿ ಮಂಗಳ‍ವಾರ ಬಿಜೆಪಿ ಯುವ ಮುಖಂಡರಾದ ಸಂತೋಷ ಪೈಲ್ವಾನ್, ರಾಜು ವೀರಣ್ಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ಕಟ್ಟುವಲ್ಲಿ ಅವಿರತ ಶ್ರಮಿಸಿದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ ಬಳಿ ಬಹಿರಂಗ ಕ್ಷಮೆ ಕೇಳಿ, ಪಕ್ಷವನ್ನು ಒಗ್ಗೂಡಿಸುವಂತೆ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್‌ಗೆ ಪಕ್ಷದ ಯುವ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಮುಖಂಡರಾದ ಸಂತೋಷ್ ಪೈಲ್ವಾನ್, ರಾಜು ವೀರಣ್ಣ ಅವರು, ಜಿಲ್ಲಾ ಬಿಜೆಪಿಯ ಭೀಷ್ಮ ರವೀಂದ್ರನಾಥರನ್ನು ಏಕವಚನದಲ್ಲಿ ಸಂಬೋಧಿಸಿದ ಜಿ.ಎಂ.ಸಿದ್ದೇಶ್ವರ ಮೊದಲು ಬಹಿರಂಗ ಕ್ಷಮೆ ಕೇಳಬೇಕು ಎಂದರು.

ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿದ ಹಿರಿಯರು ರವೀಂದ್ರನಾಥ. ರಾಜಕೀಯ ಲಾಭಕ್ಕಾಗಿ ದಾವಣಗೆರೆಗೆ ಬಂದ ಸಿದ್ದೇಶ್ವರ ಇಲ್ಲಿ ರವೀಂದ್ರನಾಥ ಸೇರಿದಂತೆ ಪಕ್ಷದ ಕಾರ್ಯಕರ್ತರನ್ನು ಬಳಸಿಕೊಂಡು ಬೆಳೆದರು. ಈಗ ಎಲ್ಲರನ್ನೂ ಅವಹೇಳನ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ.

ಸಿದ್ದೇಶ್ವರ ಜಿಲ್ಲೆಗೆ ಬಂದ ನಂತರವೇ ಪಕ್ಷದಲ್ಲಿ ಗುಂಪುಗಾರಿಕೆ ಶುರುವಾಯಿತು. ಆಗಿನಿಂದಲೇ ಪಕ್ಷವನ್ನು ಒಡೆಯುವ ಪ್ರಯತ್ನ ಮಾಡಿದರು. ತಾವು ಗಾಜಿನ ಮನೆಯಲ್ಲಿದ್ದುಕೊಂಡು, ಮತ್ತೊಬ್ಬರ ಮನೆಗೆ ಕಲ್ಲು ಒಗೆಯುವ ಕೆಲಸವನ್ನು ಸಿದ್ದೇಶ್ವರ ಮತ್ತು ಅವರ ಗುಂಪು ಮಾಡುತ್ತಿದೆ. ಇದನ್ನು ಕೈಬಿಟ್ಟು, ಮುಂಬರುವ ಚುನಾವಣೆಗಳಿಗೆ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ನಮ್ಮ ಪಕ್ಷ ಸೋತಿರಬಹುದು. ಆದರೆ ಕಾರ್ಯಕರ್ತರು ಎದೆಗುಂದಿಲ್ಲ. ಯಾವೊಬ್ಬ ಕಾರ್ಯಕರ್ತನ ಕೈಗಳೂ ಸೋತಿಲ್ಲ. ಮತ್ತೆ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಟಗೊಳಿಸುವ ಸಲುವಾಗಿ ನಾವೆಲ್ಲರೂ ಸೇರಿ, ಕೈಜೋಡಿಸೋಣ. ಎಲ್ಲರೂ ತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು. ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೂ ಪಕ್ಷವನ್ನು ಮುಂಬರುವ ಚುನಾವಣೆಗಳಿಗಾಗಿ ಬಲಿಷ್ಟಗೊಳಿಸೋಣ ಎಂದರು.

ಕೆಲವು ಹಿಂಬಾಲಕರ ವರ್ತನೆಯಿಂದ ಪಕ್ಷದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದವರಿಗೆ ತೀವ್ರ ಮುಜುಗರವಾಗುತ್ತದೆ. ಇನ್ನಾದರೂ ನಮ್ಮೆಲ್ಲಾ ಮುಖಂಡರು ಒಂದಾಗಬೇಕಿದೆ. ಈ ಮೂಲಕ ಮತ್ತೆ ದಾವಣಗೆರೆ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದನ್ನು ನಿರೂಪಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಶಕ್ತಿ, ಸಾಮರ್ಥ್ಯ ಏನೆಂಬುದನ್ನು ತೋರಿಸುವ ಕೆಲಸ ಮಾಡೋಣ ಎಂದು ಹೇಳಿದರು.

ಈ ವೇಳೆ ಪಕ್ಷದ ಯುವ ಮುಖಂಡರಾದ ಪ್ರವೀಣ ಜಾಧವ್, ಮಂಜುನಾಥ ಪೈಲ್ವಾನ್, ಕೆ.ಜಿ.ಸುರೇಶ, ನಿರಂಜನ, ಜಿ.ದಯಾನಂದ, ಜಯರುದ್ರಪ್ಪ, ಮಂಜುನಾಥ, ನಾಗರಾಜ, ಮಂಜುನಾಥ ಇತರರು ಇದ್ದರು.

Share this article