ಕನ್ನಡಪ್ರಭ ವಾರ್ತೆ ಯಾದಗಿರಿ
ಹಿರಿಯ ಶಿಕ್ಷಣ ತಜ್ಞ ನಾಗಭೂಷಣ್ ದೇವರಕಲ್ರವರ ನೇತೃತ್ವದಲ್ಲಿ 2008ರಲ್ಲಿ ಪ್ರತಿಷ್ಠಾಪಿಸಲಾದ ಈ ಸಂಸ್ಥೆಯು ಶೈಕ್ಷಣಿಕ ಚಟುವಟಿಕೆಗಳೊಂದಿಗೆ, ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ.
ದಶಕಗಳನ್ನು ಪೂರೈಸಿದ ಸಂಭ್ರಮದ ಜೊತೆಗೆ ಪ್ರತಿ ವರ್ಷ ವಾರ್ಷಿಕೋತ್ಸವ ಹಮ್ಮಿಕೊಂಡು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು ಹಲವು ಶೈಕ್ಷಣಿಕ ಚಟುವಟಿಕೆಗಳ ಮೂಲಕ ಮಕ್ಕಳನ್ನು ಸಾಧನೆ ಹಾದಿಗೆ ಹುರಿದುಂಬಿಸುವ ಪ್ರಯತ್ನ ಸಂಸ್ಥೆ ಮಾಡುತ್ತಿದೆ. ಫೆ.2, 3ರಂದು ಎರಡು ದಿನಗಳ ವಾರ್ಷಿಕೋತ್ಸವದ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು.ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳ ವಾರ್ಷಿಕ ಆಟೋಟಗಳಾದ ಕಬಡ್ಡಿ, ಕ್ರಿಕೆಟ್, ಥ್ರೋಬಾಲ್, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆ, ವಿಜ್ಞಾನ ವಸ್ತುಪ್ರದರ್ಶನ ಭಾಗವಹಿಸಿದ್ದ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಡಿಡಿಪಿಐ ಮಂಜುನಾಥ ಮಾತನಾಡಿ, ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆದರೆ ಮಾತ್ರ ಬುದ್ಧಿವಂತರು ಎಂದು ಭಾವಿಸದೆ ಮತ್ತು ಅಂಕಗಳಿಗಾಗಿಯೇ ಪ್ರೇರೇಪಿಸದೆ ಮಕ್ಕಳಲ್ಲಿರುವ ಕೌಶಲ್ಯವನ್ನು ಪೋಷಕರು ಗುರುತಿಸಿ, ಅವರಿಗೆ ಪೂರಕವಾಗುವಂತಹ ವಾತಾವರಣವನ್ನು ಕಲ್ಪಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗಿದೆ. ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳು ಇವುಗಳಿಗೆ ಬದ್ಧರಾಗಿರಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಕಮಲಾ ಎನ್. ದೇವರಕಲ್ ಅವರು ಮಾತನಾಡಿ, ಆರ್.ವಿ. ವಿದ್ಯಾ ಸಂಸ್ಥೆಯು ಯಾದಗಿರಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಆರಂಭಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿದೆ. ಮಕ್ಕಳಲ್ಲಿ ಶೈಕ್ಷಣಿಕ ಚಟುಚಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ, ಉತ್ತಮ ಫಲಿತಾಂಶವನ್ನು ತಂದುಕೊಡುವಲ್ಲಿ ಸಾಧ್ಯವಾಗಿದೆ. ಸಂಸ್ಥೆಯ ಈ ಯಶಸ್ಸಿಗೆ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಶಿಕ್ಷಕರನ್ನು ಅಭಿನಂದಿಸಿದರು. ಬರುವ ವರ್ಷಗಳಲ್ಲಿ ನೂತನ ಕೋರ್ಸ್ಗಳನ್ನು ತಂದು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಮತ್ತು ಅವರ ಸೇವೆಯನ್ನು ಮಾಡಲು ಸದಾ ಸಿದ್ಧರಿದ್ದೇವೆ ಎಂದು ವಿವರಿಸಿದರು.ವಾರ್ಷಿಕೋತ್ಸವದ ಸಮಾರಂಭದಲ್ಲಿ ಸಂಸ್ಥೆಯ ಖಜಾಂಚಿಗಳಾದ ಸುರೇಶ್ ನೀಲಂಗಿ, ಸದಸ್ಯರಾದ ಆನಂದಿ ವಿಶ್ವನಾಥನ್, ಲಕ್ಷ್ಮಣರಾವ್ ಅಮ್ಮೊನರಕರ್, ಬಸವರಾಜ ಮೊರಬ್ ಉಪಸ್ಥಿತರಿದ್ದರು.
ವೆಂಕಟೇಶ ಚವ್ಹಾಣ್ ಸ್ವಾಗತಿಸಿ, ಕೃಷ್ಣಾ ಗುಳೇದ್ ವಂದಿಸಿದರು. ಗೀತಾ ಹಿರೇಮಠ ಮತ್ತು ಕವಿತಾ ಹಿರೇಮಠ ನಿರೂಪಿಸಿದರು.